Home / ಲೇಖನ / ಪತ್ರ / ಪೂರ‍್ಣಿಮ – ೧೧

ಪೂರ‍್ಣಿಮ – ೧೧

ಪ್ರಿಯೆ

ಈಸೂರಿನಿಂದ ಬರೆದ ಪತ್ರ ನಿನಗೆ ತಲುಪಿರಬಹುದು. ಅವಸರದಲ್ಲಿ ಬರೆದೆ. ಇದೀಗ ವಿವರಯುತ ಪತ್ರವನ್ನು ಹಂಸಭಾವಿಯಲ್ಲಿ ಮರದಡಿಯಲ್ಲಿ ನಿಂತಿರುವ ಕಾರಿನ ಒಳಗಡೆ ದಿಂಬಿಗೆ ಆತುಕುಳಿತು ಬರೆಯುತಿರುವೆನು, ಊಟದ ಹೊತ್ತಿನ ವರೆಗೂ ಬರೆಯುವನು.ಈಗ ಮುಂಜಾನೆ ೧೦-೩೦; ಒಂದು ನೂರು ಪುಟಗಳ ಬರೆಯುವ ಸಾಹಿತ್ಯ ತುಂಬಿದೆ, ಸ್ಫೂರ್ತಿ ಬಂದಿದೆ. ಹುರುಪು ತುಂಬಿರುವುದು. ಮಲೆನಾಡಿನ ನನ್ನ ಈ ಅಲೆದಾಟದಿಂದ ನನ್ನಲ್ಲಿ ‘ಗೀತ ಗೋವಿಂದ’ ಧ್ವನಿಸಿದ್ದ ಕವಿತಾಸೂರಿಗೆ ಸಾಣೆ ಬಂದಿರುವುದು. ತಾಳು ಸಖಿ, ಪ್ರವಾಸದಿಂದ ಪ್ರಯಾಸಗೊಂಡ ಲೇಖನಿಯು ರಸ ಚಿಮ್ಮುತ್ತಿಲ್ಲ. ಪಕ್ಕದಲ್ಲಿರುವ ಕಿತ್ತಳೆ ಹಣ್ಣಿನ ರಸವನ್ನು ತುಂಬಿಕೊಂಡು ಬರೆಯುವೆನು.

ರಸ ಕುಡಿದ ಮೇಲೆ ರಸಿಕನಾಗಿ ಪತ್ರವನ್ನು ಪ್ರಾರಂಭಿಸಿರುವೆನು. ಆದರೆ ನನ್ನ ರಸದ ಇಂಚರಕ್ಕೆ ಧ್ವನಿಗೂಡಿಸುವ ವೀಣೆಯ ಬುರುಡೆಯು ತಂತಿ ಕಿತ್ತು, ತಾಳದಪ್ಪಿ ದೂರ ದೂರ ಬಹುದೂರ ಮೊಂಡುತನದಿಂದ ಕುಳಿತಿದೆ. ಹೋಗಲಿ ವೀಣೆ ಇಲ್ಲದಾಗ ವೀಣೆ ಇಲ್ಲವೆಂದು ಹಲುಬಿದರೆ ಫಲವೇನು? ಇದು ಸದಸದ್ವಿವೇಕವಲ್ಲವೆ? ಪ್ರಿಯ ಸಖಿ ನಾನು ಮಾತಿಗೆ ತಪ್ಪಿದೆನೆ? ಸಾಗರಕ್ಕೆ ಹೋದರೂ ಸಾಗರದ ಕನ್ಯೆಯನ್ನು ನೋಡುವುದಿಲ್ಲವೆಂದು ಬರೆದಿದ್ದೆನಲ್ಲವೆ? ಆದರೆ ಅಲ್ಲಿನ ಪರಿಸ್ಥಿತಿ, ನನ್ನನ್ನು ನಿರ್ಬಂಧಗೊಳಿಸಿತು. ತಪ್ಪೇನು? ನಿನ್ನ ಸ್ನೇಹಿತೆಯನ್ನು ನಿನ್ನ ಪರವಾಗಿ ನಿನ ಅರ್ಧಾಂಗನೇಕೆ ಸರ್ವಾಂಗನಾದ? ನಾನು ಮಾತನಾಡಿಸಬಹುದಲ್ಲವೆ? ಆಕೆಯ ಒಂದು ಸಲ ಸಹಜ ಬಾಯಿಬಿಟ್ಟು ನಗೆ, ಆಕೆಯ ತಂಗಿಯದೊಂದು ಎಳೆ ನಗೆ, ತಾಯಿಯ ಮಮತೆ ಪೂರಿತ ನಾಲ್ಕಾರು ಮಾತುಗಳು ಇವಿಷ್ಟು ಕೆಲವು ನಿಮಿಷಗಳಲ್ಲಿ ಮುಗಿದವು. ನಂತರ ಬೀಳ್ಕೊಡುವ ವೈಯಾರವಳಗಿನಿಂದಲೇ. ರಾತ್ರಿ ಜೋಗಿಗೆ ಹೋಗುವ ದಾರಿಯಲ್ಲಿರುವ ಸಿರಿವಂತಿಕೆ ಎಂಬೂರಿನಲ್ಲಿ ಉಳಿದುಕೊಂಡೆವು. ಸಿರಿವಂತಿಕೆ ನಿಜವಾಗಿ ಸಿರಿಯ ಹಿರಿಯೂರು. ನಾವಿಳಿದಿದ್ದ ಮನೆಯಲ್ಲಿ ತುಂಬ ಸಿರಿಯ ಹಿರಿಯ ಸೊಸೆತನ.

