Home / ಬಾಲ ಚಿಲುಮೆ / ಕಥೆ / ಹಾಡುವ ಕತ್ತೆಯ ಕಥೆ

ಹಾಡುವ ಕತ್ತೆಯ ಕಥೆ

ಒ೦ದೂರಿನಲ್ಲಿ ಒಂದು ಕತ್ತೆಯಿತ್ತು. ಅದು ಹಗಲುಹೊತ್ತು ಅಗಸನ ಮನೆಯಲ್ಲಿ ಭಾರಗಳನ್ನು ಹೊರುವುದು : ರಾತ್ರಿಯಹೊತ್ತು ಮನ ಬಂದಂತೆ ಅಲೆಯುವುದು: ಮತ್ತೆ ಬೆಳಗಾಗುತ್ತಲೂ ಅಗಸನ ಮನೆಗೇ ಬಂದುಬಿಡುವುದು.
ಹೀಗಿರಲು, ರಾತ್ರಿಯ ಹೊತ್ತು ಸ್ವೇಚ್ಛೆಯಾಗಿ ತಿರುಗುವ ಕತ್ತೆಗೂ ಒಂದು ನರಿಗೂ ಸ್ನೇಹವು ಬೆಳೆಯಿತು. ಅವೆರಡೂ ನಿತ್ಯವೂ ಇರಳು ಎಲ್ಲೆಂದರಲ್ಲಿ ಮೇದುಕೊಂಡು ಸುಖವಾಗಿದ್ದುವು. ಒಂದು ದಿನ ಎರಡೂ ಸೌತೆಯಕಾಯಿ ಬೆಳೆದಿರುವ ಹೊಲಕ್ಕೆ ನುಗ್ಗಿವೆ: ಆನಂದವಾ ಮೆಯ್ದಿವೆ: ಆ ಹೊತ್ತಿಗೆ ಸರಿಯಾಗಿ ಚಂದ್ರನು ಹುಟ್ಟಿ ಬೆಳುದಿಂಗಳು ಎಲ್ಲೆಲ್ಲೂ ಹರಡಿತು. ತಂಗಾಳಿಯು ಬೀಸಿತು. ಆಗ ಕತ್ತೆಗೆ ಒಂದು ಹಾಡು ಹಾಡಬೇಕು ಎನ್ನಿಸಿತು. ನರಿಯನ್ನು ಕರೆದು, “ಮಿತ್ರ ಹಾಡಬೇಕು ಎನ್ನಿಸುತ್ತಿದೆ. ಏನು ಮಾಡಲಿ?” ಎಂದು ಜಂಭವಾಗಿ ಕೇಳಿತು. ಅದಕ್ಕೆ ಆ ನರಿಯು “ಮಾವ, ಬಾಯಿಬಿಟ್ಟೀಯೇ” ಕದಿಯುವುದಕೆ ಬಂದವರು
ಬಾಯಿ ಹೊಲಿದುಕೊಂಡಿರಬೇಕು ಅಲ್ಲದೆ, ನಿನ್ನ ಸ್ವರವೂ ಚೆನ್ನಾಗಿಲ್ಲ. ನೀನು ಕೂಗಿದರೆ ದೂರದಲ್ಲಿದವರಿಗೂ ಕೇಳಿಸಿ ನಿನ್ನ ಕೆಲಸವು ಮುಗಿಯುವುದು. ಸುಮ್ಮನಿದ್ದು ಬೇಕಾದಷ್ಟು, ತಿಂದು ಹೋಗೋಣ” ಎಂದು ಎಷ್ಟೋ ಹೇಳಿತು.
