Home / ಕವನ / ಕವಿತೆ / ಸಹಜ ಧ್ಯಾನ

ಸಹಜ ಧ್ಯಾನ

ಹೂಕೋಸಿನ ರೂಪ ಬಣ್ಣದಲಿ
ಮನ ಲೀನ, ಮಲಿನ.
ಹೆಚ್ಚುತ್ತಾ ಮೆಚ್ಚುತ್ತಾ ಅದರ
ಬುಡದಲ್ಲೇ ಹರಿವ
ಪಿತಿಪಿತಿ ಹುಳು
ಕಂಡರೂ ಕಾಣದಂತೆ
ಚೆಲುವಿನಾರಾಧನಾ ಧ್ಯಾನ

ಪೀಠಸ್ಥ ಆದೇಶಕ್ಕೆ ಮಹಾಮೌನ.

ದಂಟು ಬೇಳೆ ಬೇಯಿಸಿ ಬಸಿದು
ಮೆಣಸು ಮಸಾಲೆ ಖಾರ
ಹದ ಬೆರೆಸಿ ಕುದಿಸಿ ಒಗ್ಗರಿಸಿ
ಬಸ್ಸಾರಿನ ರಸಗಂಧವ
ಆಘ್ರಾಣಿಸಿ ಹೀರಿ
ಕರುಳಿನಾಳದ ಬಾಯ್ಚಪ್ಪರಿಕೆ
ಮಹಾರಸದುನ್ಮಾದ ಧ್ಯಾನ
ಅಮಲಿನಲಿ ಮೈಮರೆವು

ಹೊರಳು ದಾರಿಯಲಿ ತಿಳಿವು.

ಬೆಳ್ಳುಳ್ಳಿ ಒಗ್ಗರಣೆ ಘಮ ಮೂಗಿಗಡರಿ
ಆ ಗಂಧದ ಬೆನ್ನು ಹಿಡಿದು
ಗಾಳಿಯಲೆಗಳ ಮೇಲೆ ಸವಾರಿ
ಬೀಸಿ ಕೆಡವುತ್ತದೆ ವಾಸನಾ ಧ್ಯಾನ
ತಪ್ಪುತ್ತದೆ ಪ್ರಭುತ್ವ ನಿರ್ದೇಶಿತ ದಾರಿ

ನಡೆದ ದಾರಿಯೇ ಸರಿ.

ಸಬ್ಬಸಿಗೆ ಸೊಪ್ಪಿನ
ವಿನ್ಯಾಸಕ್ಕೆ ಮೃದು ಸ್ಪರ್ಶಕ್ಕೆ
ಅದೆಂಥಾ ನವುರು ಮುದ.
ಮೃದುವಾಗಿ ಮುಟ್ಟುತ್ತಾ
ಆವರಿಸುವ ಆವಾಹಿಸುವ
ಹಿತವಾದ ಮಿಡಿತ
ಕಾಡುತ್ತದೆ ಅದೇ
ಸ್ಪರ್ಶಸುಖದ ಧ್ಯಾನ

ಅನುಭವಕ್ಕೇ ಬದ್ಧ ಮನ.

ಹೆಚ್ಚಲು ಕೈಗೆತ್ತಿಕೊಂಡ
ಈರುಳ್ಳಿಯ ಮೂಲ ಕಾಡಿ
ಪಕಳೆ ಪಕಳೆಗಳ ಬಿಡಿಸುತ್ತಾ ಹೋದಂತೆ
ಅದರಲ್ಲೇ ತಲ್ಲೀನ
ಆ ಕೌತುಕಕ್ಕೇ ಸೋತು
ಆವರಿಸುತ್ತದೆ ವಿಸ್ಮಿತ ಧ್ಯಾನ

ಅಳಿಸಿಹೋಗುತ್ತದೆ ಯಾರೋ ಬರೆದಿಟ್ಟ
ಅಲೌಕಿಕ ದಿವ್ಯ ಪುರಾಣ.

ಈ ನಿತ್ಯ ಪ್ರೀತಿಯ
ರೂಪ ರಸ ಗಂಧ ಸ್ಪರ್ಶ ವಿಸ್ಮಯಗಳ
ಮಾನುಷ ಸಹಜ ಧ್ಯಾನದಲಿ
ಅನುಕ್ಷಣದ ಎಚ್ಚರ
ಮತ್ತೆ ಮತ್ತ ಮೈಮರೆವಿನ
ಹುಚ್ಚು ಮೋಹದ ಜೂಟಾಟ.
ನಿಲುಕಲಾರದ ಎತ್ತರದಲೇ ಇರಲಿ ಬಿಡು
ಅವರಿಟ್ಟ ಸಂತ ಪೀಠ.

ನನಗಾಗಿ
ಈ ನೆಲದಲ್ಲೇ ಹೀಗೇ
ಈ ಕ್ಷಣ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...