Home / ಕವನ / ಅನುವಾದ / ಶ್ರೀಹರೀ ಶ್ರೀಹರೀ ಶ್ರೀಹರೀ

ಶ್ರೀಹರೀ ಶ್ರೀಹರೀ ಶ್ರೀಹರೀ

ಮೂಲ: ಅರವಿಂದ ಗುಹಾ

ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ
ಎರಡೂವರೆ ರೂಪಾಯಿ ಕೊಟ್ಟು,
ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ
ಕೊಟ್ಟ ಹಣಕ್ಕೆ ತಕ್ಕಷ್ಟು;
ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ
ಸ್ಮೃತಿಯ ತಳದಾಳಕ್ಕೇ ಜಾರಿ,
ಏನು ಮಾಡಿದರು ಸಹ ನೆನಪಾಗುತ್ತಿಲ್ಲವೇ
ಶ್ರೀಹರೀ ಶ್ರೀಹರೀ ಶ್ರೀಹರೀ!

ಅವಳ ಹೆಸರೆಂಥದೋ ನೆನಪಾಗುತ್ತಿಲ್ಲ ಈಗ
ಘಟನೆ ಬಲು ಹಿಂದೆ ನಡೆದದ್ದು,
ಏನವಳ ಹೆಸರು? ಮಾಲತಿಯೋ, ತರಂಗಿಣಿಯೊ
ರಾಧಾಮಣಿಯೊ, ನೆನಪು ಮಬ್ಬು;
ಇರಲಿ ಬಿಡಿ ಅದನ್ನೀಗ, ಒಂದು ಮಾತಂತು ನಿಜ
ಅವಳ ಜಡೆ ಬೆನ್ನಲ್ಲಿ ಜಾರಿ,
ಕಾಡಿಗೆ ಹೊಳಪಿನ ನೋಟ ಎದೆ ಸೀಳುವಂತಿತ್ತು
ಶ್ರೀಹರೀ ಶ್ರೀಹರೀ ಶ್ರೀಹರೀ!

ಎಷ್ಟನೆಯ ಸ್ವರ್ಗಕ್ಕೋ ರವಾನೆಯಾದಂತಿದ್ದೆ
ರತಿದೇವಿ ರೆಕ್ಕೆಯನ್ನೇರಿ,
ರೆಕ್ಕೆಯ ಸ್ಪರ್ಶವಷ್ಟೆ ನೆನಪಿನಲ್ಲುಳಿದಿದೆ
ಉಳಿದ ವಿವರಗಳೆಲ್ಲ ತೀರಿ;
ವಿಗ್ರಹದ ಮೂಗು ತುಟಿ ಕೈಕಾಲು ಕೆತ್ತನೆ
ಹೂತುಹೋಗಿದೆ ಮರವೆಯಲ್ಲಿ,
ಕಡೆದಿದ್ದ ಕಲ್ಲಷ್ಟೆ ನೆನಪಲ್ಲಿ ಉಳಿದಿದೆ
ಶ್ರೀಹರೀ ಶ್ರೀಹರೀ ಶ್ರೀಹರಿ!

ಕುರುಡನಿಗೆ ಕಂಡೀತು ಏನು? ಆದರೆ ನೋಡಿ,
ಕತ್ತಲೆಯನ್ನೆ ಅವನು ಹಾಡಬಹುದು,
ಕತ್ತಲೆಯಲ್ಲಿ ನಾನು ಮಟ್ಟೊಂದ ರಚಿಸಿದರೆ
ಹಾಡಲು ಅದಕ್ಕೆ ಒಂದು ಗೀತೆ ಬೇಕು;
ಎರಡೂವರೆ ರೂಪಾಯಿ ಕೊಂಡ ಪ್ರೀತಿಯು ಹೀಗೆ
ಹಾಡೊಂದು ಹುಟ್ಟಲು ಆಯ್ತು ದಾರಿ,
ಆಕಾಶ ಪುಟ್ಟ ಕೊಳದಲ್ಲಿ ಪ್ರತಿಬಿಂಬಿಸಿತು
ಶ್ರೀಹರೀ ಶ್ರೀಹರೀ ಶ್ರೀಹರೀ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...