Home / ಕವನ / ಅನುವಾದ / ಬಾನಾಡಿ

ಬಾನಾಡಿ

ಆರು ನೀನೆಲೆ ಹರುಷಮೂರುತಿ?
ಹಕ್ಕಿಯೆಂಬರೆ ನಿನ್ನನು!
ತೋರಿ ದಿವಿಜರು ಸುಳಿವ ಬಳಿ, ಸುಖ
ವುಕ್ಕಿಬಹ ನಿನ್ನೆದೆಯನು
ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ!
ನೆಲವನೊಲ್ಲದೆ ಚಿಗಿದು ಚಿಮ್ಮುತ
ಮೇಲು ಮೇಲಕ್ಕೋಡುವೆ;
ಒಲೆದು ದಳ್ಳುರಿ ನೆಗೆದು, ಗಗನದ
ನೀಲಿಯಾಳದೊಳಾಡುವೆ;
ನಲಿದು ಹಾಡುತ ಹಾಡುತೇರುವೆ, ಏರುತೇರುತ ಹಾಡುವೆ.
ಬಿಳಿಯ ಮುಗಿಲನು ಬಣ್ಣವೇರಿಸಿ
ಕೆಳಗೆ ಹೊರಳುವ ಹೊತ್ತಿನ
ತಿಳಿಯ ಹೊಂಬಿಸಿಲಲ್ಲಿ ತೇಲುವೆ,
ಮುಳುಗಿ ಏಳುವೆ, ಹರಿಯುವೆ,
ಕಳಚಿ ದೇಹವ ದಿವಕೆ ಹರಿಯುವ ಭೋಗಿಯೋಲಾಟದವೊಲು.
ಹಾರುತಿರುತಲೆ ಸಂಜೆ ಸುತ್ತಲು
ಕರಗುವುದು ನಸುಗೆಂಪನು;
ತಾರೆ ನಡುಹಗಲಲ್ಲಿ ಬಾನೊಳು
ಕುರುಹುದೊರದ ಪರಿಯೊಳು
ತೊರೆಯಾದರು, ಕೇಳುತಿರುವೆನು ನಿನ್ನ ಕೀರುವ ನಲಿವನು.
ಎಳೆಯ ಬೆಳಕನು ಮೊಗೆದು ಹೊತ್ತರೆ
ಬೆಳ್ಳಗೆತ್ತಲು ತುಳುಕಲು,
ಕಳೆಯ ಸೊಡಲನು ಕುಗ್ಗುತಡಗುವ
ಬೆಳ್ಳಿಬಿಂಬದ ಬಗೆಯೊಳು,
ತಿಳಿವುದಿರುವುದು ಮೇಲೆ ಎಲ್ಲಿಯೋ, ಕಣ್ಣು ತಟ್ಟನೆ ಹಿಡಿಯದು.
ಇಳೆಯ, ಗಾಳಿಯ ತರಹನೆಲ್ಲವ
ಕೆಲೆವ ನಿನ್ನುಲಿ ತುಂಬಿತು,
ತೊಳೆದ ಬಾನೊಳಗೊಂಟಿಮೋಡದ
ನೆಲೆಗೆ ನುಸುಳಿದ ತಿಂಗಳು
ಬೆಳಕುಮಳೆಯನು ಕರೆದು ಗಗನದ ಬಯಲ ತುಂಬುವ ತೆರದೊಳು.
ಏನೊ ನೀನದ ನಾವು ಕಾಣೆವು;
ಏನು ಸರಿ ನಿನಗೆಂಬುದು?
ನೀನು ಸನ್ನಿಧಿಯಿಂದ ಬೀರುವ
ಗಾನಧಾರೆಯ ಕಾಂತಿಗೆ
ಸೋನೆ ಸಮನೇ ಬಿಲ್ಲುಮೂಡಿದ ಮೋಡ ಸುರಿಯುತ್ತಿರುವುದು!