ನಿನ್ನ ಸ್ನೇಹಿತೆ ಮಲೆನಾಡಿನವಳು ತಾನಂದು ಮರೆತು ಹೇಳುತ್ತಿದ್ದ ಮಾತು ಸ್ವಲ್ಪ ಮಟ್ಟಿಗೆ ನಿಜವೆಂದು ಅನ್ನಿಸುತ್ತಿದೆ. ಮಲೆನಾಡಿನ ಎಲೆ ಎಲೆಗಳಲ್ಲಿ, ಗಿಡ ಗಿಡಗಳಲ್ಲಿ ಸೃಷ್ಟಿ ಸೌಂದರ್ಯದ ತನಿರಸವು ತುಂಬಿರುವುದು. ನಿಸರ್ಗದೇವತೆಯ ತವರೂರು ಈ ಮಲೆನಾಡು. ಮಾತನಾಡದೆ, ಮೌನದಿಂದ ವನದೇವತೆಯು ನಮ್ಮ ಮನವನ್ನು ಸೂರೆಗೊಳ್ಳುವಳು. ಭವ್ಯವಾದ ಕಾರಿನಲ್ಲಿ ಕುಳಿತಿರುವುದೇ ಒಂದು ಸೊಗಸು. ಅದರ ವೇಗವು ಸೊಗಸಿಗೆ ಹುರುಪುಕೊಡುವದು. ಮಲೆನಾಡ ಗೌಡರ ಆದರ ಅತಿಥ್ಯವೆಂದರೆ ಬಣ್ಣಿಸಬರದಷ್ಟು ಭವ್. ಮತ್ತೆ ಮತ್ತೆ ಆಶಿಸುವಷ್ಟು ರುಚಿ. ಇವೆಲ್ಲಕ್ಕಿಂತಲೂ ಮನವನಪ್ಪಿದ ಮನ ನೋಡದ ದೃಶ್ಯಗಳು. ಒಂದಲ್ಲ ಎರಡಲ್ಲ ನೂರಾರು, ಭಾವನಾಜೀವಿಯಾದ ನನಗೆ ಅವರ ಬದುಕಿನ ಒಂದೊಂದು ಬಗೆಯೂ ಮೈಮರೆಸುತ್ತಿತ್ತು. ನಡು ಕಾಡಿನಲ್ಲಿದ್ದರೂ ವನವಿಹಾರಕ್ಕೆಂದು ಬಂದ ಭೋಗ ಜೀವಿಗಳಂತೆ ಜೀವನದ ಹೆಜ್ಜೆ ಹೆಜ್ಜೆಯಲ್ಲೂ ರಮಿಸುತ್ತಿರುವರು, ವಿಹರಿಸುತ್ತಿರುವರು, ವಿನೋದಿಸುತ್ತಿರುವರು; ತೃಪ್ತಿ ಜೀವಿಗಳವರು, ಮೈ ತುಂಬ ದುಡಿದರೆ ಕೈತುಂಬ ಉಣ್ಣುವರು. ಅಡಿಕೆ, ಬಾಳೆ, ತೆಂಗುಗಳ ತೋಟ ಇವರ ದುಡಿಮೆಯ ಕಣವೂ ಹೌದು, ಜೀವನದ ಉದ್ಯಾನವನವೂ ನಿಜ. ಸೂರ್ಯನೂ ಕೂಡ ಇವರ ಸುಖವನ್ನು ಇಣಿಕಿ ನೋಡುತ್ತಿರುವನು. ಈ ಉದ್ಯಾನವನದಲ್ಲಿ, ಮೇಲಿ೦ದ ಸಂದು ಸಂದುಗಳಲ್ಲಿ ತಲೆ ಹಾಕಿ ನೋಡುತ್ತಿರುವ ಸೂರ್ಯನ ಪರಿವೆ ಇಲ್ಲದೆ ಈ ಮಲೆನಾಡಿನವರು ಈ ಸಿಂಗರಿಸಿದ ವನದಲ್ಲಿ ತಾವು ನೀರೆರೆದು ಬೆಳೆದ ಎಲೆಯ ಚಿಗುರು, ಅಡಿಕೆಯಚೂರು, ಇವುಗಳನ್ನು ಜಿಗಿಯುತ್ತಾ ಬಳ್ಳಿಗಳಂತೆ ಬಳಕುತ್ತಿರುವ ತಮ್ಮ ಜೀವನದ ಸಂಗಾತಿಯರೊಂದಿಗೆ ತಗ್ಗು ದಿನ್ನೆಗಳನ್ನು ಇಳಿದೇರುತ್ತ ಬಾಳುತ್ತಿರುವುದನ್ನು ನೋಡಿದ ಬಲವಂತ ವಿರಹಿಯಾದ ನನಗೆ, ಮುಂದಿನ ಹುಟ್ಟು, ಮಲೆನಾಡಿನಲ್ಲಾಗಲಿ ಎಂದೆನ್ನಿಸಿತು.

