Home / ಕವನ / ಕವಿತೆ / ಅವ್ವನ ಸಂಸ್ಕೃತಿ

ಅವ್ವನ ಸಂಸ್ಕೃತಿ

ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು
ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ.
ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ
ಶತಶತಮಾನಗಳ ತಂಪು ತಗುಲಿ ತಂಗಾಳಿ
ತಣ್ಣಗಾಗುತ್ತ ಭೂಮಿಯಾದಳು ಅಮ್ಮ
ಬೆಳೆಸಿದಳು ಮಹಾ ವೃಕ್ಷಗಳ ಅವಳು
ಬೇರು ಬಿಡಿಸಿದಳು ಒಡಲಲ್ಲಿ
ಲೋಕಕ್ಕೆ ತಂಪು ನೀಡಿದಳು
ಗುಡ್ಡಗಾಡುಗಳಲ್ಲಿ ಬುಡಕಟ್ಟುಗಳ ನೆಲೆ
ಪೋಷಿಸಿದಳು ತಂಪೆರೆದಳು ಅವಳು
ಜೀರುಂಡೆಗಳ ಝೇಂಕಾರ ಕೇಳುತ್ತ
ಹಲಸು ಕಿತ್ತಳೆ ಮಾಮರಗಳ ಬೆಳೆಸಿದಳು
ಋತುಮನಗಳ ಪರಿಮಳ ಸೂಸಿದಳು
ಒಣಗಿದೆಲೆಗಳ ಕೊಳೆತ ವಾಸನೆಯಲ್ಲಿ
ನಾಗರೀಕತೆಗಳ ಸುಳಿವಿಲ್ಲ
ಅಮ್ಮನ ಶಾಂತ ಸೆರಗು ಮಾತ್ರ
ದೂರದೂರದ ತನಕ ಹಬ್ಬಿದ ಶಾಂತತೆ
ಹುಲ್ಲು ಹಾಸಿನ ಮೇಲೆ ಅವ್ವನ ಸರಳ ಮುಗ್ಧತೆ
ಬಣ್ಣಬಣ್ಣದಲಿ ಕಣ್ಣು ಮಿಟುಕಿಸುವ ಕಮನಬಿಲ್ಲು
ನೆರಳು ನೀಡಲಾರದು ಭೂತಾಯಿ ಒಡಲಿಗೆ
ಮೋಡಗಳ ನೆರಳು ಬೆಳಕಿನಾಟ ಮಧ್ಯಾಹ್ನ
ಅಮ್ಮನ ಏಕಾಕಿತನಗಳಿಗೆ ತಿವಿಯುವ ಖಾಲಿತನವಿಲ್ಲ
ಬೇಸರವಿಲ್ಲ ಬೆಟ್ಟಕ್ಕೆ ಎಂದಿಗೂ ಕಾಲ ಹೊರೆಯಾಗಿಲ್ಲ
ಒಂದೇ ತರಹದ ಏಕತಾನತೆಯ ಚಿಂತೆ ಅವಳಿಗಿಲ್ಲ
ಅವಳು ಹೆತ್ತು ಹೊತ್ತ ಗರ್ಭದ ಹೊಕ್ಕಳಬಳ್ಳಿ
ಅನನ್ಯ ತಲಸ್ಪರ್ಶಿ ತಾಯ್ತನದ ಮುಖಕಾಂತಿ,
ಅಮ್ಮ ತಟ್ಟಿದ ರೊಟ್ಟಿ ಸುಡುವ ಹೆಂಚಿನ ತಳದಲ್ಲಿ
ಮಿಂಚು ಬಳ್ಳಿಯ ಸರಿದಾಟ, ಕಣ್ಣಮುಚ್ಚಾಲೆ
ಉರಿವ ಕಟ್ಟಿಗೆಯ ಬಿಸಿ ತುಂಬಿದ ಸುವಾಸನೆ
ಆಪ್ತ ದೀಪದ ಬುಡ್ಡಿಯ ಮಂದ ಬೆಳಕು,
ಚಿತ್ರಿಸುವ ತರತರದ ನೆರಳ ಚಿತ್ತಾರಗಳು
ನೋವು ಸಂಕಟಗಳ ಮದ್ಯ ಮಿನುಗಿ
ಲಯವಾದ ಸೂರ್ಯ ಕಿರಣಗಳನ್ನು
ಮುತ್ತಿಟ್ಟು ಋತುಗಳ ಅಪ್ಪುಗೆಯಲ್ಲಿ
ಪ್ರಕೃತಿ ಮಲಗಿತ್ತು ಸುಖ ನಿದ್ರೆಯಲ್ಲಿ
ಅಮ್ಮನ ಮೆಚ್ಚಗಿನ ಮೃದು ಹಚ್ಚಡವ ಹೊದ್ದು
ಒಲೆಯಲ್ಲಿನ ನಿಗಿನಿಗಿಸುವ ಬೆಂಕಿ ಕೆಂಡದಲ್ಲಿ
ಅಮ್ಮನ ನೋವಿನ ನೆಲೆಗಳ ಪ್ರತಿಫಲನವಿತ್ತು
ದೈತ್ಯ ನಿಸರ್ಗದ ನಿಡಿದಾದ ಟೊಂಗೆಗಳಲ್ಲಿ
ಅಮ್ಮನ ಪ್ರೀತಿಯ ಜೀವಜಾಲವಿತ್ತು
ಬೆಟ್ಟದ ನಿಶ್ಚಲ ಕಲ್ಲು ಮಣ್ಣುಗಳಲ್ಲಿ
ಧರ್ಮದರ್ಶಿಗಳ ನೆರಳಿತ್ತು
ಶತಶತಮಾನಗಳಿಂದ ಗಟ್ಟಿಯಾಗಿ ನಿಂತ
ಧೃಢಚಿತ್ತದ ಬೆಟ್ಟದ ಕಲ್ಲುಗಳಲ್ಲಿ
ಅಮ್ಮ ಕಟ್ಟಿದ ಬುಡಕಟ್ಟುಗಳಿದ್ದವು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...