Home / ಕವನ / ಕವಿತೆ / ಸೃಷ್ಟಿಕರ್‍ತ

ಸೃಷ್ಟಿಕರ್‍ತ

ಸದಾ ಉತ್ಸವ ಜಗದೊಳಗೆ-
ಉಳುವ, ಬಿತ್ತುವ, ಟಿಸಿಲೊಡೆಯುವ
ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ!
ಹಸಿರು ತೋರಣ, ಋತುಗಳ ಮೆರವಣಿಗೆ,
ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ,
ಸೂರ್‍ಯನ ಬಿಸಿ, ಚಂದಿರನ ತಂಪು
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಭಾವಗಳ ರಂಗು ಹೃದಯದ ಒಸರಲ್ಲಿ
ಹೊಂಬಣ್ಣದ ತೆನೆ ಹಸಿರಿನ ಬಸಿರಲ್ಲಿ
ಬಣ್ಣಗಳ ಮೇಳ ಧರಣಿಯ ಉಸಿರಲ್ಲಿ
ಧರಿತ್ರಿಗೆ ಕಿರೀಟಗಳು ಹಿಮಚ್ಛಾದಿತ ಪರ್ವತಶ್ರೇಣಿಗಳು
ಏರದೆಗೆ ಪೀಠಗಳು ಗುಡ್ಡ ಬೆಟ್ಟಗಳು
ಜೀವಚರಗಳಿಗೆ ಜೀವಸೆಲೆ ಜಲಪಾತ, ಝರಿಗಳು.
ಜೀವಜಲಕೆ ಒಸರು ನದಿ, ಕೆರೆ, ಸರೋವರಗಳು!
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಪ್ರಥ್ವಿಯ ಜತೆಗೆ ಸಾಗರವನ್ನಿಟ್ಟೆ
ಕಂಬಗಳಿಲ್ಲದೆ ಬಾನಿನ ಚಪ್ಪರ ಹಾಕಿಯೇ ಬಿಟ್ಟೆ
ಭೂಮಿಯ ಮೇಲೆ ಪಶುಪಕ್ಷಿ ಪ್ರಾಣಿಗಳ ಓಡಾಡಬಿಟ್ಟೆ,
ಮನುಷ್ಯರ ಸೃಷ್ಟಿಸಿ ಭಾವಗಳ ರಂಗನು ತುಂಬಿ ಆಳಲು ಬಿಟ್ಟೆ
ಸಾಗರದೊಳಗೆ ಬಣ್ಣ ಬಣ್ಣದ ಜಲಚರಗಳ ತೇಲಿಸಿಬಿಟ್ಟೆ
ಪುಟ್ಟ, ಚಿಟ್ಟೆಗಳ ಬಣ್ಣದಲ್ಲದ್ದಿ ಮೆರೆಯಲು ಬಿಟ್ಟೆ.
ಎಲ್ಲವೂ ನಿನ್ನಯ ಸೃಷ್ಟಿ. ಆದರೂ ಬೇರೆ ಬೇರೆ.
ಒಂದರ ಹಾಗೆ ಇನ್ನೊಂದಿಲ್ಲ.
ಒಂದರ ಬಣ್ಣ ಇನ್ನೊಂದಕ್ಕಿಲ್ಲ.
ಎಲ್ಲಿಂದ ತಂದೆ ಇಷ್ಟೊಂದು ವೈವಿಧ್ಯತೆ?

ಹೆಣ್ಣಿನ ಜತೆಗೆ ಗಂಡನ್ನಿಟ್ಟೆ
ಭಾವಗಳ ಓಟಕೆ ರಂಗನು ಎರೆದೆ.
ಕಾಮದ ಬೆಂಕಿಯ ಉರಿಸಿ ಹೊಸಹುಟ್ಟಿಗೆ ಇಂಬನ್ನಿತ್ತೆ.
ಪ್ರೀತಿ ಪಾಠದ ಅಕ್ಕರಿಗ ನೀನು
ಪ್ರೀತಿಯೇ ಜಗದ ಉಸಿರೆಂದೆ.
ಆದರೂ ಪ್ರೀತಿಯ ಜತೆಗೆ ದ್ವೇಷವನ್ನಿಟ್ಟೆ
ಸುಖದ ಜತೆಗೆ ದುಃಖವನ್ನಿಟ್ಟೆ
ಯಾಕೆ ಹೀಗೆ ಮಾಡಿದೆ?

ಹಗಲಿನಾಗಸದಲಿ ನೇಸರ ಹೊಂಬಿಸಲು
ಇರುಳಿನಾಕಾಶದಲಿ ಶಶಿಯ ತಂಬೆಳಕು;
ಅಂಬರದಂಗಳದಲಿ ನಕ್ಷತ್ರಗಳ ಹೊಳಪು;
ಮರಗಳ ತುಂಬ ಮಿಂಚುಳ್ಳಿ ಮಿಣುಕು,
ಮೋಡಗಳ ನಡುವೆ ಮಿಂಚಿನ ಝಳಪು;
ಬೆಳಕಿಗೆಂದೂ ಬರವಿಲ್ಲ.
ಆದರೆ ಮನಮನದೊಳಗೊಂದೊಂದು
ನಕ್ಷತ್ರವನ್ನಿಡಲು ಏಕೆ ಮರೆತೆ?

ಭೂಮಿಯ ಸಹನೆ, ಅಲೆಗಳ ಚಂಚಲತೆ
ಗಾಳಿಯ ಚೈತನ್ಯ, ಆಗಸದ ಐಕ್ಯತೆ
ಎಲ್ಲವೂ ಕಲಿಕೆಯ ಆಗರ. ಎಲ್ಲಕ್ಕೂ ನೀನೇ ಗುರು
ಎಲ್ಲರೂ ನಿನ್ನ ಕೈಯಲ್ಲಿ ಅಕ್ಷ,
ನೀ ಹೇಳಿದಂತೆ ಇಡೀ ಜಗ.
ಆದರೂ ಮುತ್ತಿದೆ ದ್ವೇಷದ ಹಗೆ; ನೋವಿನ ಧಗೆ
ಶಾಂತಿಯ ಏಕೆ ತುಟ್ಟಿಯಾಗಿಸಿದೆ?

ನಿನ್ನಯ ಬಣ್ಣದ ಬಾಂಡಲಿ ಅಕ್ಷಯ!
ರಂಗಿಗೆ ಬರವಿಲ್ಲ. ರಾಗಕೆ ಮೌನವಿಲ್ಲ
ನೀ ಬರೆವ ಚಿತ್ರಗಳಿಗೆ ಕೊನೆಯಿಲ್ಲ
ಇಡೀ ಬಹ್ಮಾಂಡವೇ ನಿನ್ನ ಕ್ಯಾನ್‌ವಾಸ್
ಎಲ್ಲವೂ ಅಗಾಧ, ಅಕಲಂಕ, ಅಕೃತಿಮ.
ಕಣ್ಣಿಗೆ ಕಾಣದ ಚಿತ್ರಿಕ ನೀನು;
ನಿನ್ನೊಲವು ಅಕ್ಷೀಣ. ನಿನ್ನ ಅಣತಿಗೆ ನಮ್ಮ ಸವಾಲಿಲ್ಲ.
ಎಲ್ಲವ ಹೊತ್ತ ಅಗಧರ ನೀನು. ನಿನಗೆ ನೀನೇ ಸವಾಲು.
ಎಲ್ಲಿರುವ ನೀನು? ಹೇಗಿರುವೆ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...