ಸೃಷ್ಟಿಕರ್‍ತ

ಸದಾ ಉತ್ಸವ ಜಗದೊಳಗೆ-
ಉಳುವ, ಬಿತ್ತುವ, ಟಿಸಿಲೊಡೆಯುವ
ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ!
ಹಸಿರು ತೋರಣ, ಋತುಗಳ ಮೆರವಣಿಗೆ,
ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ,
ಸೂರ್‍ಯನ ಬಿಸಿ, ಚಂದಿರನ ತಂಪು
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಭಾವಗಳ ರಂಗು ಹೃದಯದ ಒಸರಲ್ಲಿ
ಹೊಂಬಣ್ಣದ ತೆನೆ ಹಸಿರಿನ ಬಸಿರಲ್ಲಿ
ಬಣ್ಣಗಳ ಮೇಳ ಧರಣಿಯ ಉಸಿರಲ್ಲಿ
ಧರಿತ್ರಿಗೆ ಕಿರೀಟಗಳು ಹಿಮಚ್ಛಾದಿತ ಪರ್ವತಶ್ರೇಣಿಗಳು
ಏರದೆಗೆ ಪೀಠಗಳು ಗುಡ್ಡ ಬೆಟ್ಟಗಳು
ಜೀವಚರಗಳಿಗೆ ಜೀವಸೆಲೆ ಜಲಪಾತ, ಝರಿಗಳು.
ಜೀವಜಲಕೆ ಒಸರು ನದಿ, ಕೆರೆ, ಸರೋವರಗಳು!
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಪ್ರಥ್ವಿಯ ಜತೆಗೆ ಸಾಗರವನ್ನಿಟ್ಟೆ
ಕಂಬಗಳಿಲ್ಲದೆ ಬಾನಿನ ಚಪ್ಪರ ಹಾಕಿಯೇ ಬಿಟ್ಟೆ
ಭೂಮಿಯ ಮೇಲೆ ಪಶುಪಕ್ಷಿ ಪ್ರಾಣಿಗಳ ಓಡಾಡಬಿಟ್ಟೆ,
ಮನುಷ್ಯರ ಸೃಷ್ಟಿಸಿ ಭಾವಗಳ ರಂಗನು ತುಂಬಿ ಆಳಲು ಬಿಟ್ಟೆ
ಸಾಗರದೊಳಗೆ ಬಣ್ಣ ಬಣ್ಣದ ಜಲಚರಗಳ ತೇಲಿಸಿಬಿಟ್ಟೆ
ಪುಟ್ಟ, ಚಿಟ್ಟೆಗಳ ಬಣ್ಣದಲ್ಲದ್ದಿ ಮೆರೆಯಲು ಬಿಟ್ಟೆ.
ಎಲ್ಲವೂ ನಿನ್ನಯ ಸೃಷ್ಟಿ. ಆದರೂ ಬೇರೆ ಬೇರೆ.
ಒಂದರ ಹಾಗೆ ಇನ್ನೊಂದಿಲ್ಲ.
ಒಂದರ ಬಣ್ಣ ಇನ್ನೊಂದಕ್ಕಿಲ್ಲ.
ಎಲ್ಲಿಂದ ತಂದೆ ಇಷ್ಟೊಂದು ವೈವಿಧ್ಯತೆ?

ಹೆಣ್ಣಿನ ಜತೆಗೆ ಗಂಡನ್ನಿಟ್ಟೆ
ಭಾವಗಳ ಓಟಕೆ ರಂಗನು ಎರೆದೆ.
ಕಾಮದ ಬೆಂಕಿಯ ಉರಿಸಿ ಹೊಸಹುಟ್ಟಿಗೆ ಇಂಬನ್ನಿತ್ತೆ.
ಪ್ರೀತಿ ಪಾಠದ ಅಕ್ಕರಿಗ ನೀನು
ಪ್ರೀತಿಯೇ ಜಗದ ಉಸಿರೆಂದೆ.
ಆದರೂ ಪ್ರೀತಿಯ ಜತೆಗೆ ದ್ವೇಷವನ್ನಿಟ್ಟೆ
ಸುಖದ ಜತೆಗೆ ದುಃಖವನ್ನಿಟ್ಟೆ
ಯಾಕೆ ಹೀಗೆ ಮಾಡಿದೆ?

ಹಗಲಿನಾಗಸದಲಿ ನೇಸರ ಹೊಂಬಿಸಲು
ಇರುಳಿನಾಕಾಶದಲಿ ಶಶಿಯ ತಂಬೆಳಕು;
ಅಂಬರದಂಗಳದಲಿ ನಕ್ಷತ್ರಗಳ ಹೊಳಪು;
ಮರಗಳ ತುಂಬ ಮಿಂಚುಳ್ಳಿ ಮಿಣುಕು,
ಮೋಡಗಳ ನಡುವೆ ಮಿಂಚಿನ ಝಳಪು;
ಬೆಳಕಿಗೆಂದೂ ಬರವಿಲ್ಲ.
ಆದರೆ ಮನಮನದೊಳಗೊಂದೊಂದು
ನಕ್ಷತ್ರವನ್ನಿಡಲು ಏಕೆ ಮರೆತೆ?

ಭೂಮಿಯ ಸಹನೆ, ಅಲೆಗಳ ಚಂಚಲತೆ
ಗಾಳಿಯ ಚೈತನ್ಯ, ಆಗಸದ ಐಕ್ಯತೆ
ಎಲ್ಲವೂ ಕಲಿಕೆಯ ಆಗರ. ಎಲ್ಲಕ್ಕೂ ನೀನೇ ಗುರು
ಎಲ್ಲರೂ ನಿನ್ನ ಕೈಯಲ್ಲಿ ಅಕ್ಷ,
ನೀ ಹೇಳಿದಂತೆ ಇಡೀ ಜಗ.
ಆದರೂ ಮುತ್ತಿದೆ ದ್ವೇಷದ ಹಗೆ; ನೋವಿನ ಧಗೆ
ಶಾಂತಿಯ ಏಕೆ ತುಟ್ಟಿಯಾಗಿಸಿದೆ?

ನಿನ್ನಯ ಬಣ್ಣದ ಬಾಂಡಲಿ ಅಕ್ಷಯ!
ರಂಗಿಗೆ ಬರವಿಲ್ಲ. ರಾಗಕೆ ಮೌನವಿಲ್ಲ
ನೀ ಬರೆವ ಚಿತ್ರಗಳಿಗೆ ಕೊನೆಯಿಲ್ಲ
ಇಡೀ ಬಹ್ಮಾಂಡವೇ ನಿನ್ನ ಕ್ಯಾನ್‌ವಾಸ್
ಎಲ್ಲವೂ ಅಗಾಧ, ಅಕಲಂಕ, ಅಕೃತಿಮ.
ಕಣ್ಣಿಗೆ ಕಾಣದ ಚಿತ್ರಿಕ ನೀನು;
ನಿನ್ನೊಲವು ಅಕ್ಷೀಣ. ನಿನ್ನ ಅಣತಿಗೆ ನಮ್ಮ ಸವಾಲಿಲ್ಲ.
ಎಲ್ಲವ ಹೊತ್ತ ಅಗಧರ ನೀನು. ನಿನಗೆ ನೀನೇ ಸವಾಲು.
ಎಲ್ಲಿರುವ ನೀನು? ಹೇಗಿರುವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ
Next post ಚಿಂತನೆ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…