ಕತ್ತೆಯು ಅದನ್ನು ಕೇಳಿ “ಎಷ್ಟೇ ಆಗಲಿ ನೀನು ಕಾಡಿನ ಜಂತು. ನಿನಗೆ ಸಂಗೀತದ ಸೊಗಸೇನು ಗೊತ್ತು
ಕತ್ತಲನು ಚಂದ್ರಿಕೆಯು ದೂಡಿದಂದು | 
ಪ್ರಿಯ ಜನರು ಪ್ರೀತಿಯಿಂ ಸೇರಿದಂದು ||
ಸಂಗೀತ ಕೇಳದಿರೆ ಧನ್ಯರೆಂತು ? ||೨೫||
ಎಂದಿತು. ನರಿಯು “ಮಾವ ಅದಿರಲಿ, ನಿನಗೆ ಸಂಗೀತವೇನು ಗೊತ್ತು? ಸುಮ್ಮನೆ ಅರಚುವೆ. ಅದರಿ೦ದ ನಮ್ಮ ಕೆಲಸವು ಕೆಡುವುದು. ಅಷ್ಟೇ ಫಲ” ಎಂದಿತು. ಕತ್ತೆಗೆ ಕೋಪ ಬಂದು” ನನಗೆ ಸಂಗೀತವು ತಿಳಿಯದೆ? ಸಪ್ತ ಸ್ವರಗಳು, ತಾಳಗಳು ನಲವತ್ತೊಂಭತ್ತು, ಅರವತ್ತಮೂರು ರಾಗಗಳು, ಭರತ ಮುನಿಯು ಇದರ ಕರ್ತೃ. ಇನ್ನೇನು ಬೇಕು ಕೇಳು” ಎಂದು ಗದರಿಸಿತು. ನರಿಯು “ಹಾಗಾದರೆ, ಮಾವ, ನಾನು ಕಾವಲಿನವನು ಬರುವುದನ್ನು ನೋಡಿಕೊಳ್ಳುತ್ತಾ ದೂರದಲ್ಲಿ ಕಾಯ್ದು ಕೊಂಡಿರುವೆನು. ನಿನಗೆ ತೋರಿದ ಹಾಗೆ ಹಾಡಿಕೋ” ಎಂದು ತಾನು ದೂರವಾಗಿ ಹೋಯಿತು. ಕತ್ತೆಯೂ ಹಾಡಿತು.
ಅದನ್ನು ಕೇಳಿ ಹೊಲದ ಯಜಮಾನನು ದೊಣ್ಣೆಯನ್ನು ಎತ್ತಿ ಕೊಂಡು ಬಂದು ಚೆನ್ನಾಗಿ ಹೊಡೆದು ನೆಲಕ್ಕೆ ಕೆಡವಿ, ಒಂದು ಬೀಸುವ ಕಲ್ಲನ್ನು ಅದರ ಕತ್ತಿಗೆ ಕಟ್ಟಿದನು. ಕತ್ತೆಯೂ ಒ೦ದು ಘಳಿಗೆ ನೋವನ್ನು ಅನುಭವಿಸುತ್ತಿದ್ದು ಮತ್ತೆ ಎದ್ದು ಹೊರಟಿತು.
ನಾಯಿ ಕತ್ತೆಯು ಕುದುರೆ | ಎಲ್ಲಕಿಂತಲು ಕತ್ತೆ ||
ಹೊಡೆದ ಏಟಿನ ನೋವ | ಕಳೆದುಕೊಂಬುವು ಕೂಡಲೆ ||೨೬||
ನರಿಯು ದೂರದಿಂದ ಅದನ್ನು ನೋಡಿ ಹೇಳಿತು;
ಬೇಡೆಂದರೆ ಬಿಡದೇ ಹಾಡಿದ ಮಾವನಿಗೆ |
ಬೀಸುವ ಕಲ್ಲಿನ ಸರವಾಯಿತು ಕೊರಳೊಳಗೆ ||
“ನೀನೂ ಹಾಗೆಯೇ ಹೇಳಿದ ಮಾತು ಕೇಳದೆ ಹೀಗಾದೆ” ಎನ್ನಲು ಚಕ್ರಧರನು “ಹೌದು ಹೌದು” ಕೇಳಿಲ್ಲವೇ?
ತನಗುಂ ಮತಿಯಿಲ್ಲದೆ । ಮಿತ್ರನ ನುಡಿಕೇಳದೆ ॥ 
ನಡೆದರೆ ಮರಣನೆ ಫಲ। ಮಂಥರಗಾಹಂತೆ ||೨೭||
ಸುವರ್ಣಸಿದ್ಧಿಯು ಕೇಳಿದನು; “ಅದೆಂತು?” ಚಕ್ರಧರನು ಹೇಳಿದನು:-
*****
ಮಂಥರನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...