ಸಹಜ ಧ್ಯಾನ

ಹೂಕೋಸಿನ ರೂಪ ಬಣ್ಣದಲಿ
ಮನ ಲೀನ, ಮಲಿನ.
ಹೆಚ್ಚುತ್ತಾ ಮೆಚ್ಚುತ್ತಾ ಅದರ
ಬುಡದಲ್ಲೇ ಹರಿವ
ಪಿತಿಪಿತಿ ಹುಳು
ಕಂಡರೂ ಕಾಣದಂತೆ
ಚೆಲುವಿನಾರಾಧನಾ ಧ್ಯಾನ

ಪೀಠಸ್ಥ ಆದೇಶಕ್ಕೆ ಮಹಾಮೌನ.

ದಂಟು ಬೇಳೆ ಬೇಯಿಸಿ ಬಸಿದು
ಮೆಣಸು ಮಸಾಲೆ ಖಾರ
ಹದ ಬೆರೆಸಿ ಕುದಿಸಿ ಒಗ್ಗರಿಸಿ
ಬಸ್ಸಾರಿನ ರಸಗಂಧವ
ಆಘ್ರಾಣಿಸಿ ಹೀರಿ
ಕರುಳಿನಾಳದ ಬಾಯ್ಚಪ್ಪರಿಕೆ
ಮಹಾರಸದುನ್ಮಾದ ಧ್ಯಾನ
ಅಮಲಿನಲಿ ಮೈಮರೆವು

ಹೊರಳು ದಾರಿಯಲಿ ತಿಳಿವು.

ಬೆಳ್ಳುಳ್ಳಿ ಒಗ್ಗರಣೆ ಘಮ ಮೂಗಿಗಡರಿ
ಆ ಗಂಧದ ಬೆನ್ನು ಹಿಡಿದು
ಗಾಳಿಯಲೆಗಳ ಮೇಲೆ ಸವಾರಿ
ಬೀಸಿ ಕೆಡವುತ್ತದೆ ವಾಸನಾ ಧ್ಯಾನ
ತಪ್ಪುತ್ತದೆ ಪ್ರಭುತ್ವ ನಿರ್ದೇಶಿತ ದಾರಿ

ನಡೆದ ದಾರಿಯೇ ಸರಿ.

ಸಬ್ಬಸಿಗೆ ಸೊಪ್ಪಿನ
ವಿನ್ಯಾಸಕ್ಕೆ ಮೃದು ಸ್ಪರ್ಶಕ್ಕೆ
ಅದೆಂಥಾ ನವುರು ಮುದ.
ಮೃದುವಾಗಿ ಮುಟ್ಟುತ್ತಾ
ಆವರಿಸುವ ಆವಾಹಿಸುವ
ಹಿತವಾದ ಮಿಡಿತ
ಕಾಡುತ್ತದೆ ಅದೇ
ಸ್ಪರ್ಶಸುಖದ ಧ್ಯಾನ

ಅನುಭವಕ್ಕೇ ಬದ್ಧ ಮನ.

ಹೆಚ್ಚಲು ಕೈಗೆತ್ತಿಕೊಂಡ
ಈರುಳ್ಳಿಯ ಮೂಲ ಕಾಡಿ
ಪಕಳೆ ಪಕಳೆಗಳ ಬಿಡಿಸುತ್ತಾ ಹೋದಂತೆ
ಅದರಲ್ಲೇ ತಲ್ಲೀನ
ಆ ಕೌತುಕಕ್ಕೇ ಸೋತು
ಆವರಿಸುತ್ತದೆ ವಿಸ್ಮಿತ ಧ್ಯಾನ

ಅಳಿಸಿಹೋಗುತ್ತದೆ ಯಾರೋ ಬರೆದಿಟ್ಟ
ಅಲೌಕಿಕ ದಿವ್ಯ ಪುರಾಣ.

ಈ ನಿತ್ಯ ಪ್ರೀತಿಯ
ರೂಪ ರಸ ಗಂಧ ಸ್ಪರ್ಶ ವಿಸ್ಮಯಗಳ
ಮಾನುಷ ಸಹಜ ಧ್ಯಾನದಲಿ
ಅನುಕ್ಷಣದ ಎಚ್ಚರ
ಮತ್ತೆ ಮತ್ತ ಮೈಮರೆವಿನ
ಹುಚ್ಚು ಮೋಹದ ಜೂಟಾಟ.
ನಿಲುಕಲಾರದ ಎತ್ತರದಲೇ ಇರಲಿ ಬಿಡು
ಅವರಿಟ್ಟ ಸಂತ ಪೀಠ.

ನನಗಾಗಿ
ಈ ನೆಲದಲ್ಲೇ ಹೀಗೇ
ಈ ಕ್ಷಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಳವಳಿಗಳು ಮತ್ತು ಸೃಜನಶೀಲ ಸ್ವಾತಂತ್ರ್ಯ
Next post ಭಕ್ತ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…