ಬಗೆಯ ಹೊಳಪಿನೊಳಡಗಿ ತನ್ನೊಳೆ
ತಡೆಯಲಾರದೆ ಹಾಡುತ,
ಬಗೆಗೆ ತಾರದೆ ಲೋಕ ನೂಕಿದ
ಮಿಡುಕು ಹಂಬಲು ಬಯಕೆಯ
ಹೊಗಿಸಿ ಹೃದಯಕೆ ಮರುಕಗೊಳಿಸುವ ಕವಿಗೆ ಹೋಲಿಸಿ ಹೊಗಳಲೋ!
ಕೆಳದಿ ಸುಳಿಯದ ವೇಳೆ, ಒಬ್ಬಳೆ
ಏರಿ ಅರಮನೆಮಾಡವ
ಒಲುಮೆಹೇರಿದ ಜೀವವಾರಲು,
ತೂರಿ ನೆಲೆಯನು ಕೊಚ್ಚಿಸಿ,
ಒಲುಮೆವೊಲೆ ಸವಿಯಾದ ಗಾನವನುಲಿವ ದೊರೆಮಗಳೆಂಬೆನೋ!
ಬಿಳಿಯ ಮಂಜಿನ ಮುಸುಕು ಬಳಸಿದ
ಮೆಳೆಯ ಪೊದರಲಿ ಪದರುತ,
ಬಳಿಯ ಹೂವಿನ, ಹುಲ್ಲ ತೆರೆಯಲಿ
ಹೊಳಪ ಮೆಯುತ, ಮರಸುತ,
ತೆಳುವು ಬೆಳಕನು ಕೆದರಿ ಮಿನುಕುವ ಮಿಂಚುಹುಳುವೆಂದೆಣಿಸಲೋ!
ಹಸುರ ಹೊರಎಸಳಲ್ಲಿ ಹುದುಗುತ,
ಮುಗುಳ ಸೊಬಗನು ಹೊರೆಯುತ,
ಬಿಸಿಯ ಗಾಳಿಗೆ ಬಳಲಿ ಬಿರಿಯುತ,
ಸೊಗಡುಗಂಪನು ಸುರಿಯುತ,
ಹಸಿದ ಜೇನಿನ ಹೊರೆಯ ಕಳ್ಳರ ಸೊಕ್ಕಿಸಿಡುವ ಗುಲಾಬಿಯೋ!
ಹೊಳೆವ ಗರುಕೆಯ ಮೇಲೆ ಬೀಳುವ
ಮಳೆಯ ಹನಿಗಳ ಸೊಪ್ಪುಳು,
ಮಳೆಗೆ ಕಣ್ಣಿಡುವರಳು, ಮತ್ತೀ
ಇಳೆಯೊಳಾವುದು ನಲಿವುದು,
ಹೊಳಪು, ಹೊಸತವನೆಲ್ಲ ಮೀರಿಸಿ ನಿನ್ನ ಗಾನವೆ ಮೆರೆವುದು.
ದೇವನಾಗಿರು, ಹಕ್ಕಿಯಾಗಿರು,
ಕಲಿಸು ನಮಗೀ ಹರುಷವ,
ಪ್ರೇಮಗಾನವೊ, ಸೋಮಪಾನವೊ,
ಅಲೆವುದಾವುದು ಹೃದಯವ?
ಆವ ಸವಿ ಬಗೆ ತುಳುಕುವುದಿನಿತು ದಿವ್ಯಾನಂದವ?
ಮದುವೆಯೊಸಗೆಯ ಗೀತವಾಗಲಿ,
ಜಯದ ಘೋಷವೆ ಆಗಲಿ,
ಎದಿರೆ ನಿನ್ನೊಂದುಲಿಗೆ, ತೆಗೆ, ಹುಸಿ
ಮಯದ ಹೆಮ್ಮೆಯ ಕೊಸರಿಕೆ!
ಅದರೊಳೆತ್ತಲೋ ಹದುಗಿ ಏನೋ ಕೊರತೆ ಇಹುದೆಂದರಿಯೆವೇ?
