Home / ಕವನ / ಅನುವಾದ / ಆಪ್ರೋದಿತೆ

ಆಪ್ರೋದಿತೆ

ಮೂಲ: ಸ್ಯಾಫೋ
(ಗ್ರೀಕ್ ಕವಯಿತ್ರಿ, ಕ್ರಿ.ಪೂ. ೬-೭ನೆಯ ಶತಮಾನ)

ದೇವಿ ಆಪ್ರೋದಿತೆಯೆ
ಸಕಲ ವೈಭವದ ಸಿಂಹಾಸನವ ಏರಿರುವ ರೂಪವಿಖ್ಯಾತಯೆ!
ಎಲ್ಲರಿಗು ಮಿಗಿಲು
ಸಾವಿಗೂ ದಿಗಿಲು
ಎನ್ನಿಸುವ ಸ್ಯೂದೇವ ಪಡೆದಂಥ ಮಗುವೆ
ಅಂಗಲಾಚುವೆ ದೇವಿ ಬಳಿಸಾರಿ ಅಡಿಯ
ದುಃಖ ಕೊರಗುಗಳಿಂದ ಸೀಳದಿರು ಎದೆಯ
ಹಿಂದೆ ನೀ ಬಂದಂತೆ ಎಷ್ಟೊ ಸಲ ಬಳಿಗೆ
ಬಾರೆ ಆಪ್ರೋದಿತೆ, ಬಾ ನನ್ನ ಕಡೆಗೆ

ದೂರದಲಿ ಕೇಳುತಿರುವಂತೆಯೇ ನನ್ನ ದನಿ
ತಂದೆ ಸ್ಯೂಸನ ದಿವ್ಯ ಮಂದಿರವನಿಳಿದು
ಮುಗಿಲಿರದ ನೀಲಿಯಲ್ಲಿ ರೆಕ್ಕೆಗಳ ಪಟಪಟಿಸಿ ಗುಬ್ಬಚ್ಚಿ ಹಿಂಡು
ಸಿಂಗಾರದಲಿ ಎಳೆವ ಬಂಗಾರ ರಥವೇರಿ ಬರುತಿದ್ದೆ ಬಳಿಗೆ
ಬಂದು ಬದಿನಿಂತು ಆ ಮಧುರ ಅಧರದಲ್ಲಿ
ಸೂಸುತಿರೆ ಸವಿನಗೆ
ನನ್ನ ಕೇಳಿದೆ ನೀನು
“ಏನು ಹೇಳೇ ಹೆಣ್ಣ, ಏನು ನಿನ್ನರಕೆ
ಎದೆಗೆ ಕಿಚ್ಚಿಟ್ಟಂಥ ಹುಚ್ಚು ಬಯಕೆ?
ನನ್ನ ಮಾಯೆಯ ನೆರವು ಬೇಕೆ ಅದಕೆ?
ನಿನ್ನ ತೋಳಲಿ ಯಾರ ತಂದು ಕೆಡವಲಿ ಹೇಳೆ
ಯಾರಿಂದ ನಿನಗಿಂಥ ಗೋಳೆ?”
ಕಂಡ ಕ್ಷಣ ದೂರ ಓಡಿದರು ಬಲು ಬೇಗನೇ
ಹತ್ತುವಳು ಬೆನ್ನು
ಕೊಟ್ಟ ಕಾಣಿಕೆಯ ಕಿತ್ತೆಸೆಯುವಳು ಆದರೂ
ಕೊಡುಗೈಯ ಹೆಣ್ಣು
ಪ್ರೀತಿಸಳು ಯಾರನೂ, ಆದರೂ ನೀನೊಲಿಯೆ
ಮಾಗುವುದು ಹಣ್ಣು
ಬಾ ಬೇಗ ಈ ಎಲ್ಲ ದುಖ ಯಾತನೆಯಿಂದ
ಎತ್ತಿ ಕಾಪಾಡು
ತೊಡಕೆಲ್ಲ ಪರಿಹರಿಸಿ ಎದೆ ಬಯಸಿದಂಥ
ಇಷ್ಟಾರ್ಥಗಳ ನೀಡು
ಉತ್ತರಿಸು ಬಾ ರಾಣಿ
ಬದಿನಿಂತು ಕೈಗೆ ಕೈ ಹೆಣೆದು ಮುದ ನೀಡು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...