ಹುಲ್ಲು ಗರಿಕೆಯ ಆಸೆ

ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ
ನಿಮ್ಮೆದೆಯ ಕದವ ತೆರೆದು ಮಾತಾಡಿಸಿ
ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ
ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು.
ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ,
ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ.
ನಿಮ್ಮ ಬಾಗಿಲ ಮುಂದೆಯೇ ಮನುಷ್ಯತ್ವದ
ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವಾಗ
ನೀವೇಕೆ ಸುಮ್ಮನಿದ್ದೀರಿ ಹೇಳಿ ಮಂದಿರದ ಗೋಪುರಗಳೇ
ಕೊಲೆಯಾಗಿ ಬಿದ್ದ ಶವರಾಶಿಯಲ್ಲಿ
ಜಾತಿ ಹೆಕ್ಕುವವರನು ನಡುಬೀದಿಯಲಿನ ನಿಲ್ಲಿಸಿ ಕೇಳುವೆ
ಕೊಲೆಗಡುಕರೇ ವಿಶ್ವದ ಕಳಂಕಿತರೇ
ಮಂದಿರ, ಮಸೀದಿಯಲಿ ಕದನಕ್ಕೆ ಕಾಲುಕೆದರುವವರೇ,
ದೇಶಭಕ್ತಿಯ ಸೋಗಿನಲಿ ಮುಂದೆ ಬಂದವರೇ
ಹಾಡುಹಗಲೇ ನಿಮ್ಮ ಸೋದರಿ ವಿಧವೆಯಾದುದಕ್ಕೆ
ಧನದಾಹದ ಬೆಂಕಿಯಲ್ಲಿ ಬೆಂದುಹೋದುದಕ್ಕೆ
ದೇಗುಲ ಸಂಸ್ಕೃತಿಗೆ ತಳಪಾಯ ಹಾಕಿದುದಕ್ಕೆ
ಹೆಣ್ಣುಗಳ ಸಾಯಿಸಿ, ಹೊಟ್ಟೆ ಹೊರೆಯುತ್ತಿರುವುದಕ್ಕೆ
ಅವಳ ‘ಸತಿ’ ಗುಡಿಯ ಜೀರ್‍ಣೋದ್ಧಾರದ ಬಗ್ಗೆ
ಎಚ್ಚರ! ಸತಿಯಾದ ಗುಡಿಯ ಕಲ್ಲುಗಳೇ ಕೇಳುತ್ತವೆ
ಮುಂದೊಂದು ದಿನ ನಿಮ್ಮ ಕರ್‍ಮಕಾಂಡದ ಲೆಕ್ಕ
ಅವಳ ಖಾತೆ ಪುಸ್ತಕದಲ್ಲಿ ಬರೆದು
ನಿಮ್ಮನು ಕೋರ್‍ಟಿಗೆ ಎಳೆಯುತ್ತಾಳೆ.
ನಿಮ್ಮ ಮೇಲಿನ ಆರೋಪಪಟ್ಟಿ ಸಿದ್ಧಪಡಿಸುತ್ತಾಳೆ.
ದಾಸ್ತಾವೇಜುಗಳು ಸಾಬೀತಾದ ದಿನ
ಲೋಕದ ಜೈಲಿನ ಗೋಡೆಗಳು ಸಾಕಾಗಲಾರವು
ನಿಮ್ಮನ್ನು ಕೂಡಿ ಹಾಕಲು.
ನಿಮ್ಮ ಪಾಪದ ಬೆಳೆ ಬಾನೆತ್ತರಕ್ಕೆ ಬೆಳೆದು
ಬಹುದೂರ ನಿಮ್ಮ ಮೋಕ್ಷದ ದಾರಿ.
ಕಾವೇರಿ, ಗಂಗೆ, ತುಂಗೆ ಯಮುನೆಯರು
ಸಾಕಾಗುವುದಿಲ್ಲ ನಿಮ್ಮ ಪಾಪ ತೊಳೆಯಲು.
