Home / ಲೇಖನ / ಇತರೆ / ಕಾಕಾ ಕಾಕಾ ಪರಾರಿಗೋ….

ಕಾಕಾ ಕಾಕಾ ಪರಾರಿಗೋ….

ನಮ್ಮೆಲ್ಲರ ಬದುಕಿನ ಅತ್ಯಂತ ಹಳೆಯ ನೆನಪುಗಳಿಗೆ ಕೋಟಿ ರೂಪಾಯಿ ಬೆಲೆ!

ಇಂದಿನ ಐಟಿ-ಬಿಟಿ-ಮೊಬೈಲ್-ಇಂಟರ್ನೆಟ್-ಟೀವಿ-ಠೀವಿ ಯುಗದಲ್ಲಿ… ಟೆನ್ಶನ್ನಿನ ತಿಪ್ಪವ್ವ… ರಕ್ತದೊತ್ತಡದ ರಂಗವ್ವ… ಸಕ್ಕರೆ ಕಾಯಿಲೆಯ ಅಕ್ಕರೆಯ ಜೋಕುಮಾರಪ್ಪ… ಇವರೆಲ್ಲ ನಮ್ಮ ಅಂತರಂಗದ ಆತ್ಮೀಯ ಸಂಗಾತಿಗಳಾಗಿ ಬಿಟ್ಟಿದ್ದಾರೆ!

ತಂಪೊತ್ತಿನಲ್ಲಿ ತಣ್ಣಗೆ ನೆನೆಯಬೇಕಾದ ಬೆಳದಿಂಗಳ ನೆನಪುಗಳು ಮಳೆಬಿದ್ದು ಗೂಡು ಸೇರಿ ಬಿಟ್ಟಿವೆ. ಸ್ಯಾಟಲೈಟ್ ಕನೆಕ್ಷನ್ ಸಂಪರ್ಕ ರಾಕ್ಷಸ ಅವತಾರ ತಾಳಿ ಬಂದ ನಂತರ… ಶಾಂತಿಯ ಸೋಬಾನೆ ದೇವತೆ ನಮ್ಮ ಹಳೆಯ ನೆನಪುಗಳೊಂದಿಗೆ ಶಾಶ್ವತವಾಗಿ ಓಡಿಯೇ ಹೋದಳು ಎಂದು ದುಃಖವಾಗುತ್ತದೆ!

ಜಂಗುತಿಂದ ಮುರುಕು ಟ್ಯಾಂಕಿನಲ್ಲಿ ಚಂದ್ರ ಚಕೋರಿ ರಾಜಕುಮಾರಿಯನ್ನು ಕವುದಿಯಲ್ಲಿ ಸುತ್ತಿ ಮುಚ್ಚಿಟ್ಟಂತೆ, ಕೆಲವರು ಹುಚ್ಚರು ತಮ್ಮ ಬದುಕಿನ ಇಂಥ ಪ್ರಾಚೀನ ನೆನಪುಗಳನ್ನು ಬಚ್ಚಿ ಇಟ್ಟಿರುತ್ತಾರೆ! ಅಂತ ಹಾಳುಹಳೇ ತಿರುಕಾರಾಮರಲ್ಲಿ ನಾನೂ ಒಬ್ಬ!

ಹಾಂ… ಬಹುಶಃ ಇಂಥ ಸವಿನೆನಪುಗಳು ಹಳ್ಳಿಯ ಗಂವ್ವಾರನಿಂದ ಹಿಡಿದು ಅಮೇರಿಕಾ ಪ್ರೆಸಿಡೆಂಟ್ ವರೆಗೂ ಒಂದೇ ಥರ ಅಂತ ಚೂರು ಜಂಬದಿಂದ ಹೇಳಲೂ ಬಹುದು!

ನೆನಪುಗಳಿಗೆ ಜಾತಿ ಇಲ್ಲ!
ನೆನಪುಗಳಿಗೆ ಅಂತಸ್ತು ಇಲ್ಲ!

ಹೌದು… ನಾನಿನ್ನೂ ಅಮ್ಮನ ಟೊಂಕದಲ್ಲಿ ಕುಂತು ಹೋಗುತ್ತಿದ್ದ ಮೂರು ವರ್ಷಗಳ ಕುನ್ನಿ ಮರಿ ಆಗಿದ್ದೆ!

ನನಗೆ ಸುಂದರವಾದ ಜರಿ ಟಪ್ಪಿಗೆ ಇತ್ತು. ನಮ್ಮಣ್ಣ ಕೊಟ್ಟ ಮುರುಕು ಹ್ಯಾಟು ಇತ್ತು. ಅಷ್ಟೇ ಅಲ್ಲ ನನ್ನ ಎರಡೂ ಕಿವಿಗಳಲಿ ಬಂಗಾರದ ಎರಡು ಸುಂದರವಾದ ಬೆಲೆಬಾಳುವ ಮುರುವುಗಳೂ ಇದ್ದವು!

