Home / ಕವನ / ಕವಿತೆ / ಕವಿ – ಕವಿ ಪತ್ನಿಯ ಸಂವಾದ

ಕವಿ – ಕವಿ ಪತ್ನಿಯ ಸಂವಾದ

ಕವಿಯ ಪತ್ನಿ: ಏನಾಗ್ಯದ ನೋಡೀರಾ
ಸ್ವಲ್ಪನಽಽ ಅದನ ಮೈಮ್ಯಾಲೆ ಖಬರ
ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣು ಬಾರಾ
ತಿಳೀತು ನನಗ
ಖಯಾಲಿಯೊಳಗ ಇದ್ದಿರಬೇಕು
ನೆಲ ನೋಡದ ಆಕಾಶದ ಕಡೆ
ದೃಷ್ಟಿ ನೆಟ್ಟಿರಬಹುದು
ಅಥವಾ ಯಾವುದರ ಹೂವು ಕಂಡಿರಬೇಕು
ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು
ತೆರೆದು ಕಲ್ಪನಾ ಲೋಕ
ಹೊಕ್ಕು ಅದರೊಳಗ ವಿಹಾರ ಮಾಡಿರಬೇಕು
ನಾ ಕೊಟ್ಟ ಸಾಮಾನಿನ ಪಟ್ಟಿ ಥಟ್ಟನೆ ನೆನಪಾಗಿ
ಸರ್ರನೆ ನೀವು ಭೂಮಿಗೆ ಇಳಿದಿರಬೇಕು
ಸಿಗದೆ ಕಕ್ಕಾಬಿಕ್ಕಿಯಾಗಿ
ರಾಡಿಯೊಳಗ ಜಾರಿ ಬಿದ್ದಿರಬೇಕು
ಏನು ಮಾಡಲಿ ಎಲ್ಲಾ ನನ್ನ ಹಣೇಬಾರಾ
ಎಷ್ಟು ಹಚ್ಚಿದ್ದೆ ಸಾಬೂಣು ಬಾರಾ

ಕವಿ: ಸುಮ್ಮನಾಗು ಮಾರಾಯ್ತಿ ಗುಟ್ಟಾಗಿ ಹೇಳ್ತೀನಿ
ರಟ್ಟಾದರ ನಮ್ಮ ಮರ್‍ಯಾದಿ ಪ್ರಷ್ನಿ
ಹೊರಟಿದ್ದೆ ಹಿಡಿದು ನಂದಾರಿ
ನೀನಂದದ್ದು ನೆನಪಿನೊಳಗಿಟ್ಟು
ಕವಿತೆ ರಚಿಸುವ ಗೀಳು ಬಿಟ್ಟು
ಸೀದಾ ರಸ್ತೆ ಮ್ಯಾಲೆ ನನ್ನ ಕಣ್ಣು ನೆಟ್ಟು
ಮಾಡಲಿಲ್ಲ ಕವಿತೆಗೆ ವಿಷಯ ಹುಡುಕೋ ಉಸಾಬರಿ
ಅರಳಿದರ ಅರಳಲಿ ಹೂವು
ಕೆರಳಿದರೆ ಕೆರಳಲಿ ಭಾವ
ಇದ್ದರೆ ಇರಲಿ ರಮ್ಯ ಸೂರ್‍ಯಾಸ್ತ!
ಅದು ಇಂದಿನದೇನಲ್ಲ
ನಾಳೆ ಇಲ್ಲವೆಂದಿಲ್ಲ
ಮುಗಿಯಲಿ ಮೊದಲು ಬಂದ ಕೆಲಸ ಅಂತ ಸಾಗಿದ್ದೆ
ಆಗ ಎಲ್ಲಿಂದಲೋ ಬಂದ
ಒಬ್ಬ ತುಂಟ ಪೋರಾ
ಬಿರಬಿರನೆ ಹೆಜ್ಜೆ ಹಾಕಿದರೂ ಬಂದ ಹತ್ತಿರ
ಬಂದವನೇ ಎಸೆದ ತನ್ನ ಮುಷ್ಟಿಯೊಳಗಿನ ಮಣ್ಣು
ನಂಬಲಾರದಾದವು ನನ್ನ ಕಣ್ಣು
ತಬ್ಬಿಬ್ಬಾಗಿ ಕೇಳಿದೆ ಪೋರನನ್ನು
ನಾನೇನು ಮಾಡಿದೆ ಎಂದು ಕೊಳೆ ಮಾಡಿದಿ
ನಾ ಧರಿಸಿದ ಉಡುಪು
ಏನು ಹೇಳಲಿ ನನ್ನ ಮನೆಯಾಕೆಗೆ
ಸಾಬೂನಿನ ಜೊತೆ ಶುಭ್ರ
ಪ್ರೀತಿಯನು ಹಚ್ಚಿ ಒಗೆದಿದ್ದಳು
ಹೇಗೆ ಹೋಗಬೇಕು ಕಲೆ
ಅಂದರ ಏನನಬೇಕು ತುಂಟ ಪೋರ
“ಇರಲಿ ಕಡೀತನ ಈ ಕಲೆ
ಕವಿ ಅಲ್ಲವೆ ನೀವು –
ಕಲ್ಪನೆಯ ಕುದುರೆಯನೇರಿ
ಇಲ್ಲದನು ಬಣ್ಣಿಸುವ ಕಲೆ
ಅಲ್ಲವೆ ನಿಮಗೆ ಕರಗತ

ಸುಂದರಿಯರ ನೋಡಿ
ಇಂದುಮುಖಿ ಎಂದಿರಿ
ಕಾವ್ಯಗಳ ಪುಟಗಳಲಿ
ತುಂಬಿಸಿದಿರಿ ಚಂದಿರ
ಬೆಳದಿಂಗಳು ಕರ್‍ನೈದಿಲೆಗಳಿಂದ
ನೀವು ಹೇಳಿದ್ದು ಕೇಳಿ
ಬಾಯೊಳಗ ನೀರೂರಿ
ಹೋದೆ ಅಲ್ಲೀತನಕ
ಆಸ್ವಾದಿಸಲು ಸೌಂದರ್‍ಯ
ಆದರ ಅಲ್ಲಿ ಸಿಕ್ಕದ್ದೇನು
ನಿನ್ನ ಮ್ಯಾಲೆ ಎಸೆದ ಮಣ್ಣು”
ಅಂತ ಅನಬೇಕ
ಬಿಡಲಿಲ್ಲ ನಾನೂ
ಕೇಳಿದೆ ನೀನಿರೋದು ಎಲ್ಲೆ
ನಿನ್ನ ಹೆಸರೇನಂತ
“ನನ್ನ ಹೆಸರು ನೀಲ್ ಆರ್‍ಮ್ ಸ್ಟ್ರಾಂಗ್”-
ಅಂತ ಹೇಳಿ
ಓಡಬೇಕ ಮಿಂಚಿನ ವೇಗದಾಗ
ಸಿಗದ್ಹಾಂಗ ಕೈಗೆ
ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ
ಮನಸಿನಾಗೇ ಇಟ್ಕೋ
ಮರ್‍ಯಾದಿ ಪ್ರಶ್ನಿ
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...