Home / ಕಥೆ / ಜನಪದ / ಅಳಿಯನ ಅರ್ಹತೆ

ಅಳಿಯನ ಅರ್ಹತೆ

ಜೀನಹಂಕನಾದ ಶ್ರೀಮಂತನಿಗೆ ಒಬ್ಬಳೇ ಮಗಳಿದ್ದಳು. ಅವನು ಯುಕ್ತಿಪರಿಯುಕ್ತಿಗಳಿಂದ ಸಾಕಷ್ಟು ಗಳಿಸಿದ್ದನು. ಹಾಗೂ ಜಿಪುಣತನದಿಂದ ಖರ್ಚುಮಾಡಿ ಬೇಕಾದಷ್ಟು ಉಳಿಸಿದ್ದನು. ತಾನು ಸಂಗ್ರಹಿಸಿದ ಆಸ್ತಿಯನ್ನೆಲ್ಲ ಕಾಯ್ದುಕೊಂಡು ಹೋಗಬಲ್ಲ ವರ ಸಿಕ್ಕರೆ, ಅವನನ್ನು ಅಳಿಯತನಕ್ಕೆ ಇಟ್ಟುಕೊಳ್ಳಬೇಕೆಂದು ನಿರ್ಣಯಿಸಿದ್ದನು.

ಅದೆಷ್ಟೋ ಜನ ವರಗಳು ಬಂದು ಬಂದು ಹೋದವು. ಆದರೆ ಶ್ರೀಮಂತ ಮಾವನಿಗೆ ಅವರಾರಲ್ಲಿಯೂ ಅರ್ಹತೆ ಕಂಡುಬರಲಿಲ್ಲ. ಆದರೆ ಬಕ್ಕಣಗಿ ಎಂಬ ಹಳ್ಳಿಯಲ್ಲಿ ಅದೇ ಗೋತ್ರದ ಒಂದು ಮನೆತನವಿತ್ತು. ಅಲ್ಲಿ ಇಬ್ಬರು ಅಣ್ಣತಮ್ಮಂದಿರಿದ್ದರು. ಅವರಿಗಿನ್ನೂ ಮದಿವೆಯಾಗಿರಲಿಲ್ಲ. ಆ ಶ್ರೀಮಂತ ಮನೆತನಕ್ಕೆ ಅಳಿಯನಾಗಿ ನಿಲ್ಲಲು ಅರ್ಹನಾದ ಒಬ್ಬ ವರ ಬೇಕಾಗಿದ್ದಾನೆಂಬ ಸಂಗತಿ ತಿಳಿಯಿತು. ಅವರ ತಂದೆಯು ಮಕ್ಕಳಿಬ್ಬರನ್ನೂ ಕೆರೆದು – “ನೀವಿಬ್ಬರೂ ಹೋಗಿ ನಿಮ್ಮ ನಿಮ್ಮ ಬುದ್ದಿವಂತಿಕೆ ತೋರಿಸಿ, ಇಬ್ಬರಲ್ಲಿ ಒಬ್ಬರು ಅಳಿಯತನಕ್ಕೆ ನಿಂತರೆ ಒಳ್ಳೆಯದಾಗುತ್ತದೆ ಎಂದು ಹೇಳಿದನು.

ತಂದೆಯ ಸೂಚನೆಯಂತೆ ಅವರಿಬ್ಬರೂ ಆ ಶ್ರೀಮಂತನ ಊರಿಗೆ ಹೋಗಿ ಅವನನ್ನು ಭೆಟ್ಟಿಯಾದರು. ಅವನು ಒಬ್ಬೊಬ್ಬರನ್ನು ಪರಭಾರೆ ಕರೆದೊಯ್ದು ಅವರ ಅರ್ಹತೆಯನ್ನು ಪರೀಕ್ಷಿಸತೊಡಗಿದನು.

