Home / ಕವನ / ಕವಿತೆ / ೨೬-೧-೫೦

೨೬-೧-೫೦

ತಲೆಯ ಮೇಲಿನ ಹೆಜ್ಜೆ ಎಂದೋ ತೆರಳಿತು
ಪಡುವಲಿನ ಬಿಳಿ ಕೆಂಪು ನೀಲಿ ನೀರನು ದಾಟಿ,
ಮರಕತ ದ್ವೀಪದಮನೆಗೆ. ದಣಿಗೂ ದಣಿವು!
ಇತ್ತ ಈ ಬಿಡುಗಡೆಯೂ ಮೈಮುರಿದು ಪರಶಿವನ
ತ್ರಿಶೂಲದಂತಾಯ್ತು ನೋಡುನ ಕಣ್ಣಿಗೆ!

ತಲೆಯ ಮೇಲಿನ ಹೆಜ್ಜೆ. -ಈ ಮಾತು ಮುಗಿಯಿತು;
‘ಹೆಜ್ಜೆಯೇ ಅಲ್ಲ ಮಕುಟದ ಮುತ್ತು ಅದು,
ಇರಲಿ ರಾಜತ್ವ ನೆಪಮಾತ್ರ’ ಎನುವಂತಿಲ್ಲ,-
ಮಕುಟ ರಹಿತ ಸಾಮ್ರಾಜ್ಞಿ ಭಾರತಲಕ್ಷ್ಮಿ,
ರಾಜತ್ವ ರಹಿತ ರಾಜ್ಯಾಂಗ ಮನೋಮಂದಿರೆ.

ನೆನೆ ನೆನೆ ಓ ಮನನೆ ನಿನ್ನ ಎದೆಗತ್ತಲೆಯೆ
ಬಲಿಗೊಟ್ಟ ತಂದೆ ಬಾಳಿನ ಚಂದ್ರಬಿಂಬವನು.
ಆ ನೋಟ ನಿನ್ನ ಕಣ್ಣಾಗಿ, ಅಮೃತವೆ ತುಂಬಿ,
ಗಾಂಧಿಜಿಯ ಮಂದಹಾಸವೆ ಗುರುವಾಗಲಿ !

ಬಾಂಬಿನ ಅಲಂಕಾರ ನಿನಗಿಲ್ಲ, ತಾಯೆ,
ಶಾಂತಿ ಪ್ರಿಯೆ, ಚಂದ್ರಕಾಂತಿ ಪ್ರಿಯೆ,
ಗಂಗಾ ಯಮುನಾ ನದನದೀ ಸ್ನಾತೆ,
ಉಪನಿಷದ್ವಿಪಿನ ಹೋಮಾಗ್ನಿ ಸಂಜಾತೆ !

ಚಳಿಗಾಲ ಬಂದಿರಲು, ಮುದುಕಿ ಮುಮ್ಮೂಲೆಯಲಿ
ಒಂದು ಕಿಡಿ ಕೆಂಡದೆದುರಿನಲಿ ಮೈ ಹಿಡಿಯಾಗಿ
ಬೆದರಿ ಕುಳಿತಂತೆ, ಚಿಂತೆಗೆ ಆತ್ಮನನು ತೆತ್ತು
ಸಂಗ್ರಾಮ ಭೀತಿಯಲಿ ಸೋತು ಸೊರಗಿ ಜಗತ್ತು
ದೂರ ಸಭೆಗಳಲಿ ಮುಗಿಯುವ ಮುನ್ನ ಎಚ್ಚರಿಸು.
ನಿನ್ನ ಗಂಭೀರವಾಣಿಯ ಪಾರಿವಾಳಗಳ
ಬೆಳ್ಗರಿಯ ಬೀಸಿ ಶಾಂತಿಯ ಶಿಶುವನುಪಚರಿಸು;
ಅದು ಬೆಳೆದು ಲೋಕನಾಯಕನಾಗಿ ರಾರಾಜಿಸಲಿ!

ಜಗಜ್ಜನನಿಯಲ್ಲ ನೀನು; ಜಗನ್ಮೋಹಿನಿಯೂ ಅಲ್ಲ;
ಜಗದ್ಧಾತ್ರಿಯಾಗಿರು ನೀನು; ಅಹಿಂಸಾವತ್ಸಲೆ,
ನಿನ್ನ ಶಾಸನವಿದು (ನಡೆ ನಗಾರಿಯ ಮೇಲೆ;
ಈ ಧರ್ಮ ನಿನ್ನ ಬಾವುಟದ ಇನ್ನೂ ಮೇಲೆ):

“ವಯಂ ಪುನಃ ಏವಂ ಆಚಕ್ಷಾಮಹೇ,
ಏನಂ ಭಾಷಾಮಹೇ, ಏವಂ ಪ್ರರೂಯಾಮಃ,
ಏವಂ ಪ್ರಜ್ಞಾಪಯಾಮಃ,-
ಸರ್ವೇ ಪ್ರಾಣಾಃ, ಸರ್ವೇ ಭೂತಾಃ, ಸರ್ವೇ ಜೀವಾಃ,
ಸರ್ವೇ ಸತ್ವಾಃ,
ನ ಹಂತಾವ್ಯಾಃ
ನ ಆಜ್ಞಾಪರಿಯಿತವ್ಯಾಃ
ನ ಪರಿಗ್ರಹೀತವ್ಯಾಃ
ನ ಪರಿತಾಪಯಿತವ್ಯಾಃ
ನ ಉಪದ್ರೋತವ್ಯಾಃ
ಆರ್ಯವಚನಮೇತತ್
ಓಂ ತತ್‍ಸತ್.”
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...