ಕವಿ

ಸೌಂದರ್‍ಯಸರಸಿಯೊಳು ಕವನೀಯ ಸುಕುಮಾರ
ಸಿರಿರಾಜಹಂಸವಾಗಿ
ಇಂದು ಮೂಜಗ ಮೀರಿ ಅವರ ಗದ್ದುಗೆ ಏರಿ
ಆಳ್ವ ಅಧಿಕಾರಿಯಾಗಿ

ಋತುರಾಜ ನವತರುಣ ಮಧುವನದ ಅಭಿರಾಮ
ಮೃದು ಮಂದವಾಯುವಾಗಿ
ಅತಿರೂಪಲಾವಣ್ಯ ಅರೆದೆರೆದು ಬಿರಿಬಿರಿದ
ಅರಳು ಹೂದುಂಬಿಯಾಗಿ

ಸುರಗಂಗೆ ತೆರೆಯಾಗಿ ಕೊಚ್ಚಿಕೊಳ್ಳುವೆ ಪಾಪ
ಹರಿದು ಪಾತಾಳ ಮುಟ್ಟಿ
ಮೆರೆವ ಕವಿಕುಲಕುಮುದ ಗರ್‍ಭಸ್ಥ ನಿತ್ಯಸುಧೆ
ಸುರಿಸುರಿಸಿ ಧಾರಿಗಟ್ಟಿ

ಮಕರಂದ ಶರಸೂರೆಯಾಗಿರುವ ಮೃದುಮೃದುಲ
ಕುಸುಮ ನಲಿನಲಿಯುವಲ್ಲಿ
ಸುಕುಮಾರ ಒಳ್ಳಿಮಂಟಪದಲ್ಲಿ ಅಡಗಿ ಮೈ
ಮರೆವೆನಾನಂದದಲ್ಲಿ

ಮನ್ಮನ ಮಹಾಸಿಂಧು ತಳತನಕ ಮುಳುಗುವೆನು
ಮುತ್ತುರತ್ನಂಗಳಲ್ಲಿ
ಜನ್ಮ ಜನ್ಮದ ವಿಪುಲ ಭೋಗಭಾಂಡಾರವನು
ಒಡೆಯುವೆನು ಯೋಗದಲ್ಲಿ

ರವಿಯ ರಥವನ್ನೇರಿ ವಿಶ್ವಭ್ರಮಣವ ಮಾಡಿ
ನಗುವೆನಾ ಆಡಿ ಹಾಡಿ
ಸವಿಸುಖದ ಕಲ್ಪನಾಕಾಶದೊಳು ಹಾರುವೆನು
ಮೋಡಗಳ ಜೋಡಿಗೂಡಿ

ಸುರಸ್ವರ್‍ಗಲೋಕದಾ ಅವರದೂತನು ನಾನು
ನನಗಿಲ್ಲ ಆಹುದು ಬಹುದು
ತಿರುಕರಲಿ ತಿರುಗಿದರು ರಾಜರ್‍ಷಿ ಬ್ರಹ್ಮರ್‍ಷಿ
ದೇವರ್‍ಷಿ ನಾನೆ ಹೌದು

ಚಿರಗಾನ ಲಹರಿಯಲಿ ಸಿರಿಬೆಡಗ ಬೆರಸುತಲಿ
ಬೆಳಸುವೆನು ಭಾವವನ್ನು
ಅರಿಯಲಾರದ ಗೂಢ ಗೀತೆಯಲ್ಲಿ ಹಾಡುವೆನು
ಭುವನದಲ್ಲಿ ಸ್ವರ್‍ಗವನ್ನು

ಝರಿಯಲ್ಲಿ ಬೆರೆಯುವೆನು ಸೇರುವೆನು ಹೂವಿನಲಿ
ನಲಿನಲಿದು ಬಾಳುತಿರುವೆ
ಬರಿಬಯಲಿನಾಕಾಶದುಡಿಯಲ್ಲಿ ಹೊಡಕರಿಸಿ
ಹಕ್ಕಿಯೊಲು ಹಾಡುತಿರುವೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...