Home / ಕವನ / ಕವಿತೆ / ಕತ್ತಲ ಗೂಡಿನ ದೀಪ

ಕತ್ತಲ ಗೂಡಿನ ದೀಪ

ಮೈತುಂಬಾ ಮಸಿ ಮೆತ್ತಿದರೂ
ತೊಳೆದು ಬರಬಲ್ಲರು ಅವರು
ಕೇಳಲುಬಾರದು
ಮಸಿಯ ಮೂಲಕ್ಕೆ ಕಾರಣ
ಅವರು ಮೇಲ್ಪಂಕ್ತಿಯ ಊಟಕ್ಕೆ ಕುಳಿತವರು.

ಬಿಳಿಮೈಯ ಮಾತಿಗೆ ಬಸವನ ಗೋಣು
ಎಂಜಲೆಲೆಗೆ ಮೈ ಉಜ್ಜಿಕೊಂಡವರು ಇವರು.
ಕರಿಮೈಯ ಮಾರನ ಮನೆಯ
ದೀಪದ ಬೆಳಕಿಗೆ ಯಾವ ಬಣ್ಣ

ಕೇಳಲೇ ಇಲ್ಲ, ಬಲ್ಲವರು
ತಗ್ಗಿದ ತಲೆಗಳ ಎತ್ತಲಾಗಲೇ ಇಲ್ಲ
ಜಾತಿ ಎಂಬ ಬಾವಿಯ ಆರದ ನೀರು
ಸಿಹಿಯಲ್ಲ, ಉಪ್ಪುಪ್ಪು.

ಆದೇ ಆಗ ಮೂಡಿದ್ದ
ಪೂರ್ವದಲ್ಲೊಬ್ಬ ಪ್ರಖರ ಸೂರ್ಯ
ದೀನ ದಲಿತರ ಹಾಡುಗಳು
ಮುಖಪುಟದ ಮೇಲೆ ಮೂಡಲಾರಂಭಿಸಿದವು
ಮಂತ್ರಗಳ ಮೇಲೋಚ್ಛಾಟನೆ ಮಾಡಿ.

ಆತನ ಕಣ್ಣುಗಳಲ್ಲಿ ತೀಕ್ಷ್ಣ ಹೊಳಪು
ಭಂಡಾರ ಮೆತ್ತಿದ ಹಣೆಗಳು
ತಲೆತಗ್ಗಿಸಿದವು.

ಬೆಚ್ಚಿಬಿದ್ದರು ಧರ್ಮಸೈತಾನರು
ಮೈಗಂಟಿದ ದಾರ ಬಿಗಿಯಾಗಿ
ಉಸಿರುಗಟ್ಟಿದಂತೆ

ಜಲಪಾತದ ವಾಙ್ಮಯಕ್ಕೆ
ಬೆದರಿದ ಪುರಾಣಗಳು
ಪಟಪಟನೇ ಉದುರಿಬಿದ್ದವು.

ಅದೊಂದು ಧಾತುವಿನಿಂದ
ಹೊಮ್ಮಿದ, ಪಲ್ಲವಿಸಿದ
ರಕ್ತದಲ್ಲೇ ಬೆಂಕಿಯುಗುಳುವ
ಲಾವಾ ತುಂಬಿಕೊಂಡ
ಬೆಂಕಿಯುಂಡೆಗಳು
ವರ್ತಮಾನದ ಬಾಗಿಲ ಕಾವಲುಗಾರರು

ಕತ್ತಲೆಗೂಡಿನ ದೀಪಗಳು
ಜಗ್ಗನೇ ಉರಿಯುತ್ತಿವೆ.
ಬಾಯಿಲ್ಲದವನ ಕೂಗಿಗೆ
ಕಂಚಿನ ಕಂಠ ಎರವಲು ಸಿಕ್ಕಿದೆ.
ದಲಿತರ ಕೇರಿಗಳು
ದಿಗ್ವಿಜಯದ ಕೇಕೆಗಳು

ಪ್ರತಿ ಉದಯವೂ
ಮಾರ್ದವದ ಸೌಂದರ್ಯ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...