ಯಾರೂ ಇಲ್ಲದ ಜಾಗ

ವ್ಯಾಸಮಠದ ಶ್ರೀವ್ಯಾಸರಾಯರು
ಪರೀಕ್ಷೆ ಮಾಡಲು ಶಿಷ್ಯರನು
ನೀಡಿದರೆಲ್ಲರಿಗೆರಡೆರಡಂತೆ
ಮಾಗಿದ ಬಾಳೆಯ ಹಣ್ಣನ್ನು

’ತಿಂದು ಬನ್ನಿರಿ ಬಾಳೆಯ ಹಣ್ಣನು
ಯಾರೂ ಇಲ್ಲದ ಜಾಗದಲಿ’
-ಎಂದು ಕಳುಹಿದರು ಎಲ್ಲ ಶಿಷ್ಯರನು
ಒಂದಿನ ಸಂಜೆಯ ವೇಳೆಯಲಿ

ಅರ್ಧಗಂಟೆಯಲಿ ಎಲ್ಲರೂ ಬಂದರು
ಹಣ್ಣನು ನುಂಗಿದ ಖುಷಿಯಲ್ಲಿ
ಆದರೆ ಕನಕನು ಹಿಂದಕೆ ತಂದನು
ತಿನ್ನದೆ ಹಣ್ಣನು ಮರೆಯಲ್ಲಿ

ವ್ಯಾಸರಾಯರ ಮಠದಲ್ಲಿದ್ದುದು
ಬ್ರಾಹ್ಮಣ ಶಿಷ್ಯರೇ ಹೆಚ್ಚಾಗಿ
ತಾವೇ ಶ್ರೇಷ್ಠರು ಎನ್ನುತ ಜಂಬವ
ಕೊಚ್ಚುತಲಿದ್ದರು ಬಲು ಬೀಗಿ

ಶಿಷ್ಯರೊಳಿದ್ದವ ಕನಕನಾಯಕ
ಹೆಸರಿನ ಕುರುಬರ ವಂಶದವ
ಜಂಬವು ಇಲ್ಲದೆ ವಿನಯತೆ ತುಂಬಿದ
ಚಿನ್ನದ ಗುಣಗಳ ಹೊಂದಿದವ

ಕುಲಹೀನನು ಅವನೆನ್ನುತಲಿದ್ದರು
ತಾವುಗಳೇ ಮೇಲೆನ್ನುತ್ತ
ಅವನನು ಕಡೆಗಣಿಸಿದ್ದರು ಎಲ್ಲರು
ತಮ್ಮಲಿ ತಾವೇ ಗೊಣಗುತ್ತ

ಬ್ರಾಹ್ಮಣ ಶಿಷ್ಯರು ಕನಕನ ಕೈಯಲಿ
ಹಣ್ಣನು ಕಂಡು ನಗಾಡಿದರು
ಶೂದ್ರನಿಗೆಲ್ಲಿಯೂ ಜಾಗವು ಸಿಕ್ಕದೆ
ಬಂದನೆಂದು ಗೊಣಗಾಡಿದರು

ವ್ಯಾಸರು ಶಿಷ್ಯರ ಕೇಳಿದೊಡನೆಯೆ
ನುಡಿದರು ಎಲ್ಲರೂ ಖುಷಿಯಿಂದ
ಯಾರೂ ಇಲ್ಲದ ಜಾಗದಿ ಹಣ್ಣನು
ತಿಂದುದನ್ನು ಲಗುಬಗೆಯಿಂದ

ಒಬ್ಬನು ನುಡಿದನು ಬಲು ಖುಷಿಯಿಂದ-
’ಬಾಗಿಲು ಮುಚ್ಚಿದ ಕೋಣೆಯಲಿ’
ಇನ್ನೊಬ್ಬನು ತಾ ತಿಂದೆನು ಎಂದನು
’ನೀರಲಿ ಮುಳುಗುತ ಹೊಳೆಯಲ್ಲಿ’
ಒಬ್ಬನು ತಿಂದೆನು ಎಂದನು ನಾಚುತ-
’ಶೌಚದ ಕೋಣೆಯ ಮೂಲೆಯಲಿ’

ಕಡೆಯಲಿ ಕನಕನು ನುಡಿದನು ಹೀಗೆ-
’ಗುರುಗಳೆ, ನನಗೀ ಜಗದಲ್ಲಿ
ದೇವರು ಇಲ್ಲದ ಜಾಗವು ಸಿಕ್ಕದೆ
ಹಿಂದಕೆ ತಂದೆನು ಈಗಿಲ್ಲಿ’
ಎನ್ನುತ ಹಣ್ಣನು ಹಿಂದಕೆ ಕೊಟ್ಟನು
ಗುರುಗಳ ಪಾದಕೆ ವಂದಿಸುತ
ಬ್ರಾಹ್ಮಣ ಶಿಷ್ಯರು ನಾಚಿಕೆಯಿಂದ
ನಿಂತರು ತಲೆಯನು ತಗ್ಗಿಸುತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಟ್ಟಕ್ಕೆ ಮಣ್ಣೊತ್ತವು
Next post ಪ್ರೊಫೆಶನಲಿಸಂ ಎಂಬ ಮಾಯೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…