Home / ಕವನ / ಕವಿತೆ / ನಮ್ಮನ್ನು ದೂರುವುದು ಯಾವ ನ್ಯಾಯ

ನಮ್ಮನ್ನು ದೂರುವುದು ಯಾವ ನ್ಯಾಯ

ಹೊಂದಿಕೊಂಡು ಹೋಗದ ಹೆಣ್ಣು
ಮನೆಯ ಒಡೆಯುವಳೆನ್ನುವರು
ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು
ವಿಚಾರ ಮಾಡುವವರು ಯಾರೂ ಇಲ್ಲ.

ಎಳೆಯ ಹುಡುಗಿಯ ತಂದು
ಮನೆದುಂಬಿಸಿ ಕೊಂಡಾಗ
ಹ್ಯಾಗೆ ನಡೆಸಿ ಕೊಳ್ಳಬೇಕಂತಾ
ತಿಳಿದಿಹರಾ?

ಅಪ್ಪ, ಅಮ್ಮನ ಮನೆಯಲ್ಲಿ
ಬದುಕನ್ನು ಎಷ್ಟೇ ಹತ್ತಿರದಿಂದ ನೋಡಿದರೂ ಸಹ
ಮುಖ್ಯ! ಮುಖಾಮುಖಿ ಇಲ್ಲಿ ತಾನೆ ?

ಅಲ್ಲಿ, ಆಡುತ್ತ ಕಲಿತಿದ್ದನ್ನು
ಇಲ್ಲಿ ಗಂಡನ ಮನೆಯಲ್ಲಿ
ಪ್ರಯೋಗಿಸಬೇಕಾಗಿ ಬಂದಾಗ
ತಪ್ಪುಗಳಾಗುವುದು ಸಹಜ ತಾನೆ ?

ಆಗೆಲ್ಲಾ! ತಿದ್ದಿ ತಿಳಿಸಿ ಹೇಳುವರಾರು ?
ಹಿರಿತನದ ಹೆಸರಲ್ಲಿ
ಬಯ್ದು ಬಡಿದು ಕಂಗೆಡಿಸುವರೆ ಬಹಳ ತಾನೆ ?
ಆಗ ಮನಸಿಗೆ ಏನನ್ನಿಸುತ್ತೆ
ನೀವೆ ಹೇಳಿ.

ಪ್ರಾಯವು ತುಂಬಾ ರಮ್ಯವಾದದ್ದು
ತಲೆತುಂಬಾ ನೂರಾರು ಸಿಹಿ ಸಿಹಿ ಕಲ್ಪನೆ, ಕನಸುಗಳು
ಪುಕ್ಕ ಬಿಚ್ಚಿದ ನವಿಲಿನಂತೆ ಒಂದೇ ಸಮನೆ ಕುಣಿಯುತ್ತಿರುತ್ತವೆ
ಯಾವುದು ಮಾಡೋಣ, ಹೇಗೆ ತಣಿಯೋಣ ಅನ್ನಿಸುತ್ತಿರುತ್ತದೆ.
ಇಂತದಕ್ಕೆಲ್ಲಾ ಒಟ್ಟು ಕುಟಂಬದಲ್ಲಿ ಆಸ್ಪದವಿರುತ್ತದೆಯೆ?

ಸರಸ ಸಲ್ಲಾಪ ವಿಹಾರ ವಿನೋದಗಳು ಗೌರವವಲ್ಲ ಎನ್ನುವಾಗ
ಮೂರ ಹೊತ್ತು ಮೂಗು ಹಿಡಿದುಕೊಂಡು ದುಡಿಯುತ್ತಿರಬೇಕೆಂದಾಗ
ಕೆಲವೊಮ್ಮೆ ಏಕಾಂತದ ಸಾಧನೆಯ ದುಸ್ತರವಾಗುವಾಗ
ದಿನ ದಿನಕ್ಕೆ ಕಿಚ್ಚು ಪುಟವಾಗುತ್ತ ಹೋಗುವುದೇ ಹೊರತು
ತಣಿಯುವುದಿಲ್ಲ;
ಅಂದಾಗ ಏನು ಮಾಡಬೇಕು ?

ಕೂಡಿ ಇದ್ದಾಗ ವ್ಯಕ್ತಿ ಗೌಣವಾಗುವನು
ಒಟ್ಟಾರೆಯ ವಿಚಾರಗಳು ತೂಕವಾಗುವವು
ಹೋಲಿಕೆ, ವ್ಯತ್ಯಾಸ ಹುಟ್ಟಿ ಮನಸು ರಾಡಿಯಾಗುವುದು
ತಾರುಣ್ಯದ ವಿಶಿಷ್ಟ ಬೆಳವಣಿಗೆಯಲ್ಲಿ
ತಂದೆ ತಾಯಿ ಅಣ್ಣ ತಮ್ಮಂದಿರೆಂಬ ಅನುಬಂಧದ ಕಾವು ತಗ್ಗುವುದು
ಆಗ…..
ಇದರ ಹಿಂದೆ ಇಷ್ಟು ಇನ್ನೆಷ್ಟೋ ಇರುವಾಗ
ನಮ್ಮನ್ನು ದೂರುವುದು ಯಾವ ನ್ಯಾಯ ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...