Home / ಕವನ / ಕವಿತೆ / ಅಮ್ಮ

ಅಮ್ಮ

ನನ್ನಮ್ಮ ಬೆಂಗಳೂರಿಗೆ ಬಂದವಳಲ್ಲ
ಮೆಜೆಸ್ಟಿಕ್‌ನ ವಾಕಿಂಗ್‌ಸ್ಟಿಕ್ಕಾಗಿ ಸಿಕ್ಕಾಗಿ
ತನ್ನತನ ಮುಕ್ಕಾಗಿ ಸಿನಿಮಾ ಮಹಲು
ರಸ್ತೆಯಮಲಿಗೆ ಸಿಕ್ಕಿದವಳಲ್ಲ.
ಸೀಳುಹಾದಿಯಲ್ಲಿ ಕೂಳೆಹೊಲದಲ್ಲಿ ಕಾಲುಬಲಿತು
ಕೂದಲು ನರೆತವಳು.
ಸದಾ ಸೌದೆ ಬುತ್ತಿ ನೆತ್ತಿಮೇಲಿಟ್ಟು ಕರ್ಮಿಸುವ
ನೀತಿ ನಿಯತ್ತು ನಿರ್ಮಿಸುವ
ನಿದರ್ಶನವಾದವಳು.
ಭೂತ ಗರ್ಭದಲ್ಲಿ ಹೊತ್ತು ವರ್ತಮಾನದಲ್ಲಿ ಹೆತ್ತು
ಭವಿಷ್ಯದ ಬಾಗಿಲಿಗೆ ನನ್ನ ಬಿಟ್ಟವಳು.
ಬಗಲಲ್ಲಿ ಜಗಲಿಯಲ್ಲಿ ಹರಿಸುವ ತೊದಲಲ್ಲಿ
ತಣಿದು ಕೈಹಿಡಿದು ನಡೆಸಿದವಳು
ಮೌನಗೌನಿನಲ್ಲಿ ಅರಳುಮನವಾದವಳು.

ಆಕೆ ಬಿತ್ತಿದ ಬಯಲು ಮಮತೆ ಮಡಿಲು
ಸುಳಿಯಾಗಿ ಬಿಡುತ್ತೆ.
ಕುರ್ಜಿಗೆಯಿಂದ ಕಳೆ ತೆಗೆದು ಪೈರು ಮುದ್ದಿಸುವ
ಸಹಜ ಸ್ಫುರಣ ಹೂರಣ ಒಳಗೆಳೆಯುತ್ತೆ.

ಅಲ್ಲಿ ಹಬ್ಬಿದಾಲದ ನೆರಳು; ತಬ್ಬಿ ತಣಿಯುವ ಕರುಳು
ಆಳದ ಹೆಜ್ಜೆಯೊತ್ತುಗಳು; ಭೂತ ಬದ್ಧಗಳು;
ಭಟ್ಟಂಗಿ ಸ್ವಾ-ಗತ ಶೈಲಿ ಮೈಲಿಗಲ್ಲುಗಳು.

ಅಮ್ಮನ ಬಾಳ ಬೇಲಿಯಲ್ಲಿ ಬೆಳೆದೆ.
ತೋಳುತಲ್ಪದಲ್ಲಿ ಒಂದೊಂದೇ ತುತ್ತು ತಿಂದೆ.
ನೆರಳು ಕರುಳು ಕರೆದ ಸುಖಕ್ಕೆ ಸಂದೆ.
ಬರಬರುತ್ತ ಬೇಲಿಯಾಚೆ ಬದುಕಿನ ಬೆದಕು; ಚುರುಕು.
ಗೇಟು ದಾಟಿ ಹೊರಗೆ ಹೂದೋಟ ನೋಟ; ಸಿದ್ದಾರ್ಥಮಾಟ.
ಬಿಸಿಲ ಟಿಸಿಲಲ್ಲಿ ಹೂ ಹಣ್ಣಿನಾಸೆ; ಬುದ್ಧಪಿಪಾಸೆ.
ಹುಡುಕುತ್ತ ಹೊರಟವನನ್ನು ಬೇಲಿಬಿಟ್ಟು-
ನೋಡುತ್ತಾಳೆ; ಭವಿಷ್ಯ ತಿನಸು ಕನಸುತ್ತಾಳೆ.
ಹೋಗುತ್ತಲೇ ಇರುವ ನಾನಲ್ಲೇ ಕರಗುವುದನು
ಕಾಣಲಾರದೆ ಕೈಬೀಸಿ ಧ್ವನಿಸುತ್ತಾಳೆ.
ಓಡಿಬಂದು ಗೇಟಿನ ಬಳಿ ತಾಯ ತೆಕ್ಕೆಗೆ ಬಿದ್ದ
ನನಗೆ ಹೂದೋಟದಾಸೆ.
ತಾಯ ಬೇಲಿ-ನನ್ನ ಹೂದೋಟಗಳ
ಗೇಟು ಒಂದಾಗಿಸುವಾಸೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...