Home / ಕಥೆ / ಜನಪದ / ಶಿವಪಾರ್ವತಿಯರ ಸೋಲು

ಶಿವಪಾರ್ವತಿಯರ ಸೋಲು

ಕುರುಬ ಬೀರನು ಕುರಿ ಕಾಯುತ್ತ ಒಂದು ಹಳ್ಳದ ದಂಡೆಗೆ ಬಂದನು. ಅಲ್ಲಿಯ ನೀರು ನೆರಳು ನೋಡಿ, ಕುರುಬನು ತನ್ನ ಕುರಿಗಳಿಗೆ ದಡ್ಡಿಹಾಕಲು ತಕ್ಕ ಸ್ಥಳವೆಂದು ಬಗೆದನು. ಅದರಂತೆ ದಡ್ಡಿಹಾಕಲು ತೊಡಗಿದನು.

ಅಷ್ಟರಲ್ಲಿ ಅತ್ತಕಡೆಯಿಂದ ಶಿವಪಾರ್ವತಿ ಬಂದರು. “ಇಲ್ಲೇಕೆ ದಡ್ಡಿ” ಎಂದು ಕೇಳಿದರು.

“ಅದಕ್ಕೇನೂ ಆಗುವದಿಲ್ಲ” ಎಂದನು ಬೀರನು.

“ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತುಂಬಿ ಬರುವದಿಲ್ಲವೇ?” ಎಂದು ಶಿವ ಪಾರ್ವತಿ ಕೇಳಿದರು.

“ಮಳೆ ಹೋಯಿತು ತನ್ನ ನಾಡಿಗೆ ಮೂರು ತಿಂಗಳು” ಎಂದು ಬೀರನು ಅವರಿಗೆ ಮರುನುಡಿದನು.

ಶಿವಪಾರ್ವತಿಯರು ಅಲ್ಲಿ ನಿಲ್ಲದೆ ಹೋಗಿಬಿಟ್ಟರು. ಅವರು ನೇರವಾಗಿ ವರುಣನ ಲೋಕಕ್ಕೆ ತೆರಳಿ – “ಈಗಲೇ ಮಳೆರಾಯನನ್ನು ಕಳಿಸಿಕೊಡು” ಎಂದು ಹೇಳಿದರು.

“ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ. ಅವನು ಬರುವುದು ಮೂರು ತಿಂಗಳು ಕಳೆದ ಬಳಿಕ” ಎಂದು ವರುಣನು ತಿಳಿಸಿದನು.

ಆ ಮಾತು ಕೇಳಿ ಶಿವಪಾರ್ವತಿಯರ ಮುಖ ಬಾಡಿಹೋದವು. ಮರುನುಡಿಯದೆ ಅವರು ಕೈಲಾಸಕ್ಕೆ ಹೊರಟುಹೋದರು.

ಬೀರನ ದಡ್ಡಿ ಹಳ್ಳದಲ್ಲಿ. ಅವನ ಕುರಿಗಳು ಹಳ್ಳದ ದಂಡೆಯಲ್ಲಿ ಬೀಡುಬಿಟ್ಟು ತಂಗಿದವು. ಹಳ್ಳದ ದಡದಲ್ಲಿ ಬೆಳೆದು ನಿಂತ ಹುಲ್ಲು ಮೇದು ಹಳ್ಳದ ನೀರು ಕುಡಿಯುತ್ತ ಮೂರು ತಿಂಗಳು ಕಳೆದವು.

ಆ ಸಂದರ್ಭದಲ್ಲಿ ಅತ್ತ ಕಡೆಯಿಂದ ಶಿವಪಾರ್ವತಿಯರು ಬಂದರು. ಕೇಳಿದರು – “ಬೀರಾ, ದಡ್ಡಿ ಕಿತ್ತಿದೆಯಲ್ಲ ! ಯಾಕೆ ?” “ಮಳೆರಾಜ ಬಂದಿರುವನಲ್ಲವೇ ನಮ್ಮ ನಾಡಿಗೆ” ಇದು ಬೀರನ ಮರುನುಡಿ. “ಎಷ್ಟು ಸೊಕ್ಕು ಈ ಕುರುಬನಿಗೆ ? ಮಳೆ ಬರುವದೆಂದು ಸ್ಪಷ್ಟವಾಗಿ ಹೇಳುತ್ತಿರುವನಲ್ಲ! ಏತರ ಮೇಲಿಂದ ಹೇಳುತ್ತಾನೆ ಹೀಗೆ ?” ಎಂದು ಶಿವಪಾರ್ವತಿ ತಮ್ಮತಮ್ಮಲ್ಲಿಯೇ ಅಂದುಕೊಂಡು, ನೇರವಾಗಿ ದೇವಲೋಕಕ್ಕೆ ನಡೆದರು. ಅಲ್ಲಿ ವರುಣನ ಬಳಿಗೆ ಹೋಗಿ ಹೇಳಿದರು – “ಮಳೆರಾಯನನ್ನು ಮರಳಿ ಕರೆಯಿಸು.”

ವರುಣ ಬಿನ್ನಯಿಸಿದನು – “ಆ ಹೊತ್ತು ನೀವು ಸೂಚಿಸಿದಂತೆ ಆತನನ್ನು ಇಂದೇ ಅತ್ತಕಡೆ ಕಳಿಸಿದ್ದೇನೆ. ಮೋಡಗಳು ಮುಂದೆ ಮುಂದೆ, ಸಿಡಿಲು ಮಿಂಚುಗಳು ಹಿಂದೆ ಹಿಂದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ ? ಕೊಟ್ಟ ಹುಕುಮು ಅವರ ಕೈಯಲ್ಲಿದೆ.”

ಆ ಮಾತು ಕೇಳಿ ಶಿವಪಾರ್ವತಿಯರು ಅಂದುಕೊಂಡರು – “ನಾವಿಂದು ಕುರುಬನಿಗೆ ಸೋತೆವು.”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...