Home / ಬಾಲ ಚಿಲುಮೆ / ಕವಿತೆ / ಯಾರೂ ಇಲ್ಲದ ಜಾಗ

ಯಾರೂ ಇಲ್ಲದ ಜಾಗ

ವ್ಯಾಸಮಠದ ಶ್ರೀವ್ಯಾಸರಾಯರು
ಪರೀಕ್ಷೆ ಮಾಡಲು ಶಿಷ್ಯರನು
ನೀಡಿದರೆಲ್ಲರಿಗೆರಡೆರಡಂತೆ
ಮಾಗಿದ ಬಾಳೆಯ ಹಣ್ಣನ್ನು

’ತಿಂದು ಬನ್ನಿರಿ ಬಾಳೆಯ ಹಣ್ಣನು
ಯಾರೂ ಇಲ್ಲದ ಜಾಗದಲಿ’
-ಎಂದು ಕಳುಹಿದರು ಎಲ್ಲ ಶಿಷ್ಯರನು
ಒಂದಿನ ಸಂಜೆಯ ವೇಳೆಯಲಿ

ಅರ್ಧಗಂಟೆಯಲಿ ಎಲ್ಲರೂ ಬಂದರು
ಹಣ್ಣನು ನುಂಗಿದ ಖುಷಿಯಲ್ಲಿ
ಆದರೆ ಕನಕನು ಹಿಂದಕೆ ತಂದನು
ತಿನ್ನದೆ ಹಣ್ಣನು ಮರೆಯಲ್ಲಿ

ವ್ಯಾಸರಾಯರ ಮಠದಲ್ಲಿದ್ದುದು
ಬ್ರಾಹ್ಮಣ ಶಿಷ್ಯರೇ ಹೆಚ್ಚಾಗಿ
ತಾವೇ ಶ್ರೇಷ್ಠರು ಎನ್ನುತ ಜಂಬವ
ಕೊಚ್ಚುತಲಿದ್ದರು ಬಲು ಬೀಗಿ

ಶಿಷ್ಯರೊಳಿದ್ದವ ಕನಕನಾಯಕ
ಹೆಸರಿನ ಕುರುಬರ ವಂಶದವ
ಜಂಬವು ಇಲ್ಲದೆ ವಿನಯತೆ ತುಂಬಿದ
ಚಿನ್ನದ ಗುಣಗಳ ಹೊಂದಿದವ

ಕುಲಹೀನನು ಅವನೆನ್ನುತಲಿದ್ದರು
ತಾವುಗಳೇ ಮೇಲೆನ್ನುತ್ತ
ಅವನನು ಕಡೆಗಣಿಸಿದ್ದರು ಎಲ್ಲರು
ತಮ್ಮಲಿ ತಾವೇ ಗೊಣಗುತ್ತ

ಬ್ರಾಹ್ಮಣ ಶಿಷ್ಯರು ಕನಕನ ಕೈಯಲಿ
ಹಣ್ಣನು ಕಂಡು ನಗಾಡಿದರು
ಶೂದ್ರನಿಗೆಲ್ಲಿಯೂ ಜಾಗವು ಸಿಕ್ಕದೆ
ಬಂದನೆಂದು ಗೊಣಗಾಡಿದರು

ವ್ಯಾಸರು ಶಿಷ್ಯರ ಕೇಳಿದೊಡನೆಯೆ
ನುಡಿದರು ಎಲ್ಲರೂ ಖುಷಿಯಿಂದ
ಯಾರೂ ಇಲ್ಲದ ಜಾಗದಿ ಹಣ್ಣನು
ತಿಂದುದನ್ನು ಲಗುಬಗೆಯಿಂದ

ಒಬ್ಬನು ನುಡಿದನು ಬಲು ಖುಷಿಯಿಂದ-
’ಬಾಗಿಲು ಮುಚ್ಚಿದ ಕೋಣೆಯಲಿ’
ಇನ್ನೊಬ್ಬನು ತಾ ತಿಂದೆನು ಎಂದನು
’ನೀರಲಿ ಮುಳುಗುತ ಹೊಳೆಯಲ್ಲಿ’
ಒಬ್ಬನು ತಿಂದೆನು ಎಂದನು ನಾಚುತ-
’ಶೌಚದ ಕೋಣೆಯ ಮೂಲೆಯಲಿ’

ಕಡೆಯಲಿ ಕನಕನು ನುಡಿದನು ಹೀಗೆ-
’ಗುರುಗಳೆ, ನನಗೀ ಜಗದಲ್ಲಿ
ದೇವರು ಇಲ್ಲದ ಜಾಗವು ಸಿಕ್ಕದೆ
ಹಿಂದಕೆ ತಂದೆನು ಈಗಿಲ್ಲಿ’
ಎನ್ನುತ ಹಣ್ಣನು ಹಿಂದಕೆ ಕೊಟ್ಟನು
ಗುರುಗಳ ಪಾದಕೆ ವಂದಿಸುತ
ಬ್ರಾಹ್ಮಣ ಶಿಷ್ಯರು ನಾಚಿಕೆಯಿಂದ
ನಿಂತರು ತಲೆಯನು ತಗ್ಗಿಸುತ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...