ವನಸುಮದಂತೆ ಅರಳಿ ಬಾಡುವ ಈ ಮಲೆನಾಡಿಗರಿಗೆ ಬಾಳು ಶೂನ್ಯವೆಂದನ್ನುತ್ತಿದ್ದ ನಾನು ನನ್ನ ತಪ್ಪನ್ನು ತಿದ್ದಿಕೊಂಡೆನು. ಒಣಬಾಳು ಇವರದಲ್ಲ ನಮ್ಮದೆಂದು ಅರಿತುಕೊಂಡೆನು. ಪಟ್ಟಣಿಗರ ಜೀವನ, ನಾಗರಿಕತೆ, ಇವೆಷ್ಟು ಕೃತ್ರಿಮಸೂಕ್ಷ್ಮವಾದವು. ಸತ್ಯದ ಮಾತಿರಲಿ, ಹುರುಳಿಲ್ಲದ ತಿರುಳಿಲ್ಲದೆ ಬಿಸಲಿಗೆ ಬಾಡುವ, ಛಳಿಗೆ ಮುದುಡುವ ನಮ್ಮ ನಾಗರಿಕತೆಯಲ್ಲಿದೆಯೇ ರಸ? ಮಳಲಗದ್ದೆ ಎಂಬೊಂದೂರು. ಅಲ್ಲಿನ ಗೌಡರ ಮನೆಯಲ್ಲಿ ಶುಭ ಶೋಭನ. ಈ ಶೋಭನಕ್ಕೆ ನಾವು ಹೋದಾಗ ಅವರಿಗಾದ ಆನಂದವನ್ನು ಬಣ್ಣಿಸಲು ಬರದು. ಸಡಗರದ ಗುಡುಗಾಟ ಅಡವಿಯಲ್ಲೆಲ್ಲಾ ಪ್ರತಿಧ್ವನಿಸುತ್ತಿತ್ತು. ದಪ್ಪಾದಷ್ಟೇ ಮೃದು ಹೃದಯವಿರುವ ಗೌಡತಿ ನಮಗೆ ಬಡಿಸಹತ್ತಿದಾಗ, ಅಧಿಕಾರವಾಣಿಯಿಂದ ನಮ್ಮನ್ನು ಗದ್ದರಿಸುತ್ತ ತಿಂಡಿ ತಿನಸುಗಳನ್ನು ಎಲೆಗೆ ನೂಕುತ್ತಿರುವಾಗ, ಅಮ್ಮನ ನೆನಪು ನನಗಾಗಿ ಹನಿಗಣ್ಣಾಯಿತು. ನಾನು ಒಬ್ಬ ಅಮ್ಮನ ಕುವರನಲ್ಲ ನನ್ನ ಅಮ್ಮಂದಿರು ನಾಡಿನ ತುಂಬಿರುವಾಗ ನನಗೇಕೆ ಈ ನೋವು ಎಂದು ಸಂತೈಸಿ ಕೊಂಡೆನು.

