Home / ಕವನ / ಕವಿತೆ / ಬಯಕೆಯುತ್ಸವ

ಬಯಕೆಯುತ್ಸವ

ಬಂತು ಶ್ರಾವಣ
ಎಂತು ಬದುಕುವಳೊ
ನಲ್ಲೆ ಜೀವ ಉಳಿಸಿ
ಎಂದು ಹಪಹಪಿಸಿ
ಮೈಗೆ ಮನಸ್ಸಿಗೆ ಯಾತನೆಯ ಬರಿಸಿ
ಬರಿದೆ ಕೊರಗದಿರು, ಸೊರಗದಿರು ನಲ್ಲ
ತುಂತುರು ಮಳೆಯ ತುಷಾರಕ್ಕೆ
ತಂಗಾಳಿಯ ಅಲೆ ಬಂದು ಸಿಲುಕಿದಾಗ
ನನ್ನ ಹೃದಯದ ಎಳೆ ಎಳೆದಂತಾಗಿ
ಯಕ್ಷ, ನಿನ್ನ ನೆನಪಿನ ಸುಳಿ ಏಳುವುದು
ಮೊದಲ ದಿವಸಗಳ, ರಾತ್ರಿಗಳ, ಕ್ಷಣಗಳ
ಅನುಭವದ ಸ್ವರ್ಗಸುಖ
ಎಂತು ಬರುವುದೊ ಮತ್ತೊಮ್ಮೆ
ಎಂದು ನನ್ನ ಜೀವವೂ ತುಡಿಯುವುದು
ಮಿಡಿಯುವುದು….
ಹಿಂದಿನಂತಲ್ಲ.
ಇಂದು ಬರಗಾಲವಿಲ್ಲ
ಈ ಸಲ ನಭವೇ ಕಳಚಿ ಬಿದ್ದಿದೆ
ಮೇಘ ಮಿತ್ರ ನಮ್ಮ ವಿರಹ ವಾರ್ತೆಯನು
ಹೊತ್ತು
ದುಃಖ ಭಾರವ ತಾಳಲಾರದೆ
ಬಾಂದಳದಿಂದ ಬಿದ್ದು
ಎಲ್ಲಡೆಯಲ್ಲು ನೆರೆಯನು ಬರಿಸಿದ್ದಾನೆ
ಹಸು-ಹಟ್ಟಿ ಬೆಳೆ-ಮಳೆ ಜನ ವಸತಿ-
ಗಳನೆಲ್ಲ ಹೊಚ್ಚಳಿಸಿ
ನಮ್ಮ ಮಂತ್ರಿಗಳನ್ನು ಮತ್ತೊಮ್ಮೆ
ವಿಮಾನ ವೀಕ್ಷಣಕೆ ಭರವಸೆಗಳ ಭಾಷಣಕೆ
ತೊಡಗಿಸಿದ್ದಾನೆ.
ಆದರೂ
ಪ್ರೇಮಿಗಳಿಬ್ಬರನು
ಜಾತಿ ನೀತಿಯ ಸಂಪತ್ತಿನ ಸವಾಲು ಹಾಕಿ
ಅಗಲಿಪುದೆ ಸುಖ ಈಜಗಕೆ
ಮೊನ್ನೆ…. ಕೇಳಿದೆಯಲ್ಲ
ಪ್ರಖರ ಪ್ರೇಮಿಗಳೀರ್ವರು
ಒಂದೆ ಉರುಳಿಗೆ ತಮ್ಮ ಕೊರಳನ್ನು ಬಿಗಿದು
ಅಪ್ಪಿಕೊಂಡೇ ಇಹದ ಜಂಜಡದಿಂದ
ರಿಕ್ತರಾದುದ, ಮುಕ್ತರಾದುದ… ಕೇಳಿದೆಯಲ್ಲ
ದೂರವಾಣಿಯಲಿ ನನ್ನ ಮನದಳಲುಗಳ
ಕೂರವಾಗಿಹ ಗತಿವಿಧಿಯ
ದೂರಿ ಹೇಳುವ ಮನಸಾದರೂ
ದೂರವಾಣಿಯ ತಾರೊತ್ತಿ
ದೂರುಗಳ ಸೆರೆಹಿಡಿದ
ಚೋರರ ಭಯವಾಗಿ
ನಿನ್ನ ರಾಜಪದವಿಯನೆ ಕಸಿದು
ದುರ್ಗತಿಗೆಸೆದು
ಪದಚ್ಯುತಿಗೊಳಿಸಿ ಅಳಿಸಿ
ನಿನ್ನವರನ್ನೆ ನಿನ್ನ ವಿರುದ್ಧ ಮಸೆದು
ಸತ್ತೆಯನೆ ಬದಲಿಸುವರೆಂಬ
ಅಳಕು ಬಂತು ಸುತ್ತಿ…
ಅಂಚೆ ವಿಧೇಯಕ
ಕಾಯಿದೆಯಾಗುವ ಮುನ್ನ
ನನ್ನ ದುಗುಡದ ವಿಸ್ತಾರವನ್ನ
ಎಕ್ಕಣಿಸಿ
ಆಷಾಡದ ಪ್ರಥಮ ದಿವಸಗಳ
ಸವಿನೆನಪು ರಸನಿಮಿಷಗಳ
ಲೆಕ್ಕಣಿಸಿ
ಕಳಿಸುವೆನು ನಿನಗೊಂದು
ಪ್ರಣಯ ಪತ್ರವ ಚಿನ್ನ
ಅದಕೆಂದೆ ಮಿಲನದ
ಬಯಕೆಯುತ್ಸವದಿ ಕೊಡೆ ಬಿಡಿಸಿ
ಬದುಕಿರುವೆ ಶ್ರಾವಣದಲು
ಜೀವ ಉಳಿಸಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...