ಮೂಲ: ವಿಲಿಯಂ ಬಟ್ಲರ್ ಏಟ್ಸ್
ಮಿದುಳಿನಲ್ಲೇ ಜನರು ಮಾಡುವ ಎಲ್ಲ ವಿಚಾರ –
ದಿಂದ ರಕ್ಷಿಸು ನನ್ನ ದೇವ;
ಅಮರಗೀತೆಯ ಹಾಡುವಾತ ಅದನ್ನು ತನ್ನ
ಮೂಳೆ ಮಜ್ಜೆಗಳಲ್ಲಿ ಬಗೆವ;
ಈತ ಬಹಳ ವಿವೇಕಿ ಮುದುಕ ಎಂದೆಲ್ಲರೂ
ಹೊಗಳುವೆಲ್ಲದರಿಂದ ರಕ್ಷಿಸು;
ನಾನೊಲ್ಲದವನೇನು ಹಾಡಿನ ಸಲುವಾಗಿ
ಅವಿವೇಕಿಯಂತೆ ಕಾಣಿಸಲು?
ಹೇ ದೇವ ಪ್ರಾರ್ಥಿಸುವೆ (ಈಚೆಗೀ ಶಬ್ದ
ಬಳಕೆಯಲ್ಲಿದೆ ಅದಕ್ಕಾಗಿ);
ಮೋಹ ತುಂಬಿದ ಮೂರ್ಖನಂತೇ ಕಾಣಲಿ ನಾನು
ಮುದುಕನಾಗಿಯೆ ಸತ್ತರೂನು.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.