ಪೂರ‍್ಣೀ ಮದುವೆಯ ಮನೆಗೆ, ಶಾಂತಿ ಪ್ರಸ್ತುದ ಸಮಾರಂಭಗಳಿಗೆ ನನ್ನಂತಹ ಭಾವ ಜೀವಿ ಹೋಗಬಾರದು; ಹೋದುದಾಯಿತು. ತೆರೆ ತೆರೆಯಾಗಿ ಏಳುತ್ತಿರುವ ಭಾವನೆಗಳ ಏರಿಳಿತಗಳಿಗೆ ಎದೆಯೊಡ್ಡಿಯಾಯಿತು. ಈ ನನ್ನ ನಾಲ್ಕು ದಿನಗಳ ನೂರಾರು ಮೈಲಿಯ ಸಂಚಾರದ ಪ್ರತಿನಿಮಿಷವೂ ಜೀವನದ ರಸನಿಮಿಷಗಳಾಗಿದ್ದವು. ನಾಡಿಯನ್ನು ಮಿಡಿಯುವ ಘಳಿಗೆಯಾಗಿದ್ದವು. ಒಂದೆಡೆ ಒಬ್ಬ ಗೌಡರ ಹಿತ್ತಲಲ್ಲಿ ಒಂದೇ ಗುಲಾಬಿಯ ಸಸಿಯಲ್ಲಿ ಒಂದೇ ಕೆಂಪನೆಯ, ಪೆಂಪಿನ ಸೊಂಪಿನ ಕಂಪಿನ ಗುಲಾಬಿ ಅರಳಿ ಬಿರಿಯುತ್ತಿದ್ದಿತು, ಬೀಗುತ್ತಿದ್ದಿತು. ಅದನ್ನು ನೋಡಿದಾಗ ನನ್ನ ಜೊತೆಯಲ್ಲಿದ್ದ ಒಬ್ಬ ಸ್ನೇಹಿತರಿಗೆ ಈ ಗುಲಾಬಿ ಎಷ್ಟು ಚೆನ್ನು ಎಂದೆ. ಕಿಟಕಿಯಿಂದ ಜೀವನ ಗುಲಾಬಿಯೊಂದು ಈ ಮಾತನ್ನು ಕೇಳುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಗಿಡದ ಗುಲಾಬಿ, ಸಣ್ಣ ಮಗುವಿನ ಮೂಲಕ ನನ್ನ ಕೈಗೆ ಬಂದಿತು. ನಾನು ಮೈ ಮರೆತೆ ಗುಲಾಬಿಯನ್ನು ಮೂಗಿಗಾನಿಸಿದಾಗ, ಇದು ಸಾಗರದಲ್ಲಲ್ಲ! ಸೋಲೂರಿನಲ್ಲಿ. ಬಾಳೆಯ ವನದಲ್ಲಿ ಬೆಳೆದಿರುವ ಬಾಲೆಯರನೇಕರು ಬಾಳಿನ ಪಾಲುಗಾರನಿಗಾಗಿ ದಾರಿ ಕಾಯುತ್ತಿರುವರು. ಎಳೆ ಮನದಲ್ಲಿ ಬಾಳೆಯ ಸುಳಿಯಂತೆ ಬಯಕೆಗಳು ಮೂಡುತ್ತಿರುವ ಈ ಎಳೆ ಹುಡುಗಿಯರ ಹೃದಯದ ಬಡಿತವು, ಮುಖದ ಮುಗುಳು ನಗೆಯು, ಕಣ್ಣಿನ ಸರಳತೆಯ ತಪಸ್ವಿಯನ್ನಾದರೂ ದೀನವದನನ್ನಾಗಿ, ದರಿದ್ರನನ್ನಾಗಿ, ಮಾಡಿಬಿಡುವವು. ಭಯ ಬೇಡ, ನನ್ನ ವದನ ದೀನವಾಗಿದ್ದರೆ, ಇವರ ಬಾಳಿಗೆ ರಸವೆರೆಯುವ ರಸಿಕ ಜೀವಿತೇಶನು ದೊರೆತಿಲ್ಲವೆಂಬ ಮರುಕದಿಂದ, ನಾನು ದರಿದ್ರನಾಗಿದ್ದರೆ, ಇವರನ್ನು ಬಗ್ಗಿಸಲಾರದಷ್ಟು ಸಾಹಿತ್ಯ ಶೂನ್ಯವಾದುದರಿಂದ ನನ್ನೀ ಇಳಿ ವಯಸ್ಸಿನಲ್ಲಿ ಎಳೆ ಹುಡುಗಿಯರನ್ನು ನೋಡುವ ದೃಷ್ಟಿಯಲ್ಲಿ, ಅಣ್ಣನು ತಂಗಿಯನ್ನು ತಂದೆಯು ಬೆಳೆಯುವ ಮಗಳನ್ನು ನೋಡುವ ಭಾವನೆ ಇರುವುದೆಂಬುದನ್ನು ಅರಿತು, ನೀನು ನನ್ನ ಬಣ್ಣನೆಯಿಂದ ಬಣ್ಣಗೆಡಬೇಡ.

