ಮೂಲ: ವಿಲಿಯಂ ಬಟ್ಲರ್ ಏಟ್ಸ್
ದೀರ್ಘಕಾಲದ ಮೌನ ಮುಗಿದು ಮಾತು;
ಬೇರೆ ಪ್ರೇಮಿಗಳು ಸಂಬಂಧ ಕಡಿದೋ, ಮಡಿದೋ
ಇಲ್ಲದಿರುವಾಗ,
ನಿಷ್ಕರುಣಿ ದೀಪಕ್ಕೆ ಕವಿಸಿ ಮರೆಯನ್ನ
ನಿಷ್ಕರುಣಿ ಇರುಳಿಗೆ ಸರಿಸಿ ತೆರೆಯನ್ನ
ಸಂಗೀತ ಕಲೆಗಳ ಉನ್ನತವಸ್ತುವನ್ನ
ನಾವೀಗ ತಿರುತಿರುಗಿ ಹೀಗೆ ಪ್ರಶಂಸಿಸುವುದು ಬಹಳ ಸಹಜ.
ಶಕ್ತಿ ಸೋರಿದ ದೇಹದಲ್ಲಿ ಎಲ್ಲ ವಿವೇಕ;
ಪ್ರಾಯದ ದಿನಗಳಲ್ಲೊ ಪ್ರೀತಿಸಿದ್ದೆವು ಬರಿದೆ
ಯಾವ ಅರಿವೂ ಇರದೆ ಮರುಳರಾಗಿ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.