Home / ಕಥೆ / ಜನಪದ / ಯಾರಿಗೆ ಕೊಡಬೇಕು ಕನ್ಯೆ

ಯಾರಿಗೆ ಕೊಡಬೇಕು ಕನ್ಯೆ

ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು ದಾಳಿಂಬರ ಬೀಜ; ಆಕೆಯನ್ನು ಯಾರು ಬೇಡವೆಂದಾರು? ಆಕೆಗಿದ್ದ ಮೂವರೂ ಸೋದರ ಮಾವಂದಿರು ಕೇಳುತ್ತಿದ್ದರು – ಆಕೆ ನನಗೆ ಬೇಕು, ನನಗೆ ಬೇಕು – ಎಂದು.

ಅಕ್ಕನಿಗೆ ಇದ್ದವಳು ಒಬ್ಬಳೇ ಮಗಳು. ಕೇಳುವವರು ಮೂವರು ತಮ್ಮಂದಿರು. ಯಾರಿಗೆ ಕೊಡಬೇಕು ?

ಎಲ್ಲರೂ ಒಳ್ಳೆಯವರೇ ಆಗಿದ್ದರು; ಚೆಲುವರೂ ಆಗಿದ್ದರು. ಒಬ್ಬನಿಗೆ ಕೊಟ್ಟರೆ ಇಬ್ಬರು ಸಿಟ್ಟಾಗುತ್ತಾರೆ. ಏನು ಮಾಡುವುದು ಯುಕ್ತಿ ?

ಮೂವರೂ ತಮ್ಮರನ್ನು ಕರೆದು ಅಕ್ಕನು, ತಲೆಗೆ ನೂರುನೂರು ರೂಪಾಯಿ ಕೊಟ್ಟಳು. “ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಿರಿ. ಯಾರು ತೀವ್ರವಾಗಿ ಹೆಚ್ಚು ಗಳಿಸಿಕೊಂಡು ಬರುವಿರೋ ಅವರಿಗೆ ನನ್ನ ಮಗಳನ್ನು ಕೊಡುವೆನು” ಎಂದು ಹೇಳಿದಳು.

ಆ ಮಾತಿಗೆ ಮೂವರೂ ಒಪ್ಪಿ ದೇಶಾಂತರಕ್ಕೆ ನಡೆದರು. ಕೆಲವು ದಿನಗಳಲ್ಲಿ ಅವರು ಮೈಸೂರಿನಂಥ ಪಟ್ಟಣಕ್ಕೆ ಹೋದರು. ಊರತುಂಬ ಅಂಗಡಿಗಳು ! ಪ್ರತಿಯೊಂದು ಅಂಗಡಿಯಲ್ಲಿ ತರತರದ ಬದುಕು ! ನೋಡುತ್ತ ನೋಡುತ್ತ ಒಂದು ಅಂಗಡಿಯನ್ನು ಪ್ರವೇಶಿಸಿದರು. ಅಲ್ಲೊಂದು ಕನ್ನಡಿಯಿತ್ತು. ಅದರಲ್ಲಿ ನೋಡಿದರೆ ಜಗತ್ತೆಲ್ಲ ಕಣ್ಣಮುಂದೆ ಬರುತ್ತಿತ್ತು. ಹಿರಿಯಣ್ಣನು ತನ್ನ ಬಳಿಯಲ್ಲಿದ್ದ ನೂರು ರೂಪಾಯಿಕೊಟ್ಟು ಅದನ್ನು ಕೊಂಡುಕೊಂಡನು.

ಇನ್ನೊಂದು ಅಂಗಡಿಯಲ್ಲಿ ವಿಚಿತ್ರವಾದ ತೊಟ್ಟಿಲು ಕಂಡರು. ಅದರಲ್ಲಿ ಕುಳಿತು ಮನಸ್ಸು ಹರಿದಲ್ಲಿ ಹೋಗಲು ಬರುವಂತಿತ್ತು. ನಡುವಿನಣ್ಣನು ಅದನ್ನು ನೂರು ರೂಪಾಯಿಗಳಿಗೆ ಖರೀದಿಮಾಡಿದನು. ಮುಂದಿನ ಪೇಟೆಯಲ್ಲಿ ಗೊಂಬೆಗಳ ಅಂಗಡಿಯಿತ್ತು. ಅಲ್ಲಿ ಸತ್ತವರನ್ನು ಬದುಕಿಸುವ ಗೊಂಬೆಗಳಿದ್ದವು. ಅವುಗಳನ್ನು ಸಣ್ಣವನು ಕೊಂಡುಕೊಂಡನು. ಅಷ್ಟಾಗುವುದಕ್ಕೆ ಊಟದ ಹೊತ್ತಾಗಿತ್ತು. ಮೂವರೂ ಹಸಿದಿದ್ದರು. ಅಕ್ಕ ಕಟ್ಟಿದ ಬುತ್ತಿಯಂತೂ ಇತ್ತು. ಅದನ್ನು ತೆಗೆದುಕೊಂಡು ಊರಹೊರಗೆ ಹಳ್ಳದ ಕಡೆಗೆ ಊಟಕ್ಕೆಂದು ನಡೆದರು. ಹಳ್ಳದಲ್ಲಿ ಕೈಕಾಲು ತೊಳೆದುಕೊಂಡು ಬಂದು ಬುತ್ತಿ ಬಿಚ್ಚಿದರು. ಇನ್ನೇನು, ಊಟಕ್ಕೆ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ, ತಮ್ಮೂರ ಕಡೆಯ ಸಂಗತಿಯನ್ನು ತಿಳಿದುಕೊಳ್ಳಬೇಕೆಂದು ಕನ್ನಡಿಯಲ್ಲಿ ನೋಡಿದರು. ದುರ್ದೈವ ಎದುರಿಗೇ ಬಂದಂತಾಯ್ತು. ತಾವು ಮದುವೆಯಾಗಬೇಕೆಂದಿರುವ ಕನ್ಯೆ ತೀರಿಕೊಂಡಿತ್ತು. ಗೋರಿಮರಡಿಗೆ ಒಯ್ಯುವ ಸಿದ್ಧತೆ ನಡೆದಿತ್ತು. ಬಿಚ್ಚಿದ ಬುತ್ತಿ ಕಟ್ಟಿದರು. ಇನ್ನೆಲ್ಲಿಯ ಊಟವೆಂದು ಕೂಡಲೇ ತೊಟ್ಟಿಲಲ್ಲಿ ಕುಳಿತರು. ಹಾ೦ ಅನ್ನುವಷ್ಟರಲ್ಲಿ ಊರಿಗೆ ಬಂದು ತಲುಪಿದರು. ಸಣ್ಣ ತಮ್ಮನು ತನ್ನ ಬಳಿಯಲ್ಲಿರುವ ಗೊಂಬೆಯಿಂದ ಸತ್ತವಳನ್ನು ಎಬ್ಬಿಸಿದನು.

ಇನ್ನು ಹೇಳಿರಿ – ಅಕ್ಕನು ಯಾರಿಗೆ ಕೊಡಬೇಕು. ತನ್ನ ಮಗಳನ್ನು ?
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...