ಮಲೆನಾಡ ಸೌಂದರ್ಯದ ಮತ್ತಿನಲ್ಲಿ ನನ್ನ ನೆನಹಿನ ಪರದೆಯು ಅತ್ತ ಸರಿದಿಲ್ಲ. ಆದ್ದರಿಂದ ಈ ಪತ್ರದ ಸಾಹಿತ್ಯದೊಂದಿಗೆ ಹಳೆಯ ಚಿತ್ರವನ್ನು ಬೆರಸದೆ ಪತ್ರವನ್ನು ಮುಗಿಸುತ್ತಿದ್ದೇವೆ. “ನೆಲ್ಲುಂಟು ನೀರುಂಟು ಒಲ್ಲೆನುವ ನಲ್ಲೆಯರು ಅಲ್ಲುಂಟು” ಎಂದು ನೀನು ನನಗೊಮ್ಮೆ ಮಲೆನಾಡಿನ ಪರಿಚಯವನ್ನು ಮಾಡಿಕೊಡುತ್ತ ಓರ್ವ ಮಲೆನಾಡ ಹುಡುಗಿಯ ಬಿಂಕವನ್ನು ಬಣ್ಣಿಸಿದ್ದೆ. ನೀವು ಮಲೆನಾಡಿಗೆ ಹೋದೀರಿ ಎಂದು ಎಚ್ಚರಿಸಿದ್ದ ಆ ಪತ್ರ ನೆನಪಿಗೆ ಬಂದೇ ಬಿಟ್ಟಿತು. ಅದಕ್ಕೆ ಉತ್ತರದಂತಿದೆಯಲ್ಲವೆ ನನ್ನ ಮೇಲಿನ ಪತ್ರ? ಒಮ್ಮೆಯಾದರೂ ಬಾಳಿನ ಬವಣೆಯನ್ನು ಮರೆತು ಸೃಷ್ಟಿ ಸೌಂದರ್ಯದ ಚಿಂತನದಲ್ಲಿ ತನ್ಮಯಳಾಗು.

ಇತಿ ನಿನ್ನ ಜೀವ ಸಖ
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...