ಕಮಲ

(ಮತ್ತೇಭವಿಕ್ರೀಡಿತ)

ನಳಿನೀ! ನೀಂ ನಲಿವೈ ವಿಲೋಲಜಲದಾಕಲ್ಲೋಲದುಯ್ಯಾಲೆಗೊಂ
ಡೆಳೆಗೆಂಪಾಂತ ಬಿಸಿಲ್ಗೆ ಮೆಲ್ಲನುಳಿವೈ ಬಲ್ನಿದ್ದೆಯಂ ಕಂಗಳಿಂ!
ಆಳಿಯುಂ ಮೆಲ್ಲುಲಿ, ತಂಬೆಲರ್ ಸೊಗವ, ತೀಡಲ್ ಮೋಡಮಂ ಪೊಂದುವೈ!
ದಳಮಂ ತೂಗುತೆ ನಿದ್ದೆಗೊಳ್ವೆ, ಗೆಳೆಯಂ ಬಾನಿಂ ಮುಳುಂಗಲೈ ನೀಂ! ||೧||

ಸಲಿಲೋತ್ಸಂಗ ವಿನೋದಿನೀ! ಕಮಲಿನೀ! ಮನ್ಮಾನಸೋಲ್ಲಾಸಿನೀ!
ಕಲಿಸೈ ನಿನ್ನವೊಲಾಂ ಮುದಂ ತಳೆವವೊಲ್, ಸಂತಾಪಮಂ ನೀಗುವೋಲ್!
ವಿಲಸದ್ರಮ್ಯತೆಯಿಂ ಸುವಾಸನೆಯಿನಾನಾನಂದಿಪಂತಾವಗಂ,
ಜಲದಾಂದೋಲನದಿಂದೆ ನೀಂ ಸೊಗಸು ತೋರೈ! ಪುಷ್ಪಕಾಂತಾಮಣೀ! ||೨||

ಸರಮಂ ಸಿಂಗರಿಪೈ ವಿಶಾಲದಳದಾ ಸೌಂದರ್ಯದಿಂ ವರ್ಣದಿಂ,
ನರರಂ ರಂಜಿಸುವೈ ನಿರಂತರ ಲಸನ್ಮಾಧುರ್ಯದಿಂ ಲೀಲಿಯಿಂ,
ಧರೆಯೊಳ್ ವರ್ಧಿಸುವೈ ಮಹಾದ್ಭುತಕರ ಶ್ರೀಸೃಷ್ಟಿವೈಚಿತ್ರ್ಯಮಂ.
ಧರಣೀಕರ್ಣದಿನೀಂ ಜಿನುಂಗಿಪೆ ಹರೇರ್ಲೀಲಾ ಮಹತ್ವಂಗಳಂ! ||೩||

ಎಲೆಲೇ! ಮಾನವ ಮೂಢ! ನೋಡು! ಕೆಸರೊಳ್‌ ನಾಳಂ ಮುಳುಂಗಿರ್ದೊಡಂ,
ಜಲಮಂ ಸೋಂಕಿದೊಡಂ ದಳಂ, ಕಮಲಮುಂ ನಿರ್ಲಿಪ್ತಮಾಗುತ್ತೆ ಬಾಂ
ದಳಕಂ ಕಣ್ಣಿಡುವೋಲ್‌-ಮಹಾ ಭವದಿ ನೀನುಂ ಮಗ್ನನಾಗಿರ್ದೊಡಂ,
ಮಲಿನಂಗೊಳ್ಳದಿರೆಂದು ಮೀತನ ಪದಾಂಭೋಜಾತಮಂ ದೃಷ್ಟಿಸೈ! ||೪||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...