Home / ಕವನ / ಕವಿತೆ / ಹೆಸರಿಲ್ಲದ ಬಂಧ

ಹೆಸರಿಲ್ಲದ ಬಂಧ

ನವಿಲುಗರಿ ತೊಟ್ಟ ಹಸ್ತದ
ಮೋಹನಾಂಗನ ಕಂಡಾಗಲೆಲ್ಲಾ
ನನಗೋ ನವಿಲಾಗುವ ಬಯಕೆ
ಕುಣಿವ ಮನದ ತಹಬದಿಯ ತಂತು
ಅದೇಕೋ ಬಿದಿರು ಕೋಲಿಗೆ ದಕ್ಕಿದ್ದು.

ಹುಸಿಭರವಸೆಗಳ
ಕಪಟಮಾತುಗಳೊಡಯ
ಅದೆಷ್ಟು ನಂಬುವೆ ನಾನು ನಿನ್ನ.
ಯಮುನೆ ತಟದ ಜುಳುಜುಳು ಗಾನದ
ಹೊರತಾಗಿಯೂ
ಯಾವ ಝರಿಯ ನಾದ
ನಿನ್ನ ಕಾಡುತಿದೆಯೋ
ಅದ ಕೇಳಬೇಕೆನ್ನಿಸುವುದಿಲ್ಲ.

ಗೆಜ್ಜೆ ಹಿಡಿಯುವ ಕಲೆ
ನಿನಗೆ ಕಲಿಸಬೇಕೆಂದಿಲ್ಲ.
ನೀನು ಉಸಿರಿಟ್ಟ ಕಡೆಗೆಲ್ಲಾ ಸುಳಿವ
ನೀಳನಾಸಿಕದ ಗೋಪಿಯರ
ಸಪೂರ ಸೊಂಟದ ಸುತ್ತ
ಬಳಸಿದ ನಿನ್ನ ಕೈಗಳ
ಕಟ್ಟಿಹಾಕಬೇಕೆನ್ನಿಸುವುದಿಲ್ಲ.

ಉನ್ಮತ್ತ ಶೃಂಗದ ಹಾಸು
ಸಿಕ್ಕಿದ ಭ್ರಮೆಯಲ್ಲಿ
ಕಾಡಾನೆ ಮದವೇರಿ ತನ್ನ ಬುಡವನ್ನೇ
ಹೊಸಕಿಹಾಕಿದಂತೆ
ಮನ ಮಾರಿಕೊಂಡಾದ ಮೇಲೆ
ಬೇಲಿ ಗಟ್ಟಿಗೊಳಿಸಬೇಕೆನ್ನಿಸುವುದಿಲ್ಲ.

ಆದರೂ ಸುಖಾತೀಸುಖದ ಹೆಮ್ಮೆ
ಹೊತ್ತ ಮುಖಗಳ ಸವರಿಕೊಂಡು
ಬಂದ ಗಾಳಿ ಕಾರಣವೇ
ಇಲ್ಲದೇ ನನ್ನ ಕೆಣಕುತ್ತದೆ.
ನನ್ನ ಪೇಲವ ಮುಖದ ಮ್ಲಾನತೆಗೆ
ನಿನ್ನ ನಿರಾಕರಣೆ ಕಾರಣ
ಎನ್ನಬೇಕೆನ್ನಿಸುವುದಿಲ್ಲ.

ಮುಂಗುರುಳ ಹೆರಳುಗಳು
ನಿನ್ನ ಕೈ ಬೆರಳ ಸಂದಿಯಲ್ಲಿ
ಹೊರಳಿ ನರಳಿ
ಬೆಳಕಾದವಂತೆ.
ನನಗೇನೂ ಈ ಬಂಧಕ್ಕೆ
ಹೆಸರಿಡಬೇಕೆಂದು ಅನ್ನಿಸುವುದೇ ಇಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...