Home / ಕವನ / ಕವಿತೆ / ಕಸವೂ ನಕ್ಷತ್ರವೂ

ಕಸವೂ ನಕ್ಷತ್ರವೂ


ಬಯಲಿನಲಿ ಕೂತು
ಆಕಾಶಕ್ಕೆ ಕಣ್ಣು.
ಬೆಳ್ಳಂಬೆಳಗೇ ತಾರೆಗಳ ಹುಡುಕಿ
ಕಿತ್ತು ಪೋಣಿಸಿ
ಮಾಲೆ ಮಾಡುತ್ತ
ಮಡಿಲು ತುಂಬಿಕೊಳುವುದರಲೇ ಮಗ್ನ
ಈ ಬಯಲ ಬುದ್ಧ.


ಗುಡಿಸಿದ ರಾಶಿ ಬೀದಿ ಕಸ
ತನ್ನ ಪುಟ್ಟ ಬೊಗಸೆಗೆ ತುಂಬಿ
ದಿನವೂ ಪುಟ ಪುಟನೆ ಓಡಿ ಬಂದು
ಅವನ ಪಾದ ಬುಡಕ್ಕೆ ಸುರುವಿ
ತಾರೆಗಳ ಮಾಲೆ ಕಟ್ಟುತಾ
ಮೋಹಕ್ಕೆ ಬಿದ್ದವನ ಮೈತಡವಿ
ಎಬ್ಬಿಸಿ
ಇಹಕ್ಕೆ ಕಣ್ಬಿಡಿಸಿ
ಕಲ್ಲು ಹೂವು ಮುಳ್ಳು ಕಾಗದದ ಚೂರು…..
ಒಂದೊಂದೇ
ಅವಶೇಷ ಎತ್ತಿ ಹಿಡಿದು
ಪ್ರತಿ ಕಸದ ಇತಿಹಾಸ ವರ್ತಮಾನ
ಬಿಡಿ ಇಡಿಯಾಗಿ ಏರಿಳಿತದ ದನಿಯಲ್ಲೇ
ಕಥೆ ಬಿಡಿಸಿಡುತ್ತದೆ
ಈ ಬೀದಿ ಗುಡಿಸುವ ಜೀವ.


ಸಾಣೆಗೆ ಸಿಕ್ಕದ ಚೂಪುಗಲ್ಲು
ತುಳಿದು ಬಾಡಿಸಿದ ಹೂವು
ಚುಚ್ಚಲು ಕಾದಿರುವ ಮುಳ್ಳು
ಒಡೆದ ಬಳೆ ಚೂರು
ರಕ್ತದ ಕಲೆಯ ಬಟ್ಟೆ ಚಿಂದಿ
ಒಡೆದ ಭ್ರೂಣದ ಪಳೆಯುಳಿಕೆ…..
ಕಸದ ಮಣ್ಣಿನ ತುಂಬಾ ನೋವು.
ಅವನ ಪಾದಕ್ಕೆ ಕಸ ಸುರುವಿ
ಕಣ್ಣೀರಲೇ ಕೈ ತೊಳೆದರೂ
ಅವಳ ಪುಟ್ಟ ಬೊಗಸೆಯೊಂದು
ಸದಾ ಸುಡುವ ಕುಲುಮೆ.


ಅವನಿಗೆ ಕತೆ ಹೇಳುತ್ತಾ ಹೇಳುತ್ತಾ
ಕಸವಾಗಿಸಿದವರ ನಿರ್ದಯತೆಗೆ
ಕುದಿಯುತ್ತಾ ಸಿಡಿಯುತ್ತಾ
ಬಿಕ್ಕುತ್ತಾ ಉಮ್ಮಳಿಸಿ ಅಳುತ್ತಾಳೆ.


ಅವಳ ಮನ ನೇವರಿಸಿ ಸಂತೈಸುವ
ಬಯಲ ಬುದ್ಧ
ತಲೆನೇವರಿಸುತ್ತಾ
ಹೆಗಲ ಮೇಲಿನ ಚುಂಗಿನಲಿ
ಕಣ್ಣೀರೊರೆಸುತ್ತಾ
ಪ್ರತಿ ಕಸದ ಕಥೆಗೂ
ತಾನೇ ಅದಾಗಿ,
ಭವಿಷ್ಯ ನೂಲುತ್ತಾನೆ ಕರುಳ ನೂಲಿನಲಿ.


ಮುಟ್ಟುತ್ತಾ ಮುಟ್ಟುತ್ತಾ
ಕಸದ ಕಲ್ಲು ನಯವಾಗಿಸುತ್ತಾ
ಚೂಪು ಮುಳ್ಳಿನ ಮೊನೆ ಮುರಿಯುತ್ತಾ
ಬಳೆ ಚೂರು ಗುಂಡಗೆ ಅಂಟಿಸುತ್ತಾ….
ಈ ಬಯಲ ಬುದ್ಧ
ಮುರಿದ ಹೂವಿನ ದಳಗಳ
ದೇಟಿಗೆ ಜೋಡಿಸುತ್ತಾ… ಇರುತ್ತ.


ಇರುತ್ತಾ,
ಈ ಬೀದಿ ಗುಡಿಸುವ ಜೀವ
ಅವನ ಪಾದಕ್ಕೆ
ಕಸ ಸುರುವುತ್ತಾ
ಕತೆ ಹೇಳುತ್ತಾ
ಅವನ ತಾರೆಗಳ
ಮಡಿಲಿಗೆಳೆದುಕೊಂಡು
ತಾನೂ
ಮಾಲೆ ಕಟ್ಟುತ್ತಾಳೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...