ಆವ ಸಿರಿನೋಟಗಳು ಮಡುಗಳೊ
ತೀವಿದೀ ಸುಖಗಾನಕೆ?
ಆವ ತೆರೆಗಳೋ, ಬಯಲೋ, ಬೆಟ್ಟವೊ ,
ಆವ ಗಗನವಿಚಿತ್ರವೋ?
ಆವ ಜಾತಿ ಪ್ರೇಮವೋ? ನೋವೇನೂ ಕಾಣದ ಜನ್ಮವೋ?
ಗೆಲವು ಹಿಗ್ಗುವ ನಿನ್ನ ಬಗೆಯೊಳು
ಸೊರಗು ಸಂಕಟವಿಳಿಯದು;
ಕಲಕಿ ಚಿತ್ತವ ಕವಿವ ಚಿಂತೆಯ
ನೆರಳು ಬಳಿಯೊಳು ಸುಳಿಯದು.
ಒಲಿವೆ, ಒಲಿವರ ದಣಿವು ಬೇಸರವೇನೋ ನಿನಗದೆ ತಿಳಿಯದು.
ಜಡರು ಮರ್ತ್ಯರು ನಾವು, ತರ್ಕಿಸಿ
ಮರಣಮರ್ಮವನರಿವೆವೆ?
ಹಿಡಿದು ಕನಸಿನೊಳಾಳವೆಲ್ಲವ,
ಪರಮಶಾಂತಿಯ ಪಡೆದಿಹೆ;
ಪಡೆಯದಿರಲಿಂತೆಂತು ಹರಿವುದು ರಾಗ ತಿಳಿಹೊಳೆಯಂದದೆ?
ಹಿಂದುಮುಂದನು ನೋಡಿ ನಮೆವೆವು
ನೆನೆಯುತಿಲ್ಲದ ಸುಖವನು,
ಕುಂದು ಸೋಕದ ನಮ್ಮ ನಗೆಯೊಳು
ಕೊನೆಗೆ ನೋವಿನಿಸಿರುವುದು,
ನೊಂದ ಗೋಳನು ಹೇಳಿ ಕೊರೆವುವೆ ಇನಿಯ ಕವನಗಳೆಮ್ಮೊಳು.
ಹೋಗಲದು: – ಹಗೆ, ಕೊಬ್ಬು, ಕಳವಳ
ದೆಡೆಗೆ ಲೆಕ್ಕಿಸದಿದ್ದೆವು;
ಹೀಗೆ ಕಂಬನಿಬಿಡದ ಹುಟ್ಟನು
ಪಡೆದೆ ಭೂಮಿಗೆ ಬಂದೆವು;
ಆಗಲಾಯಿತು, ನಿನ್ನ ನಲಿವಿನ ಹದಕ್ಕೆ ಬರುವೆವೆ? ಕಾಣೆನು.
ಕಿವಿಗೆ ಸವಿಯನು ಕರೆವ ವೃತ್ತಗ
ಳಿರಲಿ ಹೆಣೆಯುವೆವೆಲ್ಲರು ,
ಕವನಕೋಶದೊಳಿರುವ ರತ್ನಗ
ಳಿರಲಿ ಕದಿಯಲು ಬಲ್ಲೆವು,
ಕವಿಗೆ ಬೇಡವೆ ನಿನ್ನ ಕೌಶಲ – ನೆಲವ ಜರೆಯುವ ಜೀವವೇ!
ಭೋಗನಿಧಿ, ನೀನರಿತ ಹರುಷದಿ
ಕಲಿಸಿಕೊಂಡು ನನಗರೆಯನು;
ರಾಗಮಧುರಾವೇಶವೆನ್ನಲಿ
ತುಳುಕಿ ಬರುತಿರೆ ತುಟಿಯಲಿ,
ಈಗ ಕೇಳುವೆ ನಾನು, ಲೋಕವೆ ಆಗ ಕೇಳುವುದೆನ್ನನು.
*****
SHELLEY (1792-1822) : Skylark
Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...