Home / ಬಾಲ ಚಿಲುಮೆ / ಕವಿತೆ / ಯಾರೂ ಇಲ್ಲದ ಜಾಗ

ಯಾರೂ ಇಲ್ಲದ ಜಾಗ

ವ್ಯಾಸಮಠದ ಶ್ರೀವ್ಯಾಸರಾಯರು
ಪರೀಕ್ಷೆ ಮಾಡಲು ಶಿಷ್ಯರನು
ನೀಡಿದರೆಲ್ಲರಿಗೆರಡೆರಡಂತೆ
ಮಾಗಿದ ಬಾಳೆಯ ಹಣ್ಣನ್ನು

’ತಿಂದು ಬನ್ನಿರಿ ಬಾಳೆಯ ಹಣ್ಣನು
ಯಾರೂ ಇಲ್ಲದ ಜಾಗದಲಿ’
-ಎಂದು ಕಳುಹಿದರು ಎಲ್ಲ ಶಿಷ್ಯರನು
ಒಂದಿನ ಸಂಜೆಯ ವೇಳೆಯಲಿ

ಅರ್ಧಗಂಟೆಯಲಿ ಎಲ್ಲರೂ ಬಂದರು
ಹಣ್ಣನು ನುಂಗಿದ ಖುಷಿಯಲ್ಲಿ
ಆದರೆ ಕನಕನು ಹಿಂದಕೆ ತಂದನು
ತಿನ್ನದೆ ಹಣ್ಣನು ಮರೆಯಲ್ಲಿ

ವ್ಯಾಸರಾಯರ ಮಠದಲ್ಲಿದ್ದುದು
ಬ್ರಾಹ್ಮಣ ಶಿಷ್ಯರೇ ಹೆಚ್ಚಾಗಿ
ತಾವೇ ಶ್ರೇಷ್ಠರು ಎನ್ನುತ ಜಂಬವ
ಕೊಚ್ಚುತಲಿದ್ದರು ಬಲು ಬೀಗಿ

ಶಿಷ್ಯರೊಳಿದ್ದವ ಕನಕನಾಯಕ
ಹೆಸರಿನ ಕುರುಬರ ವಂಶದವ
ಜಂಬವು ಇಲ್ಲದೆ ವಿನಯತೆ ತುಂಬಿದ
ಚಿನ್ನದ ಗುಣಗಳ ಹೊಂದಿದವ

ಕುಲಹೀನನು ಅವನೆನ್ನುತಲಿದ್ದರು
ತಾವುಗಳೇ ಮೇಲೆನ್ನುತ್ತ
ಅವನನು ಕಡೆಗಣಿಸಿದ್ದರು ಎಲ್ಲರು
ತಮ್ಮಲಿ ತಾವೇ ಗೊಣಗುತ್ತ

ಬ್ರಾಹ್ಮಣ ಶಿಷ್ಯರು ಕನಕನ ಕೈಯಲಿ
ಹಣ್ಣನು ಕಂಡು ನಗಾಡಿದರು
ಶೂದ್ರನಿಗೆಲ್ಲಿಯೂ ಜಾಗವು ಸಿಕ್ಕದೆ
ಬಂದನೆಂದು ಗೊಣಗಾಡಿದರು

ವ್ಯಾಸರು ಶಿಷ್ಯರ ಕೇಳಿದೊಡನೆಯೆ
ನುಡಿದರು ಎಲ್ಲರೂ ಖುಷಿಯಿಂದ
ಯಾರೂ ಇಲ್ಲದ ಜಾಗದಿ ಹಣ್ಣನು
ತಿಂದುದನ್ನು ಲಗುಬಗೆಯಿಂದ

ಒಬ್ಬನು ನುಡಿದನು ಬಲು ಖುಷಿಯಿಂದ-
’ಬಾಗಿಲು ಮುಚ್ಚಿದ ಕೋಣೆಯಲಿ’
ಇನ್ನೊಬ್ಬನು ತಾ ತಿಂದೆನು ಎಂದನು
’ನೀರಲಿ ಮುಳುಗುತ ಹೊಳೆಯಲ್ಲಿ’
ಒಬ್ಬನು ತಿಂದೆನು ಎಂದನು ನಾಚುತ-
’ಶೌಚದ ಕೋಣೆಯ ಮೂಲೆಯಲಿ’

ಕಡೆಯಲಿ ಕನಕನು ನುಡಿದನು ಹೀಗೆ-
’ಗುರುಗಳೆ, ನನಗೀ ಜಗದಲ್ಲಿ
ದೇವರು ಇಲ್ಲದ ಜಾಗವು ಸಿಕ್ಕದೆ
ಹಿಂದಕೆ ತಂದೆನು ಈಗಿಲ್ಲಿ’
ಎನ್ನುತ ಹಣ್ಣನು ಹಿಂದಕೆ ಕೊಟ್ಟನು
ಗುರುಗಳ ಪಾದಕೆ ವಂದಿಸುತ
ಬ್ರಾಹ್ಮಣ ಶಿಷ್ಯರು ನಾಚಿಕೆಯಿಂದ
ನಿಂತರು ತಲೆಯನು ತಗ್ಗಿಸುತ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...