ಕವಿಯ ಪತ್ನಿ: ಏನಾಗ್ಯದ ನೋಡೀರಾ
ಸ್ವಲ್ಪನಽಽ ಅದನ ಮೈಮ್ಯಾಲೆ ಖಬರ
ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣು ಬಾರಾ
ತಿಳೀತು ನನಗ
ಖಯಾಲಿಯೊಳಗ ಇದ್ದಿರಬೇಕು
ನೆಲ ನೋಡದ ಆಕಾಶದ ಕಡೆ
ದೃಷ್ಟಿ ನೆಟ್ಟಿರಬಹುದು
ಅಥವಾ ಯಾವುದರ ಹೂವು ಕಂಡಿರಬೇಕು
ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು
ತೆರೆದು ಕಲ್ಪನಾ ಲೋಕ
ಹೊಕ್ಕು ಅದರೊಳಗ ವಿಹಾರ ಮಾಡಿರಬೇಕು
ನಾ ಕೊಟ್ಟ ಸಾಮಾನಿನ ಪಟ್ಟಿ ಥಟ್ಟನೆ ನೆನಪಾಗಿ
ಸರ್ರನೆ ನೀವು ಭೂಮಿಗೆ ಇಳಿದಿರಬೇಕು
ಸಿಗದೆ ಕಕ್ಕಾಬಿಕ್ಕಿಯಾಗಿ
ರಾಡಿಯೊಳಗ ಜಾರಿ ಬಿದ್ದಿರಬೇಕು
ಏನು ಮಾಡಲಿ ಎಲ್ಲಾ ನನ್ನ ಹಣೇಬಾರಾ
ಎಷ್ಟು ಹಚ್ಚಿದ್ದೆ ಸಾಬೂಣು ಬಾರಾ
ಕವಿ: ಸುಮ್ಮನಾಗು ಮಾರಾಯ್ತಿ ಗುಟ್ಟಾಗಿ ಹೇಳ್ತೀನಿ
ರಟ್ಟಾದರ ನಮ್ಮ ಮರ್ಯಾದಿ ಪ್ರಷ್ನಿ
ಹೊರಟಿದ್ದೆ ಹಿಡಿದು ನಂದಾರಿ
ನೀನಂದದ್ದು ನೆನಪಿನೊಳಗಿಟ್ಟು
ಕವಿತೆ ರಚಿಸುವ ಗೀಳು ಬಿಟ್ಟು
ಸೀದಾ ರಸ್ತೆ ಮ್ಯಾಲೆ ನನ್ನ ಕಣ್ಣು ನೆಟ್ಟು
ಮಾಡಲಿಲ್ಲ ಕವಿತೆಗೆ ವಿಷಯ ಹುಡುಕೋ ಉಸಾಬರಿ
ಅರಳಿದರ ಅರಳಲಿ ಹೂವು
ಕೆರಳಿದರೆ ಕೆರಳಲಿ ಭಾವ
ಇದ್ದರೆ ಇರಲಿ ರಮ್ಯ ಸೂರ್ಯಾಸ್ತ!
ಅದು ಇಂದಿನದೇನಲ್ಲ
ನಾಳೆ ಇಲ್ಲವೆಂದಿಲ್ಲ
ಮುಗಿಯಲಿ ಮೊದಲು ಬಂದ ಕೆಲಸ ಅಂತ ಸಾಗಿದ್ದೆ
ಆಗ ಎಲ್ಲಿಂದಲೋ ಬಂದ
ಒಬ್ಬ ತುಂಟ ಪೋರಾ
ಬಿರಬಿರನೆ ಹೆಜ್ಜೆ ಹಾಕಿದರೂ ಬಂದ ಹತ್ತಿರ
ಬಂದವನೇ ಎಸೆದ ತನ್ನ ಮುಷ್ಟಿಯೊಳಗಿನ ಮಣ್ಣು
ನಂಬಲಾರದಾದವು ನನ್ನ ಕಣ್ಣು
ತಬ್ಬಿಬ್ಬಾಗಿ ಕೇಳಿದೆ ಪೋರನನ್ನು
ನಾನೇನು ಮಾಡಿದೆ ಎಂದು ಕೊಳೆ ಮಾಡಿದಿ
ನಾ ಧರಿಸಿದ ಉಡುಪು
ಏನು ಹೇಳಲಿ ನನ್ನ ಮನೆಯಾಕೆಗೆ
ಸಾಬೂನಿನ ಜೊತೆ ಶುಭ್ರ
ಪ್ರೀತಿಯನು ಹಚ್ಚಿ ಒಗೆದಿದ್ದಳು
ಹೇಗೆ ಹೋಗಬೇಕು ಕಲೆ
ಅಂದರ ಏನನಬೇಕು ತುಂಟ ಪೋರ
“ಇರಲಿ ಕಡೀತನ ಈ ಕಲೆ
ಕವಿ ಅಲ್ಲವೆ ನೀವು –
ಕಲ್ಪನೆಯ ಕುದುರೆಯನೇರಿ
ಇಲ್ಲದನು ಬಣ್ಣಿಸುವ ಕಲೆ
ಅಲ್ಲವೆ ನಿಮಗೆ ಕರಗತ
ಸುಂದರಿಯರ ನೋಡಿ
ಇಂದುಮುಖಿ ಎಂದಿರಿ
ಕಾವ್ಯಗಳ ಪುಟಗಳಲಿ
ತುಂಬಿಸಿದಿರಿ ಚಂದಿರ
ಬೆಳದಿಂಗಳು ಕರ್ನೈದಿಲೆಗಳಿಂದ
ನೀವು ಹೇಳಿದ್ದು ಕೇಳಿ
ಬಾಯೊಳಗ ನೀರೂರಿ
ಹೋದೆ ಅಲ್ಲೀತನಕ
ಆಸ್ವಾದಿಸಲು ಸೌಂದರ್ಯ
ಆದರ ಅಲ್ಲಿ ಸಿಕ್ಕದ್ದೇನು
ನಿನ್ನ ಮ್ಯಾಲೆ ಎಸೆದ ಮಣ್ಣು”
ಅಂತ ಅನಬೇಕ
ಬಿಡಲಿಲ್ಲ ನಾನೂ
ಕೇಳಿದೆ ನೀನಿರೋದು ಎಲ್ಲೆ
ನಿನ್ನ ಹೆಸರೇನಂತ
“ನನ್ನ ಹೆಸರು ನೀಲ್ ಆರ್ಮ್ ಸ್ಟ್ರಾಂಗ್”-
ಅಂತ ಹೇಳಿ
ಓಡಬೇಕ ಮಿಂಚಿನ ವೇಗದಾಗ
ಸಿಗದ್ಹಾಂಗ ಕೈಗೆ
ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ
ಮನಸಿನಾಗೇ ಇಟ್ಕೋ
ಮರ್ಯಾದಿ ಪ್ರಶ್ನಿ
*****

















