Home / ಕವನ / ಕವಿತೆ / ಮುಳ್ಳಗಳ್ಳಿ

ಮುಳ್ಳಗಳ್ಳಿ

ಮುಳ್ಳಗಳ್ಳಿ ಬಳಿಯೆ ನೀನು
ಕಳ್ಳಿಕರಿಯ ಹುಳದ ಕೊಲೆಗೆ
ಅಳಲಿ ಬಳಲಿ ಬಾಯಬಿಟ್ಟು
ನೊಂದು ಬೆಂದು ಬೂದಿಯಾಗಿ ಕಾಣುತಿರುವೆಯ
ಚಂದದಿಂಪು ಸಂದಿತೆಂದು ಸವೆಯುತಿರುವೆಯ
ಕೋಟಗೀಟೆಯಂತೆ ಬೇಲಿ
ಕೂಟಕೆಲ್ಲ ನಿನ್ನ ನಡಿಸೆ
ಮಾಟವಾಗಿ ಮೆರೆದು ನಿಂದು
ಸೊಬಗಿನಿಂದ ಬೆಳೆದು ಬಂದ ದಿವಸ ಪೋಯಿತೆ
ಜವನ ಜಾತ್ರೆ ಜವದಿ ಬಂದು ಮೋಸವಾಯಿತೆ
ಮುಳ್ಳಿನಿಂದ ಕೂಡಿಯಿರುವ
ಒಳ್ಳೆ ಹಣ್ಣಿನಿಂದ ಸಿಳ್ಳಿ-
ಮಿಳ್ಳಿ ಜಗವ ತಣಿಸಿ ಕುಣಿಸಿ
ಚಲುವಿನಿಂದ ಬೆಳೆಪ ಬಾಲರಮೃತವೆಲ್ಲಿದೆ
ತಿಳಿಯದಾಯ್ತು ತಿರೆಗೆ ಬೇರೆತರವದೆಲ್ಲಿದೆ
ಹಕ್ಕಿ ಹರಿಣಿ ಹಾವುಗಳಿಗೆ
ತಕ್ಕುದಾದ ಇಕ್ಕೆಯನ್ನು
ಮಕ್ಕಳಂತೆ ಸಾಕಿ ಕೊಡಲು
“ನಾಡತಾಯಿ ಬೀಡು” ಎಂದು ಕೂಗಿ ಕಲೆತವೆ
ಕೇಡುಗಾಲ ಬರಲು ತಾವೆಯೋಡಿ ಹೋದವೆ
ಹಲವು ಕಾಲ ಹಲವು ಬಗೆಯ
ಹೊಲವ ಬಳಸಿ ಮಲೆತುನಿಂತು
ಛಲದೆ ಬೆಳೆಯ ಜನರು ನಿನ್ನ
ಸವರಿ ಸವರಿ ಸೋತು ಸೋತು ಸರಿದು ನಿಂತ‌ರೈ
ಬವಣೆಯಿಂದ ಕೊಲುವ ಮದ್ದನಿತ್ತು ದಣಿದರೈ
ರಕ್ತಬೀಜ ರಾತ್ರಿಚರನ
ರಕ್ತದಂತೆ ಬಿದ್ದ ಕಡೆಗೆ
ವ್ಯಕ್ತರೂಪದಿಂದಲೇಳೆ
ಮತಿಯು ಹರಿಯದಿರಲು ನರರು ಮೊರೆಯನಿಟ್ಟರೆ
ವ್ಯಥಿತವಾದ ದನಿಯನೆಲ್ಲ ದೇವ ಕೇಳ್ದನೆ
ರೀತಿ ನೀತಿ ತಿಳಿದುನೋಡಿ
ಜಾತಿ ರತ್ನದಂತ ದೇವಿ
ಖ್ಯಾತಿಗೊಂಡು ನಡೆಯದಿರಲು
ಪೊಡವಿಯೊಡೆಯ ಸಿಟ್ಟಿನಿಂದೆ ಪಿಡುಗಬಿಟ್ಟನೆ
ಒಡನೆ ಹುಳದ ಗಡಣದಿಂದೆ ಕೊಲೆಯ ನಡಿಸಿತೆ
ಸಿಟ್ಟಿಗೆದ್ದು ದೇವ ಕಷ್ಟ
ಕೊಟ್ಟನೆಂಬ ನಾಡ ನುಡಿಯ
ಮಟ್ಟಿಗಿಳಿಯದಿರುವ ಮಾತ
ಮನದೆ ತೂಗಿ ನೋಡೆ ದಯಾಮಯನು ಮಾಳ್ಪನೆ
ಜನಕತಂದೆ “ಅನುವ ತನುವ” ನೋಡದಿರುವನೆ
ಸಾವಿರಾರು ವರುಷದಿಂದೆ
ಧರೆಯ ಬಳಸಿ ಮರೆದು ನಿಂದ
ಅರಸುತನದ “ಅರವು ಮರವು”
ಅರಿಯದಂತೆ ಕರಗಿ ಕರಗಿ ಮಾಯವಾಯಿತೆ
