Home / ಕವನ / ಕವಿತೆ / ಸೃಷ್ಟಿಕರ್‍ತ

ಸೃಷ್ಟಿಕರ್‍ತ

ಸದಾ ಉತ್ಸವ ಜಗದೊಳಗೆ-
ಉಳುವ, ಬಿತ್ತುವ, ಟಿಸಿಲೊಡೆಯುವ
ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ!
ಹಸಿರು ತೋರಣ, ಋತುಗಳ ಮೆರವಣಿಗೆ,
ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ,
ಸೂರ್‍ಯನ ಬಿಸಿ, ಚಂದಿರನ ತಂಪು
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಭಾವಗಳ ರಂಗು ಹೃದಯದ ಒಸರಲ್ಲಿ
ಹೊಂಬಣ್ಣದ ತೆನೆ ಹಸಿರಿನ ಬಸಿರಲ್ಲಿ
ಬಣ್ಣಗಳ ಮೇಳ ಧರಣಿಯ ಉಸಿರಲ್ಲಿ
ಧರಿತ್ರಿಗೆ ಕಿರೀಟಗಳು ಹಿಮಚ್ಛಾದಿತ ಪರ್ವತಶ್ರೇಣಿಗಳು
ಏರದೆಗೆ ಪೀಠಗಳು ಗುಡ್ಡ ಬೆಟ್ಟಗಳು
ಜೀವಚರಗಳಿಗೆ ಜೀವಸೆಲೆ ಜಲಪಾತ, ಝರಿಗಳು.
ಜೀವಜಲಕೆ ಒಸರು ನದಿ, ಕೆರೆ, ಸರೋವರಗಳು!
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಪ್ರಥ್ವಿಯ ಜತೆಗೆ ಸಾಗರವನ್ನಿಟ್ಟೆ
ಕಂಬಗಳಿಲ್ಲದೆ ಬಾನಿನ ಚಪ್ಪರ ಹಾಕಿಯೇ ಬಿಟ್ಟೆ
ಭೂಮಿಯ ಮೇಲೆ ಪಶುಪಕ್ಷಿ ಪ್ರಾಣಿಗಳ ಓಡಾಡಬಿಟ್ಟೆ,
ಮನುಷ್ಯರ ಸೃಷ್ಟಿಸಿ ಭಾವಗಳ ರಂಗನು ತುಂಬಿ ಆಳಲು ಬಿಟ್ಟೆ
ಸಾಗರದೊಳಗೆ ಬಣ್ಣ ಬಣ್ಣದ ಜಲಚರಗಳ ತೇಲಿಸಿಬಿಟ್ಟೆ
ಪುಟ್ಟ, ಚಿಟ್ಟೆಗಳ ಬಣ್ಣದಲ್ಲದ್ದಿ ಮೆರೆಯಲು ಬಿಟ್ಟೆ.
ಎಲ್ಲವೂ ನಿನ್ನಯ ಸೃಷ್ಟಿ. ಆದರೂ ಬೇರೆ ಬೇರೆ.
ಒಂದರ ಹಾಗೆ ಇನ್ನೊಂದಿಲ್ಲ.
ಒಂದರ ಬಣ್ಣ ಇನ್ನೊಂದಕ್ಕಿಲ್ಲ.
ಎಲ್ಲಿಂದ ತಂದೆ ಇಷ್ಟೊಂದು ವೈವಿಧ್ಯತೆ?

ಹೆಣ್ಣಿನ ಜತೆಗೆ ಗಂಡನ್ನಿಟ್ಟೆ
ಭಾವಗಳ ಓಟಕೆ ರಂಗನು ಎರೆದೆ.
ಕಾಮದ ಬೆಂಕಿಯ ಉರಿಸಿ ಹೊಸಹುಟ್ಟಿಗೆ ಇಂಬನ್ನಿತ್ತೆ.
ಪ್ರೀತಿ ಪಾಠದ ಅಕ್ಕರಿಗ ನೀನು
ಪ್ರೀತಿಯೇ ಜಗದ ಉಸಿರೆಂದೆ.
ಆದರೂ ಪ್ರೀತಿಯ ಜತೆಗೆ ದ್ವೇಷವನ್ನಿಟ್ಟೆ
ಸುಖದ ಜತೆಗೆ ದುಃಖವನ್ನಿಟ್ಟೆ
ಯಾಕೆ ಹೀಗೆ ಮಾಡಿದೆ?

ಹಗಲಿನಾಗಸದಲಿ ನೇಸರ ಹೊಂಬಿಸಲು
ಇರುಳಿನಾಕಾಶದಲಿ ಶಶಿಯ ತಂಬೆಳಕು;
ಅಂಬರದಂಗಳದಲಿ ನಕ್ಷತ್ರಗಳ ಹೊಳಪು;
ಮರಗಳ ತುಂಬ ಮಿಂಚುಳ್ಳಿ ಮಿಣುಕು,
ಮೋಡಗಳ ನಡುವೆ ಮಿಂಚಿನ ಝಳಪು;
ಬೆಳಕಿಗೆಂದೂ ಬರವಿಲ್ಲ.
ಆದರೆ ಮನಮನದೊಳಗೊಂದೊಂದು
ನಕ್ಷತ್ರವನ್ನಿಡಲು ಏಕೆ ಮರೆತೆ?

ಭೂಮಿಯ ಸಹನೆ, ಅಲೆಗಳ ಚಂಚಲತೆ
ಗಾಳಿಯ ಚೈತನ್ಯ, ಆಗಸದ ಐಕ್ಯತೆ
ಎಲ್ಲವೂ ಕಲಿಕೆಯ ಆಗರ. ಎಲ್ಲಕ್ಕೂ ನೀನೇ ಗುರು
ಎಲ್ಲರೂ ನಿನ್ನ ಕೈಯಲ್ಲಿ ಅಕ್ಷ,
ನೀ ಹೇಳಿದಂತೆ ಇಡೀ ಜಗ.
ಆದರೂ ಮುತ್ತಿದೆ ದ್ವೇಷದ ಹಗೆ; ನೋವಿನ ಧಗೆ
ಶಾಂತಿಯ ಏಕೆ ತುಟ್ಟಿಯಾಗಿಸಿದೆ?

ನಿನ್ನಯ ಬಣ್ಣದ ಬಾಂಡಲಿ ಅಕ್ಷಯ!
ರಂಗಿಗೆ ಬರವಿಲ್ಲ. ರಾಗಕೆ ಮೌನವಿಲ್ಲ
ನೀ ಬರೆವ ಚಿತ್ರಗಳಿಗೆ ಕೊನೆಯಿಲ್ಲ
ಇಡೀ ಬಹ್ಮಾಂಡವೇ ನಿನ್ನ ಕ್ಯಾನ್‌ವಾಸ್
ಎಲ್ಲವೂ ಅಗಾಧ, ಅಕಲಂಕ, ಅಕೃತಿಮ.
ಕಣ್ಣಿಗೆ ಕಾಣದ ಚಿತ್ರಿಕ ನೀನು;
ನಿನ್ನೊಲವು ಅಕ್ಷೀಣ. ನಿನ್ನ ಅಣತಿಗೆ ನಮ್ಮ ಸವಾಲಿಲ್ಲ.
ಎಲ್ಲವ ಹೊತ್ತ ಅಗಧರ ನೀನು. ನಿನಗೆ ನೀನೇ ಸವಾಲು.
ಎಲ್ಲಿರುವ ನೀನು? ಹೇಗಿರುವೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...