Home / ಕವನ / ಕವಿತೆ / ಬಯಕೆಯುತ್ಸವ

ಬಯಕೆಯುತ್ಸವ

ಬಂತು ಶ್ರಾವಣ
ಎಂತು ಬದುಕುವಳೊ
ನಲ್ಲೆ ಜೀವ ಉಳಿಸಿ
ಎಂದು ಹಪಹಪಿಸಿ
ಮೈಗೆ ಮನಸ್ಸಿಗೆ ಯಾತನೆಯ ಬರಿಸಿ
ಬರಿದೆ ಕೊರಗದಿರು, ಸೊರಗದಿರು ನಲ್ಲ
ತುಂತುರು ಮಳೆಯ ತುಷಾರಕ್ಕೆ
ತಂಗಾಳಿಯ ಅಲೆ ಬಂದು ಸಿಲುಕಿದಾಗ
ನನ್ನ ಹೃದಯದ ಎಳೆ ಎಳೆದಂತಾಗಿ
ಯಕ್ಷ, ನಿನ್ನ ನೆನಪಿನ ಸುಳಿ ಏಳುವುದು
ಮೊದಲ ದಿವಸಗಳ, ರಾತ್ರಿಗಳ, ಕ್ಷಣಗಳ
ಅನುಭವದ ಸ್ವರ್ಗಸುಖ
ಎಂತು ಬರುವುದೊ ಮತ್ತೊಮ್ಮೆ
ಎಂದು ನನ್ನ ಜೀವವೂ ತುಡಿಯುವುದು
ಮಿಡಿಯುವುದು….
ಹಿಂದಿನಂತಲ್ಲ.
ಇಂದು ಬರಗಾಲವಿಲ್ಲ
ಈ ಸಲ ನಭವೇ ಕಳಚಿ ಬಿದ್ದಿದೆ
ಮೇಘ ಮಿತ್ರ ನಮ್ಮ ವಿರಹ ವಾರ್ತೆಯನು
ಹೊತ್ತು
ದುಃಖ ಭಾರವ ತಾಳಲಾರದೆ
ಬಾಂದಳದಿಂದ ಬಿದ್ದು
ಎಲ್ಲಡೆಯಲ್ಲು ನೆರೆಯನು ಬರಿಸಿದ್ದಾನೆ
ಹಸು-ಹಟ್ಟಿ ಬೆಳೆ-ಮಳೆ ಜನ ವಸತಿ-
ಗಳನೆಲ್ಲ ಹೊಚ್ಚಳಿಸಿ
ನಮ್ಮ ಮಂತ್ರಿಗಳನ್ನು ಮತ್ತೊಮ್ಮೆ
ವಿಮಾನ ವೀಕ್ಷಣಕೆ ಭರವಸೆಗಳ ಭಾಷಣಕೆ
ತೊಡಗಿಸಿದ್ದಾನೆ.
ಆದರೂ
ಪ್ರೇಮಿಗಳಿಬ್ಬರನು
ಜಾತಿ ನೀತಿಯ ಸಂಪತ್ತಿನ ಸವಾಲು ಹಾಕಿ
ಅಗಲಿಪುದೆ ಸುಖ ಈಜಗಕೆ
ಮೊನ್ನೆ…. ಕೇಳಿದೆಯಲ್ಲ
ಪ್ರಖರ ಪ್ರೇಮಿಗಳೀರ್ವರು
ಒಂದೆ ಉರುಳಿಗೆ ತಮ್ಮ ಕೊರಳನ್ನು ಬಿಗಿದು
ಅಪ್ಪಿಕೊಂಡೇ ಇಹದ ಜಂಜಡದಿಂದ
ರಿಕ್ತರಾದುದ, ಮುಕ್ತರಾದುದ… ಕೇಳಿದೆಯಲ್ಲ
ದೂರವಾಣಿಯಲಿ ನನ್ನ ಮನದಳಲುಗಳ
ಕೂರವಾಗಿಹ ಗತಿವಿಧಿಯ
ದೂರಿ ಹೇಳುವ ಮನಸಾದರೂ
ದೂರವಾಣಿಯ ತಾರೊತ್ತಿ
ದೂರುಗಳ ಸೆರೆಹಿಡಿದ
ಚೋರರ ಭಯವಾಗಿ
ನಿನ್ನ ರಾಜಪದವಿಯನೆ ಕಸಿದು
ದುರ್ಗತಿಗೆಸೆದು
ಪದಚ್ಯುತಿಗೊಳಿಸಿ ಅಳಿಸಿ
ನಿನ್ನವರನ್ನೆ ನಿನ್ನ ವಿರುದ್ಧ ಮಸೆದು
ಸತ್ತೆಯನೆ ಬದಲಿಸುವರೆಂಬ
ಅಳಕು ಬಂತು ಸುತ್ತಿ…
ಅಂಚೆ ವಿಧೇಯಕ
ಕಾಯಿದೆಯಾಗುವ ಮುನ್ನ
ನನ್ನ ದುಗುಡದ ವಿಸ್ತಾರವನ್ನ
ಎಕ್ಕಣಿಸಿ
ಆಷಾಡದ ಪ್ರಥಮ ದಿವಸಗಳ
ಸವಿನೆನಪು ರಸನಿಮಿಷಗಳ
ಲೆಕ್ಕಣಿಸಿ
ಕಳಿಸುವೆನು ನಿನಗೊಂದು
ಪ್ರಣಯ ಪತ್ರವ ಚಿನ್ನ
ಅದಕೆಂದೆ ಮಿಲನದ
ಬಯಕೆಯುತ್ಸವದಿ ಕೊಡೆ ಬಿಡಿಸಿ
ಬದುಕಿರುವೆ ಶ್ರಾವಣದಲು
ಜೀವ ಉಳಿಸಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...