ಹಾಂ… ಹಳೆ ಹುಬ್ಬಳ್ಳಿಯ ಸರಸೋತೆಮ್ಮ ಕಟ್ಟಿಮೇಲೆ ಆ ಕಾಕಾ ಆ ದಿನ ನನ್ನ ಹತ್ತಿರ ಬಂದ. ಅವನೇ ನನಗೆ… “ನಾ ನಿನ್ನ ಕಾಕಾ ಅದೇನೀ… ಬಾ…” ಅಂತ ಪ್ರೀತಿಯಿಂದ ತನ್ನ ಪರಿಚಯ ಹೇಳಿ ಎತ್ತಿಕೊಂಡು ತನ್ನ ತೊಡೆಯ ಮೇಲೆ ನನ್ನನ್ನು ಮಲಗಿಸಿ ನಂಬಿಗೆ ಹುಟ್ಟಿಸಿಯೇ ಬಿಟ್ಟ. ಅಲ್ಲದೆ ನನಗೆ…. ತಿನ್ನು…. ತಿನ್ನು…. ಅಂತ ಜುಲಿಮಿ ಮಾಡಿ ವಣಾಚುಮ್ಮರಿ, ಡಾಣಿ ತಿನ್ನಿಸಿದ. ಮೆಲ್ಲನೆ ರಮಿಸುತ್ತ ನನ್ನ ಕಿವಿಯಲ್ಲಿಯ ಎರಡೂ ಬಂಗಾರದ ಮುರುವುಗಳನ್ನು ಬಿಚ್ಚಿಕೊಂಡು ಒಂದು ದೊಡ್ಡ ತಾಮ್ರದ ದುಡ್ಡು ನನ್ನ ಕೈಯಲ್ಲಿಟ್ಟ… ಮನೆಗೆ ಹೋಗು… ಅಂದ!

ನನಗೆ ಖುಷಿಯೋ ಖುಷಿ. ಯಾಕೆಂದರೆ ಆ ಕಾಲದಲ್ಲಿ ಒಂದು ದುಡ್ಡಿಗೆ ಆರುಭಜಿ ಬರುತ್ತಿದ್ದವು!

ನಾನು ಮನೆಗೆ ಹೋಗಿ… ಅವ್ವ ಅಪ್ಪ ಅವರಿಗೆ… “ಕಾಕಾ ದುಡ್ಡು, ಕೊಟ್ಟಾ…” ಅಂತ ಕುಣಿದಾಡುತ್ತ ತೋರಿಸಿದೆ. ನನ್ನ ಅವ್ವ… “ಯಾ ಕಾಕಾ?” ಅಂತ ಕೇಳಿದಳು. ನಾನು… “ಕಾಕಾ… ಆ ಕಟೀ ಮ್ಯಾಲಿನ ಕಾಕಾ…” ಎಂದು ಹೇಳುತ್ತಾ, ನನ್ನ ಕಿವಿಯ ಬಂಗಾರದ ಮುರುವುಗಳನ್ನು ಕಾಕಾ ಬಿಚ್ಚಿಕೊಂಡು ಒಂದು ದುಡ್ಡು ಕೊಟ್ಟದ್ದನ್ನು ಖುಷಿಯಿಂದ ಕುಣಿದು ಹೇಳಿದೆ!

ತಕ್ಷಣವೇ ನನ್ನ ಅವ್ವ ಚಿಟ್ಟನೇ ಚೀರಿದಳು! ನನ್ನ ಅಕ್ಕ ಪಾರಕ್ಕೆ ಅವಳೂ ಚೀರಿದಳು! ನನ್ನ ಅಪ್ಪ ರೂಲ್‍ಕಟಿಗಿ ತೊಗೊಂಡು ಖಡಕ್ ರುದ್ರರಾಗಿ ಕಳ್ಳನನ್ನು ಹಿಡಿಯಲು ಎದ್ದರು! ಮನೆಯ ಹತ್ತಾರು ಜನರು ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಓಣಿಗಳ ಹತ್ತಾರು ದಿಕ್ಕಿನಲ್ಲಿ ನನ್ನನ್ನು ಹೊತ್ತುಕೊಂಡು ಓಡೋಡಿ ಹೋದರು! ಓಣಿಯ ಜನರೆಲ್ಲಾ ಹಿಂಡಿಗೆ ಹಿಂಡೇ ಓಡಾಡಿದರು!

ಆ ನನ್ನ ಪ್ರೀತಿಯ ಕಾಕಾ… ಕೌ… ಅಂತ ಹಾರಿ ಹೋಗಿ ಬಿಟ್ಟಿದ್ದ!

ಇನ್ನೆಲ್ಲಿ ಕಾಕಾ?

ಒಂದು ತಾಮ್ರದ ದುಡ್ಡು ಮಾತ್ರ ನನ್ನ ಕೈಯಲ್ಲಿ ಕಾಕನ ಕರುಣೆ ಕಾಣಿಕೆಯಾಗಿ ಉಳಿಯಿತು!
*****

Tagged:

One Comment

  • ಅರುಣ್ ಅದಿನರಾಯನ್ ಬಿಜ್ಜಳ ಇಳಕಲ್
    Reply

    ಬಹಳ ಸುಂದರವಾಗಿ ಮೂಡಿದೆ ಕಾಕನ ನೆನಪು, ಶೈಲಿ ಮಾತ್ರ ನನ್ನ ನೆಚ್ಚಿನ ಗುರುಗಳದು, ಹಿಂದಿನ ನೆನಪು ಬಿಚ್ಚಿ ಅಚ್ಚಲಿಯದಂತೆ ತಾವು ಬರೆದಿದ್ದೀರ ಯಿಂದಿನ tv mobile ಯುಗದಲ್ಲಿ ಕೂಡ ಈ ಬರಹಗಳು ಮನಶಿನ್ಯಗ print ಆಗಿವೆ,
    Sir ಇನ್ನು ಮುಂದೆ ಕೂಡ ಯಿಂತಹ ಬರಹಗಳು ತಮ್ಮಿಂದ ನಿರಿಸ್ಕಿಸುತ್ತೆನೆ

Leave a Reply to ಅರುಣ್ ಅದಿನರಾಯನ್ ಬಿಜ್ಜಳ ಇಳಕಲ್ Cancel reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...