ಎಂಥ ವಂಚಕನೆ ಕೃಷ್ಣ
ಹೊಂಚಿ ಮರೆಗೆ ನಿಲುವ!
ಪಾರಾದೆವು ಎನುತಿರುವಾಗ
ಹಾರಿ ಹೊರಗೆ ಬರುವ
ಕಾಡುವ ತುಂಟ, ದಾರಿಯ ತಡೆದು
ಎಂಬ ಅಳುಕು ಹೊರಗೆ;
ಕಾಡದೆ ಸುಮ್ಮನೆ ಬಿಡದಿರಲಿ
ಎಂಬ ಆಸೆ ಒಳಗೆ!
ಪೀಡಿಸಲಿ ಹರಿ ಹಾಲಿಗೆ ಬೆಣ್ಣೆಗೆ
ಎನ್ನುವ ಬಯಕೆ ದಿನವೂ
ಕೂಡುವ ದಾರಿ ಹತ್ತಿರ ಬರಲು
ಕುಣಿವುದು ಮೈ ಕಣಕಣವೂ
ಬಾರೋ ಕೃಷ್ಣಾ! ಹಾಲು ಬೆಣ್ಣೆಯ
ತಂದೆವು ನಿನಗೆ ಸೋತು
ಕಾಡೋ ನಮ್ಮನು, ಬೇಡ ಎನುವೆವು
ಅದೆಲ್ಲ ತುಟಿತುದಿ ಮಾತು!
*****