ನಿನ್ನ ಕನಸುಗಳಲ್ಲಿ
ಮುಳುಗಿಹೋದೆನು ನಾನು
ಎತ್ತಿ ಕಾಪಾಡುವರು ಯಾರು?
ಸವೆನೆನಪಿನಾಳದಲಿ
ಹುಗಿಮ ಹೋಗಿರುವೆನು
ಅಗೆದು ತೆಗೆಯುವರಿಲ್ಲವೇನು?
ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ
ಹಿಡಿದು ನಿಲ್ಲಿಸುವವರು ಯಾರು?
ಕ್ರೂರ ವಿರಹಾಗ್ನಿಯಲಿ
ಬೇಯುತಲೆ ಇರುವೆ
ನೀರೆರದು ಉಳಿಸುವವರಾರು?
ಬಾ ಚಿನ್ನ, ನೀ ನನ್ನ
ಪ್ರೀತಿಯಾಳಗಳಲ್ಲಿ
ಇಳಿದು ತಳಮುಟ್ಟು ನೋಡೋಣ?
ಬಾ ಚಿನ್ನ. ನೀ ನನ್ನ
ಪ್ರೀತಿ ಗಿರಿಶಿಖರಗಳ
ತುದಿತನಕ ಹತ್ತು ನೋಡೋಣ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.