Home / ಕವನ / ಕವಿತೆ / ಅಮ್ಮ

ಅಮ್ಮ

ನನ್ನಮ್ಮ ಬೆಂಗಳೂರಿಗೆ ಬಂದವಳಲ್ಲ
ಮೆಜೆಸ್ಟಿಕ್‌ನ ವಾಕಿಂಗ್‌ಸ್ಟಿಕ್ಕಾಗಿ ಸಿಕ್ಕಾಗಿ
ತನ್ನತನ ಮುಕ್ಕಾಗಿ ಸಿನಿಮಾ ಮಹಲು
ರಸ್ತೆಯಮಲಿಗೆ ಸಿಕ್ಕಿದವಳಲ್ಲ.
ಸೀಳುಹಾದಿಯಲ್ಲಿ ಕೂಳೆಹೊಲದಲ್ಲಿ ಕಾಲುಬಲಿತು
ಕೂದಲು ನರೆತವಳು.
ಸದಾ ಸೌದೆ ಬುತ್ತಿ ನೆತ್ತಿಮೇಲಿಟ್ಟು ಕರ್ಮಿಸುವ
ನೀತಿ ನಿಯತ್ತು ನಿರ್ಮಿಸುವ
ನಿದರ್ಶನವಾದವಳು.
ಭೂತ ಗರ್ಭದಲ್ಲಿ ಹೊತ್ತು ವರ್ತಮಾನದಲ್ಲಿ ಹೆತ್ತು
ಭವಿಷ್ಯದ ಬಾಗಿಲಿಗೆ ನನ್ನ ಬಿಟ್ಟವಳು.
ಬಗಲಲ್ಲಿ ಜಗಲಿಯಲ್ಲಿ ಹರಿಸುವ ತೊದಲಲ್ಲಿ
ತಣಿದು ಕೈಹಿಡಿದು ನಡೆಸಿದವಳು
ಮೌನಗೌನಿನಲ್ಲಿ ಅರಳುಮನವಾದವಳು.

ಆಕೆ ಬಿತ್ತಿದ ಬಯಲು ಮಮತೆ ಮಡಿಲು
ಸುಳಿಯಾಗಿ ಬಿಡುತ್ತೆ.
ಕುರ್ಜಿಗೆಯಿಂದ ಕಳೆ ತೆಗೆದು ಪೈರು ಮುದ್ದಿಸುವ
ಸಹಜ ಸ್ಫುರಣ ಹೂರಣ ಒಳಗೆಳೆಯುತ್ತೆ.

ಅಲ್ಲಿ ಹಬ್ಬಿದಾಲದ ನೆರಳು; ತಬ್ಬಿ ತಣಿಯುವ ಕರುಳು
ಆಳದ ಹೆಜ್ಜೆಯೊತ್ತುಗಳು; ಭೂತ ಬದ್ಧಗಳು;
ಭಟ್ಟಂಗಿ ಸ್ವಾ-ಗತ ಶೈಲಿ ಮೈಲಿಗಲ್ಲುಗಳು.

ಅಮ್ಮನ ಬಾಳ ಬೇಲಿಯಲ್ಲಿ ಬೆಳೆದೆ.
ತೋಳುತಲ್ಪದಲ್ಲಿ ಒಂದೊಂದೇ ತುತ್ತು ತಿಂದೆ.
ನೆರಳು ಕರುಳು ಕರೆದ ಸುಖಕ್ಕೆ ಸಂದೆ.
ಬರಬರುತ್ತ ಬೇಲಿಯಾಚೆ ಬದುಕಿನ ಬೆದಕು; ಚುರುಕು.
ಗೇಟು ದಾಟಿ ಹೊರಗೆ ಹೂದೋಟ ನೋಟ; ಸಿದ್ದಾರ್ಥಮಾಟ.
ಬಿಸಿಲ ಟಿಸಿಲಲ್ಲಿ ಹೂ ಹಣ್ಣಿನಾಸೆ; ಬುದ್ಧಪಿಪಾಸೆ.
ಹುಡುಕುತ್ತ ಹೊರಟವನನ್ನು ಬೇಲಿಬಿಟ್ಟು-
ನೋಡುತ್ತಾಳೆ; ಭವಿಷ್ಯ ತಿನಸು ಕನಸುತ್ತಾಳೆ.
ಹೋಗುತ್ತಲೇ ಇರುವ ನಾನಲ್ಲೇ ಕರಗುವುದನು
ಕಾಣಲಾರದೆ ಕೈಬೀಸಿ ಧ್ವನಿಸುತ್ತಾಳೆ.
ಓಡಿಬಂದು ಗೇಟಿನ ಬಳಿ ತಾಯ ತೆಕ್ಕೆಗೆ ಬಿದ್ದ
ನನಗೆ ಹೂದೋಟದಾಸೆ.
ತಾಯ ಬೇಲಿ-ನನ್ನ ಹೂದೋಟಗಳ
ಗೇಟು ಒಂದಾಗಿಸುವಾಸೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...