ಪಿರಿದೆನಿಪ್ಪ ಸಿರಿಯ ಮರವು ಸರಿದು ಹೋಯಿತೆ
೧೦
ತಾಯಿ ನಿನ್ನ ಬೇನೆಯೇನು
ಬಾಯಿ ಬರದೆ ಪೇಳುವುದಕೆ
ಕಾಯ್ವರಾರೊ ಕೊನೆಯ ಕಾಣೆ
ಯಾವದುಷ್ಟ ಪಿಡುಗು ಬಂದು ಕುಲವ ಕಡಿವುದೈ
ಕಾವನೆಲ್ಲಿ ಇರುವನಯ್ಯೊ ಕುಲವೆ ಕಳೆವುದೈ
೧೧
ಕರ್ಮಭೂಮಿಯಲ್ಲಿ ಬಂದು
ಕರ್ಮವನ್ನು ಮಾಡಿ ನಿಂದು
ಕರ್ಮದಿಂದ ಹುಟ್ಟು ಸಾವ
ತೊಟ್ಟು ಧರೆಗೆ ಬಂದು ಆಡಿಪಾಡಿ ಮಡಿವೆವೈ
ಬಿಟ್ಟು ಬಿಡದ ಕರ್ಮವನ್ನು ಕಟ್ಟಿ ನಡೆವೆವೈ
೧೨
ಬರದ ಕಾಲ ಬಂದು ಜನರ
ತರಿದು ತರಿದು ತೂರುತ್ತಿರು
ಹರಣವುಳಿಸಿ ಪೊರೆದ ತಾಯಿ
ಸಿರಿಯ ತೊರೆದು ಧರೆಯ ತೊರೆದು ಪೋಗುತಿರುವೆಯ
ಮರುಕದಿಂದ ಮನದೆ ನೊಂದು ಹರಣ ತೊರೆವೆಯ
೧೩
ಕಷ್ಟ ಕಾಲವೊದಗಿ ಬರಲು
ಇಷ್ಟರಾಪ್ತ ಮಿತ್ರರೆಲ್ಲ
ನಿಷ್ಟುರಾಗಿ ನಡೆವರಯ್ಯ
ಕಾಲ ಬರಲು ಕಾಲು ತಾನೆ ಕೊಲೆಗೆ ನಿಲುವುದೈ
ಗೆಳೆಯರೆಂಬ ಕೊಳಚೆಯೆಲ್ಲ ಕಳಚಿ ಬೀಳ್ವುದೈ
೧೪
ಪರಮಪುಣ್ಯ ಪರಮಪಾಪಿ
ಧರೆಯನಾಳ್ದ ನರಪರೆಲ್ಲ
ಹಿರಿದು ಕಿರಿದು ಪದವಿ ತೊರೆದು
ಕಾಲಗತಿಗೆ ಕಟ್ಟುಬಿದ್ದು ಮಾಯವಾದರೈ
ಕಾಲಬರಲು ಯಾರು ತಾನೆ ಜಗದೆ ಉಳಿವರೈ
೧೫
ಅಂಗವೆಲ್ಲ ರೋಗದಿಂದ
ವಿಂಗಡಾಗಿ ಕಳಚಿ ಬೀಳ್ವ
ಸಾಂಗವಾದ ಸಾವ ನೋಡೆ
ಒಡನೆ ದುಗುಡದಿಂದ ಕೂಡಿ ಒಡಲೆಯುರಿಯುದೈ
ಪೊಡವಿಯಾಣ್ಮನಡಿಯಕಂಡು ನುಡಿಯುತ್ತಿರುವುದೈ
೧೬
ನಿನ್ನ ದುಃಖವೆನ್ನತಾಗೆ
ಬನ್ನ ಬಡುವ ಮನವು ತಾನೆ
ಭಾವಗೀತೆಯಲ್ಲಿ ಮೊಳೆಯೆ
ಕಲಿಸದಿರ್ದ ಕವನ ತಾನೆ ಕಟ್ಟಿ ಬರುವುದೈ
ಕರುಳಿಗೆಲ್ಲ ತಿಳಿವ ತಾನೆ ತೊಳೆದು ನಿಲುವುದೈ
೧೭
ಜಗದ ಬಗೆಯ ಬಗೆದು ನೋಡಿ
ಬಗೆದ ದುಗುಡವೆಲ್ಲ ನುಂಗಿ
ಮಗುಳಿ ಮನವ ಬಿಗಿದು ಬಿಗಿದು
ಇಳೆಗೆ ತಂದು ತಿಳಿವನಿತ್ತ ದೊರೆಯ ಪಾಡುವ
ಕಳೆವಕಾಯ ಕಳಚಿಬೀಳೆ ಒಲಿದು ಪಾಡುವ
*****
Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...