ಯಾರೂ ಇಲ್ಲದ ಜಾಗ

ವ್ಯಾಸಮಠದ ಶ್ರೀವ್ಯಾಸರಾಯರು
ಪರೀಕ್ಷೆ ಮಾಡಲು ಶಿಷ್ಯರನು
ನೀಡಿದರೆಲ್ಲರಿಗೆರಡೆರಡಂತೆ
ಮಾಗಿದ ಬಾಳೆಯ ಹಣ್ಣನ್ನು

’ತಿಂದು ಬನ್ನಿರಿ ಬಾಳೆಯ ಹಣ್ಣನು
ಯಾರೂ ಇಲ್ಲದ ಜಾಗದಲಿ’
-ಎಂದು ಕಳುಹಿದರು ಎಲ್ಲ ಶಿಷ್ಯರನು
ಒಂದಿನ ಸಂಜೆಯ ವೇಳೆಯಲಿ

ಅರ್ಧಗಂಟೆಯಲಿ ಎಲ್ಲರೂ ಬಂದರು
ಹಣ್ಣನು ನುಂಗಿದ ಖುಷಿಯಲ್ಲಿ
ಆದರೆ ಕನಕನು ಹಿಂದಕೆ ತಂದನು
ತಿನ್ನದೆ ಹಣ್ಣನು ಮರೆಯಲ್ಲಿ

ವ್ಯಾಸರಾಯರ ಮಠದಲ್ಲಿದ್ದುದು
ಬ್ರಾಹ್ಮಣ ಶಿಷ್ಯರೇ ಹೆಚ್ಚಾಗಿ
ತಾವೇ ಶ್ರೇಷ್ಠರು ಎನ್ನುತ ಜಂಬವ
ಕೊಚ್ಚುತಲಿದ್ದರು ಬಲು ಬೀಗಿ

ಶಿಷ್ಯರೊಳಿದ್ದವ ಕನಕನಾಯಕ
ಹೆಸರಿನ ಕುರುಬರ ವಂಶದವ
ಜಂಬವು ಇಲ್ಲದೆ ವಿನಯತೆ ತುಂಬಿದ
ಚಿನ್ನದ ಗುಣಗಳ ಹೊಂದಿದವ

ಕುಲಹೀನನು ಅವನೆನ್ನುತಲಿದ್ದರು
ತಾವುಗಳೇ ಮೇಲೆನ್ನುತ್ತ
ಅವನನು ಕಡೆಗಣಿಸಿದ್ದರು ಎಲ್ಲರು
ತಮ್ಮಲಿ ತಾವೇ ಗೊಣಗುತ್ತ

ಬ್ರಾಹ್ಮಣ ಶಿಷ್ಯರು ಕನಕನ ಕೈಯಲಿ
ಹಣ್ಣನು ಕಂಡು ನಗಾಡಿದರು
ಶೂದ್ರನಿಗೆಲ್ಲಿಯೂ ಜಾಗವು ಸಿಕ್ಕದೆ
ಬಂದನೆಂದು ಗೊಣಗಾಡಿದರು

ವ್ಯಾಸರು ಶಿಷ್ಯರ ಕೇಳಿದೊಡನೆಯೆ
ನುಡಿದರು ಎಲ್ಲರೂ ಖುಷಿಯಿಂದ
ಯಾರೂ ಇಲ್ಲದ ಜಾಗದಿ ಹಣ್ಣನು
ತಿಂದುದನ್ನು ಲಗುಬಗೆಯಿಂದ

ಒಬ್ಬನು ನುಡಿದನು ಬಲು ಖುಷಿಯಿಂದ-
’ಬಾಗಿಲು ಮುಚ್ಚಿದ ಕೋಣೆಯಲಿ’
ಇನ್ನೊಬ್ಬನು ತಾ ತಿಂದೆನು ಎಂದನು
’ನೀರಲಿ ಮುಳುಗುತ ಹೊಳೆಯಲ್ಲಿ’
ಒಬ್ಬನು ತಿಂದೆನು ಎಂದನು ನಾಚುತ-
’ಶೌಚದ ಕೋಣೆಯ ಮೂಲೆಯಲಿ’

ಕಡೆಯಲಿ ಕನಕನು ನುಡಿದನು ಹೀಗೆ-
’ಗುರುಗಳೆ, ನನಗೀ ಜಗದಲ್ಲಿ
ದೇವರು ಇಲ್ಲದ ಜಾಗವು ಸಿಕ್ಕದೆ
ಹಿಂದಕೆ ತಂದೆನು ಈಗಿಲ್ಲಿ’
ಎನ್ನುತ ಹಣ್ಣನು ಹಿಂದಕೆ ಕೊಟ್ಟನು
ಗುರುಗಳ ಪಾದಕೆ ವಂದಿಸುತ
ಬ್ರಾಹ್ಮಣ ಶಿಷ್ಯರು ನಾಚಿಕೆಯಿಂದ
ನಿಂತರು ತಲೆಯನು ತಗ್ಗಿಸುತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಟ್ಟಕ್ಕೆ ಮಣ್ಣೊತ್ತವು
Next post ಪ್ರೊಫೆಶನಲಿಸಂ ಎಂಬ ಮಾಯೆ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…