Home / ಕವನ / ಅನುವಾದ / ಶ್ರೀಹರೀ ಶ್ರೀಹರೀ ಶ್ರೀಹರೀ

ಶ್ರೀಹರೀ ಶ್ರೀಹರೀ ಶ್ರೀಹರೀ

ಮೂಲ: ಅರವಿಂದ ಗುಹಾ

ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ
ಎರಡೂವರೆ ರೂಪಾಯಿ ಕೊಟ್ಟು,
ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ
ಕೊಟ್ಟ ಹಣಕ್ಕೆ ತಕ್ಕಷ್ಟು;
ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ
ಸ್ಮೃತಿಯ ತಳದಾಳಕ್ಕೇ ಜಾರಿ,
ಏನು ಮಾಡಿದರು ಸಹ ನೆನಪಾಗುತ್ತಿಲ್ಲವೇ
ಶ್ರೀಹರೀ ಶ್ರೀಹರೀ ಶ್ರೀಹರೀ!

ಅವಳ ಹೆಸರೆಂಥದೋ ನೆನಪಾಗುತ್ತಿಲ್ಲ ಈಗ
ಘಟನೆ ಬಲು ಹಿಂದೆ ನಡೆದದ್ದು,
ಏನವಳ ಹೆಸರು? ಮಾಲತಿಯೋ, ತರಂಗಿಣಿಯೊ
ರಾಧಾಮಣಿಯೊ, ನೆನಪು ಮಬ್ಬು;
ಇರಲಿ ಬಿಡಿ ಅದನ್ನೀಗ, ಒಂದು ಮಾತಂತು ನಿಜ
ಅವಳ ಜಡೆ ಬೆನ್ನಲ್ಲಿ ಜಾರಿ,
ಕಾಡಿಗೆ ಹೊಳಪಿನ ನೋಟ ಎದೆ ಸೀಳುವಂತಿತ್ತು
ಶ್ರೀಹರೀ ಶ್ರೀಹರೀ ಶ್ರೀಹರೀ!

ಎಷ್ಟನೆಯ ಸ್ವರ್ಗಕ್ಕೋ ರವಾನೆಯಾದಂತಿದ್ದೆ
ರತಿದೇವಿ ರೆಕ್ಕೆಯನ್ನೇರಿ,
ರೆಕ್ಕೆಯ ಸ್ಪರ್ಶವಷ್ಟೆ ನೆನಪಿನಲ್ಲುಳಿದಿದೆ
ಉಳಿದ ವಿವರಗಳೆಲ್ಲ ತೀರಿ;
ವಿಗ್ರಹದ ಮೂಗು ತುಟಿ ಕೈಕಾಲು ಕೆತ್ತನೆ
ಹೂತುಹೋಗಿದೆ ಮರವೆಯಲ್ಲಿ,
ಕಡೆದಿದ್ದ ಕಲ್ಲಷ್ಟೆ ನೆನಪಲ್ಲಿ ಉಳಿದಿದೆ
ಶ್ರೀಹರೀ ಶ್ರೀಹರೀ ಶ್ರೀಹರಿ!

ಕುರುಡನಿಗೆ ಕಂಡೀತು ಏನು? ಆದರೆ ನೋಡಿ,
ಕತ್ತಲೆಯನ್ನೆ ಅವನು ಹಾಡಬಹುದು,
ಕತ್ತಲೆಯಲ್ಲಿ ನಾನು ಮಟ್ಟೊಂದ ರಚಿಸಿದರೆ
ಹಾಡಲು ಅದಕ್ಕೆ ಒಂದು ಗೀತೆ ಬೇಕು;
ಎರಡೂವರೆ ರೂಪಾಯಿ ಕೊಂಡ ಪ್ರೀತಿಯು ಹೀಗೆ
ಹಾಡೊಂದು ಹುಟ್ಟಲು ಆಯ್ತು ದಾರಿ,
ಆಕಾಶ ಪುಟ್ಟ ಕೊಳದಲ್ಲಿ ಪ್ರತಿಬಿಂಬಿಸಿತು
ಶ್ರೀಹರೀ ಶ್ರೀಹರೀ ಶ್ರೀಹರೀ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...