Home / ಕವನ / ಕವಿತೆ / ನವಿರಂಗಿ

ನವಿರಂಗಿ

ಒಂದೂರಿನಲ್ಲಿ ಒಬ್ಬರಸಿದ್ದ
ಅವನುಡುಪೆಂದರೆ ಬಹು ಪ್ರಸಿದ್ದ.
ಒಮ್ಮೆಗೆ ಓಲಗದೊಳು ಕುಳಿತಿರಲು
ಬಂದೆರೆಡೆಗೆ ಇಬ್ಬರು ದರ್ಜಿಗಳು,
“ಕಂಡೂ ಕಾಣದ ತೆರ ನವಿರಾಗಿಹ
ಗಾಳಿಗು ಆಕಾಶಕು ತೆಳುವಾಗಿಹ
ಸೋಜಿಗದುಡುಪನು ಹೊಲಿಯುವೆ”ವೆಂದು
ಆಣೆಯನಿಟ್ಟರು ಎಲ್ಲರ ಮುಂದು.
ಅರಸಗೆ ಉಡುಪೆಂದರೆ ಬಲು ಆಸೆ.
ನಂಬಿಸಿತವನನು ಠಕ್ಕರ ಭಾಷೆ.
ಒಂದು ವರುಷ ಗಡುಬನು ಕೇಳಿದರು
ರಾಶಿಹೊನ್ನ ಮುಂಗಡ ಕೇಳಿದರು.
ಉಡುಪಿನಾಸೆಗರಸಸ್ತು ಎಂದ
ಅವರೆರೆತಕೆಲ್ಲಕ್ಕೂ “ಹ್ಞೂ” ಎಂದ.

ಇಂತು ಬೊಕ್ಕಸವ ಬರಿದನು ಮಾಡಿ
ನೆಯ್ಯುವ ಹೊಲಿಯುವ ಆಟವ ಹೂಡಿ
ಜಾಣರಿಗೇ ಇದು ಕಾಣುವುದೆಂದು
ಸಾಮಾನ್ಯರಿಗೆಂದಿಗು ಅಲ್ಲೊಂದು
ಬಂದವರಿಗೆಲ್ಲ ಬಯಲನೆ ತೋರಿ
ಇಲ್ಲದುಡುಪಿನಂದವನೇ ಸಾರಿ
ಎಲ್ಲರ ನಂಬಿಸಿದರು ದರ್ಜಿಗಳು.
ಇದರ ಮಾತನಡುಗೂಲಜ್ಜಿಗಳು
ಹರಡಿದರೆಲ್ಲೆಡೆ ಜಾತ್ರೆ ನೆರೆಯಿತು.
ದೊರೆ ಉಡುಪನುಡುವ ದಿನವೇರ್ಪಟ್ಟಿತು.
ಉಟ್ಟನರಸನೀ ಬಯಲುಬಟ್ಟೆಯ,
ಬೆತ್ತಲೆಯೊಳೆ ಕೊಂಡನು ಜನದಿಟ್ಟಿಯ!
“ಅಯ್ಯೋ! ಬರಿಮೈ” ಎಂದರು ಜನಮನದೊಳಗೆ,
“ಆಹಾ ವಸ್ತ್ರದ ನವಿರೆಂಥದು!” ಎಂದರು ಹೊರಗೆ.
ಆದೊಡೆ ಮಗುವೊಂದು
“ಅಯ್ಯೋ ಬೆತ್ತಲೆಬಸವನ ನೋಡೆ”ಂದು
ಚಪ್ಪಳೆಯಿಕ್ಕಿತು; ಎಂಥ ದಿಟ್ಟತನ!
“ಹೌದೇ, ಬರಿಬೆತ್ತಲೆ!” ಎಂದರು ಊರ ಜನ
“ದಿಟ, ದಿಟ” ಪಿಸುಗುಟ್ಟಿತು ಪರಿವಾರ ;
ಅಳುಕಿ ಅಳುಕಿ “ಹೌದೆ”ಂದಿತು ಸರಕಾರ.
ಆಗರಸನು ಬೆಚ್ಚಿ
“ಕೆಚ್ಚಿನಿವರ ನೆಚ್ಚಿ”
ಎನ್ನುತ ಅವಮಾನಕೆ ಕಣ್ಮುಚ್ಚಿ
ಓಡಿದನರಮನೆಗೆ,
ತಿಂಗಳವರೆಗೂ ಬಾರದೆ ಹೊರಗೆ
ನೀವೇನೆನ್ನುವಿರೀ ಕತೆಗೆ?

ಈ ಕವನ ಹಾನ್ ಅನ್‌ಡೆರ್‌ಸೆನ್‌ ಅವರ ಕತಯೊಂದರ ಭಾವಾನುವಾದ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...