Home / ಕವನ / ಕವಿತೆ / ಹುಡುಕಾಟ

ಹುಡುಕಾಟ

ಯಾಕೆ ಹುಡುಕಬೇಕು ಹೇಳು ಗೆಳತಿ,
ಶಾಪಗ್ರಸ್ತರಾಗಿ ಕಲ್ಲಾಗಿ ಮಲಗಿದವರ
ಬೆಂಕಿಯಲಿ ಹಾರಿದವರ, ಭೂಮಿಯಲ್ಲಿ ಸೇರಿದವರ,
ಚುಕ್ಕಿಯಾಗಿ ಬಾನಲ್ಲಿ ಲೀನವಾದವರ?
ಯಾಕೆ ಹುಡುಕಬೇಕು ಹೇಳು, ನಮ್ಮಾದರ್ಶಗಳ ಅವರಲಿ
ರಾಮರಾವಣರಿಲ್ಲದ, ಕೃಷ್ಣ ಧರ್ಮರಾಯರಿಲ್ಲದ
ಈ ಕಲಿಯುಗದಲಿ?
ಪತಿಯ ಶಾಪಕ್ಕೊಳಗಾಗಿ
ರಾಮನ ಕಾಲಸ್ಪರ್ಶಕೆ ಕಾದು ಕಲ್ಲಾಗಿ ಮಲಗುವ
ಅಹಲ್ಯೆಯರು ನಾವಲ್ಲ;
ಕೈ ಹಿಡಿದವ ಶಂಕಿಸಿದನೆಂದು
ಕಾಡಿಗೆ ಹೋಗುವ ಬೆಂಕಿಗೆ ಹಾರುವ
ಸೀತೆಯರು ನಾವಲ್ಲ;
ಪತಿಯೇ ಪರದೈವವೆಂದು ತನ್ನತನವ ಮರೆತು
ಅವನ ನೆರಳಾಗಿ ಬಾಳುವ
ಅಳಿದ ಮೇಲೆ ನಕ್ಷತ್ರವಾಗಿ ಬಾನಲ್ಲಿ ಮೆರೆಯುವ
ಋಷಿ ಪತ್ನಿಯರೂ ನಾವಲ್ಲ;
ಕುರುಡು ಪತಿಗೆ ಒಡನಾಡಿಯೆಂದು
ಕೃತಕ ಕುರುಡುತನಕ್ಕೊಳಗಾಗಿ ನೂರು ಮಕ್ಕಳ ಹಡೆದು
ಅವರ ದುರ್ಯೋಧನ ದುಶ್ಯಾಸನರಾಗ ಬಿಡುವ
ಗಾಂಧಾರಿಯರು ನಾವಲ್ಲ;
ಕೈಹಿಡಿದವನಿಂದ ಸಂತಾನವಿಲ್ಲವೆಂದು
ದೇವತೆಗಳ ಮೊರೆಹೋಗಿ ಪುತ್ರೋತ್ಸವ ನಡೆಸುವ
ಕುಂತಿ ಮಾದ್ರಿಯರೂ ನಾವಲ್ಲ;
ಹಂಚಿ ತಿನಬೇಕೆಂಬ ತಾಯಿಮಾತ ದಿಟ ಮಾಡ ಹೊರಟು
ಪಂಚ ಪಾಂಡವರ ಸತಿಯಾಗಿ
ಹೃದಯದೊಳಗಿನ ಪ್ರೇಮಗೀತೆಗೆ ತಿಲಾಂಜಲಿ ಇತ್ತ
ಪಾಂಚಾಲಿಯರೂ ನಾವಲ್ಲ.
ಅವರೆಲ್ಲ ವಾಲ್ಮೀಕಿ ಕುಮಾರವ್ಯಾಸರ
ಲೇಖನಿಯಿಂದ ಹುಟ್ಟಿ ಬಂದವರು, ಕಲ್ಪನೆಯ ಕೂಸುಗಳು
ಅಲ್ಲಲ್ಲಿ ಕಥೆಯಲ್ಲಿ ಸೇರಿ ಹೋದವರು!
ಮತ್ತೇಕೆ ಹುಡುಕಬೇಕು ಹೇಳು ಗೆಳತಿ
ನಮ್ಮಾದರ್ಶಗಳ ಅವರಲ್ಲಿ
ಅವರಾತ್ಮ ಅಂತರಾಳದಲಿ ಅಡಗಿದ್ದ
ಅಂತಃಶಕ್ತಿಯ ಮರೆತು ಕುಳಿತವರಲ್ಲಿ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...