Home / ಕವನ / ಕವಿತೆ / ಅವತಾರಿ ಬರುತ್ತಾನೆ

ಅವತಾರಿ ಬರುತ್ತಾನೆ

ಅವನು ಬರುತ್ತಾನೆ
ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು
ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ
ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ
ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ಮುಳುಗಿಸುತ್ತ
ಬಾಯ ಒರಳಲ್ಲಿ ಹಿರಿಯರನರೆದಾಡುತ್ತ

ಹಲ್ಲ ತೀಟೆಯಲ್ಲಿ ಕಿರಿಯರ ಕೊರೆದು ಸಣ್ಣ ಮಾಡುತ್ತ
ಮೂಗಿನ ನೇರಕ್ಕೆ ಜಗವನಳೆದು ಸೀನಿ ಸುರಿಯುತ್ತ
ಬಡಾಯಿ ಬಾಹುಗಳ ಉದ್ದಗಲಗಳಿಗೆ ಚಾಚಿ ತಬ್ಬಿ
ಹೂಟ್ಟೆಯುಬ್ಬರ ತೋರುತ್ತ ತನ್ನಪ್ಪನೊಬ್ಬನೇ ಪರಮ ಪುರುಷ
ತನ್ನವಗವಳೊಬ್ಬಳೇ ಜಗಮೀರಿದ ಗರತಿ ಎನುತ್ತ

ತನ್ನ ವಂಶ ವೃಕ್ಷಕ್ಕೆ ಅನಾದಿ ಬೀಜದ ಪಾವಿತ್ರ್ಯ ತೋರುತ್ತ
ಹಗಲಿನ ಮುಖಕ್ಕೆ ಕೊಳ್ಳಿ ತೋರಿಸುತ್ತ
ವಿಶ್ವಗೂಢತೆಯ ರೋಮರೋಮಗಳಲ್ಲಿ ತುಂಬಿಕೊಂಡು
ತಾನು ಕುಡಿದೊಂದೆರಡು ಬಾವಿಗಳಲ್ಲಿ ಸಾಗರಗಳ ಮುಕ್ಕಳಿಸುತ್ತ
ತನ್ನ ಬಾಯಲ್ಲೀರೇಳು ಲೋಕಗಳ ಬಿಂಬಿಸಿ
ಕೃಪಾಪೋಷಕ ನಗೆಯಿಂದ ಜಗವ ಪಾವನಗೊಳಿಸಿ

ನಮ್ಮನು ಉದ್ಧರಿಸುಲು ಬರುತ್ತಾನೆ
ಬಂದು ನಿಂತು ಜಗದಗಲ ಮುಗಿಲಗಲವಾದ
ತನ್ನುದರದಡಿಯಲ್ಲಿ ನಮಗೆ ಕಾವು ಕೊಡುತ್ತಾನೆ
ಬೆಚ್ಚಗಿದೆಯೆಂದು ನಾವು ಆಶ್ರಯ ಪಡೆದೆವೋ ಸರಿ
ಕಪ್ಪ ನೆರಳಪುಟ್ಟಿ ನಮ್ಮ ಮುಚ್ಚಿ
ಉಸಿರುಕಟ್ಟಿ ನಾವು ಮೂಕರಾಗಿ
ಬಿಳಿಚಿಕೊಂಡು ಬೆಪ್ಪರಾದರೆ ಅವನ ತಪ್ಪೇ?

ನೋಡು ಅವನು ಬಂದೇ ಬರುತ್ತಾನೆ
ಬಿಡಿಸಿಕೊಳ್ಳಲು ನೀನು ಯತ್ನಿಸಿದಂತೆಲ್ಲಾ
ಪರಲೋಕಕೇರುವ ಪರಿಪೂರ್ಣ ಪವಾಡದೇಣಿಯಿಂದಾದರೂ
ನಿನ್ನ ಸೆಳೆದು ತನ್ನ ಸುತ್ತಲೇ ಜೇಡನಂತೆ ತಿರುಗಾಡಿಸುತ್ತಾ
ಕೊನೆಗೆ ನಿನ್ನ ನುಂಗಿ ನೀರು ಕುಡಿಯುತ್ತಾನೆ
ಸೋಹಮ್ಮೆಂದು ನಿನ್ನ ಸೊನ್ನೆಯಾಗಿಸುತ್ತಾನೆ
ನೀನು ನೀನಾಗುಳಿಯಬೇಕೆಂದರೆ ದೂರ ಓಡು
ಅಗೋ ಬಂದ! ಬಂದೇ ಬರುತ್ತಾನೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...