Home / ಕವನ / ಕವಿತೆ / ಭೂಮಿ ಗುಂಡಾಗಿದೆ ನಿಜತಾನೆ?

ಭೂಮಿ ಗುಂಡಾಗಿದೆ ನಿಜತಾನೆ?

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ!
ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ;
ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ
ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ.

ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ
ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ;
ಮುಟ್ಟಿದರೆ ಮೈಲಿಗೆ, ಗೆದ್ದವರ ಸಾಲಿಗೆ
ತೆಪ್ಪ ತೇಲಿತು ಬನ್ನಿ ತೆರೆಮೇಲಕೆ.

ಬಣ್ಣಬಣ್ಣದ ಗುಳ್ಳೆ ಬಾಳಂತೆ, ಇರಬಹುದು
ನೀರು ಒಡೆಯುವುದಿಲ್ಲ ಚಿಂತೆ ಏಕೆ?
ಆಟವಾಡಿದ ಜನರು ಹೇಳಿದುದ ಕೇಳಿದಿರ?
ಔಟು ಜೂಟುಗಳೆಲ್ಲ ಕುಣಿವ ನೆಪಕೆ.

ಹರಿದು ಹೋಯಿತು ನನ್ನ ಹಳೆಯ ಪುಸ್ತಕ, ಎಸೆದು
ಆನಂದ ಹೊಸ ‘ಕಾಪಿ’ ಕೊಂಡು ತಂದ;
ಹಳೆ ತಪ್ಪ ತಿದ್ದಿ ಹೊಸ ಹಾಳೆಯಲಿ ಮುದ್ರಿಸಿದೆ
ನೀವೇನೆ ಹೇಳಿ ಇದು ಅದಕು ಚಂದ.

ನೆರೆಯವರು ಯಾರೆಂದೆ ಇನ್ನು ಗೊತ್ತಿಲ್ಲ,
ವರುಷಗಳೆ ಉರುಳಿದುವು ಇಲ್ಲಿ ಬಂದು!
ಮತ್ತೆ ಹೊಕ್ಕುಳ ಸುತ್ತ ದೃಷ್ಟಿ ಸುತ್ತುತ್ತ ಇದೆ
ಹಳೆಯ ಕಥೆ ಕನಸುಗಳ ನೆನಪ ಕೊಂದು.

ಹೆರಳ ಮರೆಯಲಿ ನಿಂತು ಮಲ್ಲಿಗೆಯ ಮೂಸಿದೆವು
ಪರಿಮಳಕೆ ಅರಳಿದುವು ನೂರು ಕನಸು;
ಕತ್ತಲಿನ ಬಟ್ಟಲಲಿ ಬೆಳುದಿಂಗಳನು ತುಂಬಿ
ಮುಖ ಆಚೆ ಬದಿಗಿಹುದು, ಹಡೆದ ನನಸು.

ತೂಬು ತೆರೆಯಲು ನಿನಗೆ ಹಿಂಜರಿಕೆ ಬೇಕಿಲ್ಲ
ಇದೆ ಮೋಡ ಕಡಲು ಕೆರೆಯೊಡಲು ಬಿಸಿಲು;
ನೀರು ತುಂಬಲಿ ನಾಳೆ, ಸರಿಸು ಓದಿದ ಹಾಳೆ
(ಆಟವಾಡಿದ ಜನರ ಮಾತು ಮೇಲೆ).

ಹತ್ತು ವರುಷದ ಹಿಂದೆ ಮತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನಾವೇನೆ!
ಹತ್ತು ವರುಷದ ಮೇಲೆ ಮತ್ತೆ ಬರುವೆವು ಬಿಡಿ
ಭೂಮಿ ಗುಂಡಾಗಿದೆ ನಿಜತಾನೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...