“ಇದ್ದ ಆಸ್ತಿಯನ್ನು ಉಳಿಸುವುದಕ್ಕೂ ಬೆಳೆಸುವುದಕ್ಕೂ ನೀನಾವ ಬುದ್ಧಿವಂತಿಕೆಯಿಂದ ಸಂಸಾರ ಮಾಡುತ್ತೀ” ಎಂದು ಕೇಳಿದನು.

ಹಿರಿಯವನು ತನ್ನ ಅರ್ಹತೆಯನ್ನು ವಿವರಿಸುತ್ತಾನೆ – “ನನಗೆ ದಿನಕ್ಕೆ ಒಂದು ರೊಟ್ಟಿಯಾದರೆ ಸಾಕು. ಅದನ್ನು ತಿಂದು ತಂಬಿಗೆ ನೀರು ಕುಡಿದು ಒಂದು ದಿನ ಕಳೆಯುತ್ತೇನೆ.” ಆ ಮಾತು ಕೇಳಿ ಶ್ರೀಮಂತನು ಮನಸ್ಸಿನಲ್ಲಿ – ಅಬಬಬಾ ! ಅಂದುಕೊಂಡು – “ಅಡ್ಡಯಿಲ್ಲ, ನಿನ್ನ ತಮ್ಮನನ್ನು ಒಳಗೆ ಕಳಿಸಿಕೊಡು” ಎಂದು ಹಿರಿಯ ವರನಿಗೆ ಹೇಳಿದನು. ಚಿಕ್ಕವನು ಶ್ರೀಮಂತನ ಬಳಿಗೆ ಬರಲು ಆತನಿಗೆ – “ಈ ಆಸ್ತಿಯನ್ನೆಲ್ಲ ನೀನೆಂತು ಕಾಪಾಡಿಕೊಂಡು ಹೋಗಬಲ್ಲೆ ? ಯಾವ ಯುಕ್ತಿಯನ್ನು ಅನುಸರಿಸುವಿ?” ಎಂದು ಕೇಳಿದನು.

ಆತನು ತನ್ನ ಜೀವನ ರೀತಿಯನ್ನು ಹೇಳುತ್ತಾನೆ – “ಒಂದು ದಾರದೆಳೆಗೆ ಒಂದು ರೊಟ್ಟಿ ಕಟ್ಟಿ ಅದನ್ನು ತೂಗಿಬಿಡುವುದು. ಹತ್ತಿರದಲ್ಲಿ ಒಂದು ತಂಬಿಗೆ ಕುಡಿಯುವ ನೀರನ್ನು ತುಂಬಿಟ್ಟುಕೊಳ್ಳುವದು. ಮೊದಲು ನೇತಾಡುವ ರೊಟ್ಟಿಯನ್ನು ಕಣ್ತುಂಬ ನೋಡಿ, ಆ ಬಳಿಕ ತಂಬಿಗೆಯೊಳಗಿನ ನೀರಿನ ಕಡೆಗೆ ಕಣ್ಣು ಹೊರಳಿಸಿದರೆ ತೀರಿತು ನನ್ನ ಊಟ. ತರುವಾಯ ಅಡಿಕೆಹೋಳು ಇದ್ದರೂ ಸರಿ, ಇರದಿದ್ದರೂ ಸರಿ. ಸಾಗಿತು ನಮ್ಮ ಗಾಡಿ.”

ಶ್ರೀಮಂತನು ಚಿಕ್ಕವನ ಅರ್ಹತೆಗೆ ಮೆಚ್ಚಿ, ಆತನನ್ನು ಅಳಿಯತನಕ್ಕೆ ಇಟ್ಟುಕೊಂಡು ಮಗಳನ್ನು ಕೊಟ್ಟು ಮದುವೆ ಮಾಡಿದನು.

ಅಳಿಯನೇ ಶ್ರೀಮಂತ ಆಸ್ತಿಗೆ ಒಡೆಯನಾಗಿ, ಆತನ ಸರಿಯಾದ ಸಂಪತ್ತನ್ನು ಉಪಭೋಗಿಸುತ್ತ ಸುಖದಿಂದ ಕಾಲಕಳೆಯಹತ್ತಿದನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್