Home / ಕವನ / ಕವಿತೆ / ಹುಡುಕಾಟ

ಹುಡುಕಾಟ

ಯಾಕೆ ಹುಡುಕಬೇಕು ಹೇಳು ಗೆಳತಿ,
ಶಾಪಗ್ರಸ್ತರಾಗಿ ಕಲ್ಲಾಗಿ ಮಲಗಿದವರ
ಬೆಂಕಿಯಲಿ ಹಾರಿದವರ, ಭೂಮಿಯಲ್ಲಿ ಸೇರಿದವರ,
ಚುಕ್ಕಿಯಾಗಿ ಬಾನಲ್ಲಿ ಲೀನವಾದವರ?
ಯಾಕೆ ಹುಡುಕಬೇಕು ಹೇಳು, ನಮ್ಮಾದರ್ಶಗಳ ಅವರಲಿ
ರಾಮರಾವಣರಿಲ್ಲದ, ಕೃಷ್ಣ ಧರ್ಮರಾಯರಿಲ್ಲದ
ಈ ಕಲಿಯುಗದಲಿ?
ಪತಿಯ ಶಾಪಕ್ಕೊಳಗಾಗಿ
ರಾಮನ ಕಾಲಸ್ಪರ್ಶಕೆ ಕಾದು ಕಲ್ಲಾಗಿ ಮಲಗುವ
ಅಹಲ್ಯೆಯರು ನಾವಲ್ಲ;
ಕೈ ಹಿಡಿದವ ಶಂಕಿಸಿದನೆಂದು
ಕಾಡಿಗೆ ಹೋಗುವ ಬೆಂಕಿಗೆ ಹಾರುವ
ಸೀತೆಯರು ನಾವಲ್ಲ;
ಪತಿಯೇ ಪರದೈವವೆಂದು ತನ್ನತನವ ಮರೆತು
ಅವನ ನೆರಳಾಗಿ ಬಾಳುವ
ಅಳಿದ ಮೇಲೆ ನಕ್ಷತ್ರವಾಗಿ ಬಾನಲ್ಲಿ ಮೆರೆಯುವ
ಋಷಿ ಪತ್ನಿಯರೂ ನಾವಲ್ಲ;
ಕುರುಡು ಪತಿಗೆ ಒಡನಾಡಿಯೆಂದು
ಕೃತಕ ಕುರುಡುತನಕ್ಕೊಳಗಾಗಿ ನೂರು ಮಕ್ಕಳ ಹಡೆದು
ಅವರ ದುರ್ಯೋಧನ ದುಶ್ಯಾಸನರಾಗ ಬಿಡುವ
ಗಾಂಧಾರಿಯರು ನಾವಲ್ಲ;
ಕೈಹಿಡಿದವನಿಂದ ಸಂತಾನವಿಲ್ಲವೆಂದು
ದೇವತೆಗಳ ಮೊರೆಹೋಗಿ ಪುತ್ರೋತ್ಸವ ನಡೆಸುವ
ಕುಂತಿ ಮಾದ್ರಿಯರೂ ನಾವಲ್ಲ;
ಹಂಚಿ ತಿನಬೇಕೆಂಬ ತಾಯಿಮಾತ ದಿಟ ಮಾಡ ಹೊರಟು
ಪಂಚ ಪಾಂಡವರ ಸತಿಯಾಗಿ
ಹೃದಯದೊಳಗಿನ ಪ್ರೇಮಗೀತೆಗೆ ತಿಲಾಂಜಲಿ ಇತ್ತ
ಪಾಂಚಾಲಿಯರೂ ನಾವಲ್ಲ.
ಅವರೆಲ್ಲ ವಾಲ್ಮೀಕಿ ಕುಮಾರವ್ಯಾಸರ
ಲೇಖನಿಯಿಂದ ಹುಟ್ಟಿ ಬಂದವರು, ಕಲ್ಪನೆಯ ಕೂಸುಗಳು
ಅಲ್ಲಲ್ಲಿ ಕಥೆಯಲ್ಲಿ ಸೇರಿ ಹೋದವರು!
ಮತ್ತೇಕೆ ಹುಡುಕಬೇಕು ಹೇಳು ಗೆಳತಿ
ನಮ್ಮಾದರ್ಶಗಳ ಅವರಲ್ಲಿ
ಅವರಾತ್ಮ ಅಂತರಾಳದಲಿ ಅಡಗಿದ್ದ
ಅಂತಃಶಕ್ತಿಯ ಮರೆತು ಕುಳಿತವರಲ್ಲಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...