Home / ಕವನ / ಕವಿತೆ / ಕಸವೂ ನಕ್ಷತ್ರವೂ

ಕಸವೂ ನಕ್ಷತ್ರವೂ


ಬಯಲಿನಲಿ ಕೂತು
ಆಕಾಶಕ್ಕೆ ಕಣ್ಣು.
ಬೆಳ್ಳಂಬೆಳಗೇ ತಾರೆಗಳ ಹುಡುಕಿ
ಕಿತ್ತು ಪೋಣಿಸಿ
ಮಾಲೆ ಮಾಡುತ್ತ
ಮಡಿಲು ತುಂಬಿಕೊಳುವುದರಲೇ ಮಗ್ನ
ಈ ಬಯಲ ಬುದ್ಧ.


ಗುಡಿಸಿದ ರಾಶಿ ಬೀದಿ ಕಸ
ತನ್ನ ಪುಟ್ಟ ಬೊಗಸೆಗೆ ತುಂಬಿ
ದಿನವೂ ಪುಟ ಪುಟನೆ ಓಡಿ ಬಂದು
ಅವನ ಪಾದ ಬುಡಕ್ಕೆ ಸುರುವಿ
ತಾರೆಗಳ ಮಾಲೆ ಕಟ್ಟುತಾ
ಮೋಹಕ್ಕೆ ಬಿದ್ದವನ ಮೈತಡವಿ
ಎಬ್ಬಿಸಿ
ಇಹಕ್ಕೆ ಕಣ್ಬಿಡಿಸಿ
ಕಲ್ಲು ಹೂವು ಮುಳ್ಳು ಕಾಗದದ ಚೂರು…..
ಒಂದೊಂದೇ
ಅವಶೇಷ ಎತ್ತಿ ಹಿಡಿದು
ಪ್ರತಿ ಕಸದ ಇತಿಹಾಸ ವರ್ತಮಾನ
ಬಿಡಿ ಇಡಿಯಾಗಿ ಏರಿಳಿತದ ದನಿಯಲ್ಲೇ
ಕಥೆ ಬಿಡಿಸಿಡುತ್ತದೆ
ಈ ಬೀದಿ ಗುಡಿಸುವ ಜೀವ.


ಸಾಣೆಗೆ ಸಿಕ್ಕದ ಚೂಪುಗಲ್ಲು
ತುಳಿದು ಬಾಡಿಸಿದ ಹೂವು
ಚುಚ್ಚಲು ಕಾದಿರುವ ಮುಳ್ಳು
ಒಡೆದ ಬಳೆ ಚೂರು
ರಕ್ತದ ಕಲೆಯ ಬಟ್ಟೆ ಚಿಂದಿ
ಒಡೆದ ಭ್ರೂಣದ ಪಳೆಯುಳಿಕೆ…..
ಕಸದ ಮಣ್ಣಿನ ತುಂಬಾ ನೋವು.
ಅವನ ಪಾದಕ್ಕೆ ಕಸ ಸುರುವಿ
ಕಣ್ಣೀರಲೇ ಕೈ ತೊಳೆದರೂ
ಅವಳ ಪುಟ್ಟ ಬೊಗಸೆಯೊಂದು
ಸದಾ ಸುಡುವ ಕುಲುಮೆ.


ಅವನಿಗೆ ಕತೆ ಹೇಳುತ್ತಾ ಹೇಳುತ್ತಾ
ಕಸವಾಗಿಸಿದವರ ನಿರ್ದಯತೆಗೆ
ಕುದಿಯುತ್ತಾ ಸಿಡಿಯುತ್ತಾ
ಬಿಕ್ಕುತ್ತಾ ಉಮ್ಮಳಿಸಿ ಅಳುತ್ತಾಳೆ.


ಅವಳ ಮನ ನೇವರಿಸಿ ಸಂತೈಸುವ
ಬಯಲ ಬುದ್ಧ
ತಲೆನೇವರಿಸುತ್ತಾ
ಹೆಗಲ ಮೇಲಿನ ಚುಂಗಿನಲಿ
ಕಣ್ಣೀರೊರೆಸುತ್ತಾ
ಪ್ರತಿ ಕಸದ ಕಥೆಗೂ
ತಾನೇ ಅದಾಗಿ,
ಭವಿಷ್ಯ ನೂಲುತ್ತಾನೆ ಕರುಳ ನೂಲಿನಲಿ.


ಮುಟ್ಟುತ್ತಾ ಮುಟ್ಟುತ್ತಾ
ಕಸದ ಕಲ್ಲು ನಯವಾಗಿಸುತ್ತಾ
ಚೂಪು ಮುಳ್ಳಿನ ಮೊನೆ ಮುರಿಯುತ್ತಾ
ಬಳೆ ಚೂರು ಗುಂಡಗೆ ಅಂಟಿಸುತ್ತಾ….
ಈ ಬಯಲ ಬುದ್ಧ
ಮುರಿದ ಹೂವಿನ ದಳಗಳ
ದೇಟಿಗೆ ಜೋಡಿಸುತ್ತಾ… ಇರುತ್ತ.


ಇರುತ್ತಾ,
ಈ ಬೀದಿ ಗುಡಿಸುವ ಜೀವ
ಅವನ ಪಾದಕ್ಕೆ
ಕಸ ಸುರುವುತ್ತಾ
ಕತೆ ಹೇಳುತ್ತಾ
ಅವನ ತಾರೆಗಳ
ಮಡಿಲಿಗೆಳೆದುಕೊಂಡು
ತಾನೂ
ಮಾಲೆ ಕಟ್ಟುತ್ತಾಳೆ!
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...