Home / ಕವನ / ಕವಿತೆ / ಅವ್ವನ ಸಂಸ್ಕೃತಿ

ಅವ್ವನ ಸಂಸ್ಕೃತಿ

ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು
ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ.
ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ
ಶತಶತಮಾನಗಳ ತಂಪು ತಗುಲಿ ತಂಗಾಳಿ
ತಣ್ಣಗಾಗುತ್ತ ಭೂಮಿಯಾದಳು ಅಮ್ಮ
ಬೆಳೆಸಿದಳು ಮಹಾ ವೃಕ್ಷಗಳ ಅವಳು
ಬೇರು ಬಿಡಿಸಿದಳು ಒಡಲಲ್ಲಿ
ಲೋಕಕ್ಕೆ ತಂಪು ನೀಡಿದಳು
ಗುಡ್ಡಗಾಡುಗಳಲ್ಲಿ ಬುಡಕಟ್ಟುಗಳ ನೆಲೆ
ಪೋಷಿಸಿದಳು ತಂಪೆರೆದಳು ಅವಳು
ಜೀರುಂಡೆಗಳ ಝೇಂಕಾರ ಕೇಳುತ್ತ
ಹಲಸು ಕಿತ್ತಳೆ ಮಾಮರಗಳ ಬೆಳೆಸಿದಳು
ಋತುಮನಗಳ ಪರಿಮಳ ಸೂಸಿದಳು
ಒಣಗಿದೆಲೆಗಳ ಕೊಳೆತ ವಾಸನೆಯಲ್ಲಿ
ನಾಗರೀಕತೆಗಳ ಸುಳಿವಿಲ್ಲ
ಅಮ್ಮನ ಶಾಂತ ಸೆರಗು ಮಾತ್ರ
ದೂರದೂರದ ತನಕ ಹಬ್ಬಿದ ಶಾಂತತೆ
ಹುಲ್ಲು ಹಾಸಿನ ಮೇಲೆ ಅವ್ವನ ಸರಳ ಮುಗ್ಧತೆ
ಬಣ್ಣಬಣ್ಣದಲಿ ಕಣ್ಣು ಮಿಟುಕಿಸುವ ಕಮನಬಿಲ್ಲು
ನೆರಳು ನೀಡಲಾರದು ಭೂತಾಯಿ ಒಡಲಿಗೆ
ಮೋಡಗಳ ನೆರಳು ಬೆಳಕಿನಾಟ ಮಧ್ಯಾಹ್ನ
ಅಮ್ಮನ ಏಕಾಕಿತನಗಳಿಗೆ ತಿವಿಯುವ ಖಾಲಿತನವಿಲ್ಲ
ಬೇಸರವಿಲ್ಲ ಬೆಟ್ಟಕ್ಕೆ ಎಂದಿಗೂ ಕಾಲ ಹೊರೆಯಾಗಿಲ್ಲ
ಒಂದೇ ತರಹದ ಏಕತಾನತೆಯ ಚಿಂತೆ ಅವಳಿಗಿಲ್ಲ
ಅವಳು ಹೆತ್ತು ಹೊತ್ತ ಗರ್ಭದ ಹೊಕ್ಕಳಬಳ್ಳಿ
ಅನನ್ಯ ತಲಸ್ಪರ್ಶಿ ತಾಯ್ತನದ ಮುಖಕಾಂತಿ,
ಅಮ್ಮ ತಟ್ಟಿದ ರೊಟ್ಟಿ ಸುಡುವ ಹೆಂಚಿನ ತಳದಲ್ಲಿ
ಮಿಂಚು ಬಳ್ಳಿಯ ಸರಿದಾಟ, ಕಣ್ಣಮುಚ್ಚಾಲೆ
ಉರಿವ ಕಟ್ಟಿಗೆಯ ಬಿಸಿ ತುಂಬಿದ ಸುವಾಸನೆ
ಆಪ್ತ ದೀಪದ ಬುಡ್ಡಿಯ ಮಂದ ಬೆಳಕು,
ಚಿತ್ರಿಸುವ ತರತರದ ನೆರಳ ಚಿತ್ತಾರಗಳು
ನೋವು ಸಂಕಟಗಳ ಮದ್ಯ ಮಿನುಗಿ
ಲಯವಾದ ಸೂರ್ಯ ಕಿರಣಗಳನ್ನು
ಮುತ್ತಿಟ್ಟು ಋತುಗಳ ಅಪ್ಪುಗೆಯಲ್ಲಿ
ಪ್ರಕೃತಿ ಮಲಗಿತ್ತು ಸುಖ ನಿದ್ರೆಯಲ್ಲಿ
ಅಮ್ಮನ ಮೆಚ್ಚಗಿನ ಮೃದು ಹಚ್ಚಡವ ಹೊದ್ದು
ಒಲೆಯಲ್ಲಿನ ನಿಗಿನಿಗಿಸುವ ಬೆಂಕಿ ಕೆಂಡದಲ್ಲಿ
ಅಮ್ಮನ ನೋವಿನ ನೆಲೆಗಳ ಪ್ರತಿಫಲನವಿತ್ತು
ದೈತ್ಯ ನಿಸರ್ಗದ ನಿಡಿದಾದ ಟೊಂಗೆಗಳಲ್ಲಿ
ಅಮ್ಮನ ಪ್ರೀತಿಯ ಜೀವಜಾಲವಿತ್ತು
ಬೆಟ್ಟದ ನಿಶ್ಚಲ ಕಲ್ಲು ಮಣ್ಣುಗಳಲ್ಲಿ
ಧರ್ಮದರ್ಶಿಗಳ ನೆರಳಿತ್ತು
ಶತಶತಮಾನಗಳಿಂದ ಗಟ್ಟಿಯಾಗಿ ನಿಂತ
ಧೃಢಚಿತ್ತದ ಬೆಟ್ಟದ ಕಲ್ಲುಗಳಲ್ಲಿ
ಅಮ್ಮ ಕಟ್ಟಿದ ಬುಡಕಟ್ಟುಗಳಿದ್ದವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...