Home / ಕವನ / ಕವಿತೆ / ಅಮ್ಮ

ಅಮ್ಮ

ನನ್ನಮ್ಮ ಬೆಂಗಳೂರಿಗೆ ಬಂದವಳಲ್ಲ
ಮೆಜೆಸ್ಟಿಕ್‌ನ ವಾಕಿಂಗ್‌ಸ್ಟಿಕ್ಕಾಗಿ ಸಿಕ್ಕಾಗಿ
ತನ್ನತನ ಮುಕ್ಕಾಗಿ ಸಿನಿಮಾ ಮಹಲು
ರಸ್ತೆಯಮಲಿಗೆ ಸಿಕ್ಕಿದವಳಲ್ಲ.
ಸೀಳುಹಾದಿಯಲ್ಲಿ ಕೂಳೆಹೊಲದಲ್ಲಿ ಕಾಲುಬಲಿತು
ಕೂದಲು ನರೆತವಳು.
ಸದಾ ಸೌದೆ ಬುತ್ತಿ ನೆತ್ತಿಮೇಲಿಟ್ಟು ಕರ್ಮಿಸುವ
ನೀತಿ ನಿಯತ್ತು ನಿರ್ಮಿಸುವ
ನಿದರ್ಶನವಾದವಳು.
ಭೂತ ಗರ್ಭದಲ್ಲಿ ಹೊತ್ತು ವರ್ತಮಾನದಲ್ಲಿ ಹೆತ್ತು
ಭವಿಷ್ಯದ ಬಾಗಿಲಿಗೆ ನನ್ನ ಬಿಟ್ಟವಳು.
ಬಗಲಲ್ಲಿ ಜಗಲಿಯಲ್ಲಿ ಹರಿಸುವ ತೊದಲಲ್ಲಿ
ತಣಿದು ಕೈಹಿಡಿದು ನಡೆಸಿದವಳು
ಮೌನಗೌನಿನಲ್ಲಿ ಅರಳುಮನವಾದವಳು.

ಆಕೆ ಬಿತ್ತಿದ ಬಯಲು ಮಮತೆ ಮಡಿಲು
ಸುಳಿಯಾಗಿ ಬಿಡುತ್ತೆ.
ಕುರ್ಜಿಗೆಯಿಂದ ಕಳೆ ತೆಗೆದು ಪೈರು ಮುದ್ದಿಸುವ
ಸಹಜ ಸ್ಫುರಣ ಹೂರಣ ಒಳಗೆಳೆಯುತ್ತೆ.

ಅಲ್ಲಿ ಹಬ್ಬಿದಾಲದ ನೆರಳು; ತಬ್ಬಿ ತಣಿಯುವ ಕರುಳು
ಆಳದ ಹೆಜ್ಜೆಯೊತ್ತುಗಳು; ಭೂತ ಬದ್ಧಗಳು;
ಭಟ್ಟಂಗಿ ಸ್ವಾ-ಗತ ಶೈಲಿ ಮೈಲಿಗಲ್ಲುಗಳು.

ಅಮ್ಮನ ಬಾಳ ಬೇಲಿಯಲ್ಲಿ ಬೆಳೆದೆ.
ತೋಳುತಲ್ಪದಲ್ಲಿ ಒಂದೊಂದೇ ತುತ್ತು ತಿಂದೆ.
ನೆರಳು ಕರುಳು ಕರೆದ ಸುಖಕ್ಕೆ ಸಂದೆ.
ಬರಬರುತ್ತ ಬೇಲಿಯಾಚೆ ಬದುಕಿನ ಬೆದಕು; ಚುರುಕು.
ಗೇಟು ದಾಟಿ ಹೊರಗೆ ಹೂದೋಟ ನೋಟ; ಸಿದ್ದಾರ್ಥಮಾಟ.
ಬಿಸಿಲ ಟಿಸಿಲಲ್ಲಿ ಹೂ ಹಣ್ಣಿನಾಸೆ; ಬುದ್ಧಪಿಪಾಸೆ.
ಹುಡುಕುತ್ತ ಹೊರಟವನನ್ನು ಬೇಲಿಬಿಟ್ಟು-
ನೋಡುತ್ತಾಳೆ; ಭವಿಷ್ಯ ತಿನಸು ಕನಸುತ್ತಾಳೆ.
ಹೋಗುತ್ತಲೇ ಇರುವ ನಾನಲ್ಲೇ ಕರಗುವುದನು
ಕಾಣಲಾರದೆ ಕೈಬೀಸಿ ಧ್ವನಿಸುತ್ತಾಳೆ.
ಓಡಿಬಂದು ಗೇಟಿನ ಬಳಿ ತಾಯ ತೆಕ್ಕೆಗೆ ಬಿದ್ದ
ನನಗೆ ಹೂದೋಟದಾಸೆ.
ತಾಯ ಬೇಲಿ-ನನ್ನ ಹೂದೋಟಗಳ
ಗೇಟು ಒಂದಾಗಿಸುವಾಸೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