ತಲೆಗೂದಲು ಕೆದರಿರುವುದು
ಗಡ್ಡ ಹೇರಳ ಬೆಳೆದಿರುವುದು
ಕಣ್ಣು ಆಳಕ್ಕೆ ಇಳಿದಿರುವುದು
ಜೇಬಿನಲ್ಲಿ ಬಾಂಬಿರುವುದು
ಮಂದಿಯ ಹಿಂದೆಯು ಇರುವರು
ಮಂದಿಯ ಮುಂದೆಯು ಇರುವರು
ಮಂದಿಯ ನಡುವೆಯ ಇರುವರು
ಯಾರಿಗೂ ಕಾಣದೆ ಇರುವರು
ಹಿಮಾಲಯದ ಮೇಲೆ ಹಿಮ ಬೀಳುವುದು
ಮನೆಯಂಗಳದ ಮೇಲೆ ಮಳೆ ಬೀಳುವುದು
ಕಾಡಿನ ಮೇಲೆ ಬೆಂಕಿ ಬೀಳುವುದು
ನಿದ್ರಿಸಿದವರಿಗೆ ನಿದ್ದೆ ಬೀಳುವುದು
ಒಬ್ಬಾನೊಬ್ಬ ರಾಜ
ಕನಸೊಂದ ಕಂಡ
ಪೇಪರ್ವೈಟಿನ ಬದಲಿಗೆ ಇತ್ತು
ಮೇಜಿನ ಮೇಲವನ ರುಂಡ
ಕೂಡಲೆ ಎದ್ದು ಅಪ್ಪಣೆಮಾಡಿದ
ಪೇಪರ್ ವೈಟುಗಳಿನ್ನು ನಿಷಿದ್ಧ
ಎಲ್ಲವನೂ ಹುಡುಕಿ ತೆಗೆಸಿ
ಸಮುದ್ರದಲ್ಲಿ ಮುಳುಗಿಸಿದ
ಆದರೇನು ಭಯೋತ್ಪಾದಕರು
ಬೇರೆ ಕನಸ ಕಳಿಸಿದರು
ತುಂಡರಿಸಿದ ಅವನ ಕೈಗಳು
ಆದವು ರೇಲ್ವೆ ಸಿಗ್ನಲುಗಳು
ಮಸಿಯ ಬದಲಿಗೆ ನೆತ್ತರು
ಉಪ್ಪಿನಂತೆ ಬೆವರು!
ಕಣ್ಣು ತಾಳೆಹಣ್ಣುಗಳು
ಎದೆಯೊಳಗೆ ಇದ್ದಿಲು!
ಏಳಲಾರ ಕನಸು ಹರಿದು
ಎದ್ದರೆ ಗತಿಯೇನು ?
ಹಾಗೆ ಸುಮ್ಮನೆ ಮಲಗಿರುವನು
ಯುಗ ಮುಗಿಯುವುದ ಕಾದು
*****
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
Latest posts by ತಿರುಮಲೇಶ್ ಕೆ ವಿ
(see all)