Home / ಕವನ / ಕವಿತೆ / ಹಸಿಮಣ್ಣಾಗುವ ಹಿಮಾಲಯ

ಹಸಿಮಣ್ಣಾಗುವ ಹಿಮಾಲಯ

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ
ಮುಖಗಳನ್ನು ಹುಡುಕುತ್ತಾ
ಬೆಕ್ಕಸ ಬೆರಗಾಗುತ್ತಾನೆ
ತನ್ನದೇ ಮುಖ ಕಂಡ ನಿರ್ಲಿಪ್ತ
ಆದರೂ ಹುಚ್ಚು ಪ್ರೇಮಿ!

ತಪ್ಪು – ಸರಿಗಳ ಲೆಕ್ಕ ಹಿಡಿದು
ತೂಗಲಾರದ ತಕ್ಕಡಿಗಳಿಗೆ
ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನೆಗಳಿಗೆ
ಎಲ್ಲಾ ಇದ್ದೂ ಏನೂ ಇಲ್ಲೆನುತ
ಮತ್ತೇನೂ ಬೇಡೆನುವ ನಿರಾಕರಣಕ್ಕೆ
ಹಿಮಾಲಯದೆತ್ತರಗಳಲಿ
ಉತ್ತರ ಹುಡುಕುವ ಹುಚ್ಚು
ಮುಖವೊಂದಕ್ಕೆ.

ಪ್ರಶ್ನೆಯೊಂದಕ್ಕೇ ನೂರು
ಉತ್ತರಗಳ ಸಮಜಾಯಿಷಿಯಲಿ
ಎಲ್ಲವೂ ಬೇಕು
ಎಲ್ಲವೂ ನಾನೇ ಎನುವ
ಪ್ರೀತಿಯಮಲಿಗೆ
ಮತ್ತೆ ಮತ್ತೆ ಸಿಕ್ಕಿ

ಹಸಿಮಣ್ಣಿನ ಸೆಳೆತಕ್ಕೆ
ಇಳಿದು ಅದರಾಳದಾಳಕ್ಕೆ
ಎಲ್ಲವಾಗುತ್ತಲೇ ಇಲ್ಲವಾಗುವ
ತೆವಲು ಇನ್ನೊಂದು ಮುಖಕ್ಕೆ.

ಸಂತನಂತೆ ಹಿಮಾಲಯದೆತ್ತರಕ್ಕೆ
ಏರಿ ನಿಲ್ಲುವುದು ಸುಲಭ
ಎಲ್ಲ ಎಲ್ಲವೂ ಸಾಕೆನಿಸಿ
ಎಲ್ಲ ಕಿತ್ತೂಗೆದು, ಸುತ್ತ
ತಣ್ಣನೆಯ ಹಿಮದ ಆಲಯವನ್ನೆ
ಕಟ್ಟಿಕೊಳ್ಳುತ್ತಾ ಜೀವನ್ಮುಕ್ತನಾಗುವದೂ ಸಾಧ್ಯ

ಆದರೆ…
ಈ ನೆಲದ ಆರ್ದ್ರ ಹಸಿಮಣ್ಣಿನ ಹುಡಿಯಲ್ಲಿ
ಮೆಲ್ಲಗೆ ಬೆರೆತು
ಕಣಕಣದಲ್ಲೂ ಕಲೆತು
ಹದಗೊಳ್ಳುತ್ತಲೇ
ಮತ್ತೆ ಮತ್ತೆ ಬಿಡದೇ
ಕುಡೆಯೊಡೆಸುವ ತಾಕತ್ತು
ಆ ಶಾಖಕ್ಕೇ ಹಿಮಮಣಿಗಳ
ಕರಗಿಸಿ ನೀರಾಗಿಸಿ
ಬೊಗಸೆ ತುಂಬಿಕೊಳ್ಳುತ್ತಾ ಹೀರಿ
ನಿಧಾನಕ್ಕೆ ಹಸಿಮಣ್ಣೇ ಆಗುವ ರೀತಿ
ಜೀವಂತಿಕೆಗೇ
ಮುಖಾಮುಖಿಯಾಗುವ ಪ್ರೀತಿ
ಆಗಿಬಿಡುವುದು ಕಷ್ಟ – ಸಾಧ್ಯ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...