ಕಾವಿಗಳೆದೆಯಲ್ಲಿ ಮುಚ್ಚಿಟ್ಟ ಕೋವಿಗಳೇ
ಮಂದಿರ – ಮಸೀದಿಗಳಲ್ಲಿ ಅಡಗಿಸಿಟ್ಟ ಬಂದೂಕುಗಳೇ,
ಮದ್ದು ತುಂಬಿದ ಕುಂಡ ಕಮಂಡಲಗಳೇ,
ಆಧ್ಯಾತ್ಮದ ಗುಹೆಯಲ್ಲಿ ಮೊಳಕೆಯೊಡೆಯಲಾರಿರಿ
ಕಣ್ಣ ಬಿಂಬದ ತುಂಬ ವಸಂತ ಮೂಡಿಸಲಾರಿರಿ
ಹಸಿದ ಹೊಟ್ಟೆಗೆ ರೊಟ್ಟಿಯಾಗಲಾರಿರಿ
ಮಂತ್ರದುಗುಳಿನಲಿ ತೇಜಾಬು ಬೆರಸಿ
ಗರ್‍ಭಗುಡಿಯಲಿ ಒಳಸಂಚು ನಡೆಸಿ,
ವ್ಯಾಪಾರ ವಹಿವಾಟು ಕುದುರಿಸಲಾರಿರಿ
ಖಾದಿ, ಖಾಕಿ, ಕಾವಿಗಳಿಗೆ
ಅರ್‍ಪಿತ ದೆಹಲಿಯೆಂಬ ಬೆಲೆವಣ್ಣು
ಡಿಸೆಂಬರ್ ಆರು ಬಂತೆಂದರೆ ನಡುಗುತ್ತಾಳೆ
ಬಾಬ್ರಿ ಮಸೀದಿ ನೆಲಕ್ಕುರುಳಿ
ಇತಿಹಾಸದಲ್ಲಿ ಕಪ್ಪಾದ ಆ ದಿನ
ಗುಮ್ಮಟ ಉರುಳಿದ ದಿನ
ಜಟಕಾ ಬಂಡಿ ಸುಟ್ಟು ಹೋದ ದಿನ
ಕೂಲಿ ಬಡವರು ಕರಕಲಾದ ದಿನ
ಸಂಸ್ಕೃತಿಯೆಂಬ ಮಂತ್ರ ಉಗುಳುವ ನೀವು
ಸೌಹಾರ್‍ದ ಸಂಪತ್ತನು ಲೂಟಿ ಮಾಡಿದ ದಿನ
ಗಣಿ ಧೂಳಿನಲ್ಲಿ ಉಸಿರುಗಟ್ಟಿ
ನೆತ್ತರ ಪಸೆಯಲಿ ಮೊಳಕೆ ಹೆಪ್ಪುಗಟ್ಟಿದೆ.
ಬೆಂಕಿ ಬಿದ್ದ ಗುಡಿಸಲಲ್ಲಿ ಅಸ್ತಿಪಂಜರಗಳು
ಕರಕಲಾದ ಕನಸುಗಳಲಿ ಚಿಗುರು ಮೊಳೆತು
ಕೆಂಪು ಹೂವುಗಳು ಅರಳಿ ನಿಂತಾಗ

ಮಂದಿರ – ಮಸೀದಿಗಳ ಠೇಕೇದಾರರಿಗೆ
ಚೌಕದಲಿ ನಿಲ್ಲಿಸಿ ಕೇಳುತ್ತೇನೆ ಪಾಪಿಗಳೇ
ನೀವೆಷ್ಟೇ ಹೊಸಕಿ ಹಾಕಿದರೂ ನಾವು
ಮತ್ತೆ ಮತ್ತೆ ಕಂಪು ಬೀರುವ ಹೂವಾಗಿ
ಅರಳಿ ನಿಲ್ಲುತ್ತೇವೆ ಬಯಲು ನಾಡಿನ ತುಂಬ
ಹಚ್ಚ ಹಸುರಿನ ಆಸೆಯ ಹುಲ್ಲು ಗರಿಕೆಯಾಗಿ
ಸೌಹಾರ್‍ದ ಬದುಕಿಗೆ ನಾಂದಿಯಾಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೊಗಲ ಚೀಲ
Next post ಸ್ತ್ರೀತ್ವದ ನೆಲೆ ಬೆಲೆ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…