Home / ಕವನ / ಕವಿತೆ / ಶಾಂವಕ್ಕಿ ಕುಟ್ಟಂದ್ರ

ಶಾಂವಕ್ಕಿ ಕುಟ್ಟಂದ್ರ

ಶಾಂವಽಕ್ಕಿ ಕುಟ್ಟಂದ್ರ ಶರಽಗ್ಹಾಸಿ ಮಲಗ್ಯಾಳ|
ಎಬಸಣ್ಣ ನಿನ್ನ ಮಡದೀನ| ಸೂವಯ್ಯಾ ||೧||

ಮಡದೀನ ಎಬಸಿದರ ಅರಸನಿದ್ದಿ ನಾದಾನ|
ಎರಡೊಬ್ಬಿ ಮಾಡಿ ಥಳಸವ್ವಾ| ಸೂವಯ್ಯಾ ||೨||

ಎರಡೊಽಬ್ಬಿ ಮಾಡಿದರ ಕರಡಕ್ಕಿನಾದಾವ|
ಕರಡಕ್ಕಿ ಜ್ವಾಳ ನುರಿಯಽವ| ಸೂವಯ್ಯಾ ||೩||

ಕುಟ್ಟಿದರ ಕುಟ್ಟವ್ವಾ ಕಿಟಕೀಟ ಹಚಬ್ಯಾಡಾ|
ಬಂದ್ಹಾದಿ ಹಿಡಿದು ನಡಿ ತಂಗೀ| ಸೂವಯ್ಯಾ ||೪||

ಎತ್ತಾರೆ ತಾರಣ್ಣಾ ಮುಟ್ಟಾರೆ ಬಿಗಿಯಣ್ಣಾ|
ಹೊಂತೂಟ್ಲೆ ನನ್ನ ಖಳವಣ್ಣ| ಸೂವಯ್ಯಾ ||೫||

ಎತ್ತಽ ನಮ್ಮಲ್ಲಿಲ್ಲ ಮುಟ್ಟಽ ನಮ್ಮಲ್ಲಿಲ್ಲ|
ಬಂದಽ ದಾರಿ ಹಿಡಿದು ನಡಿ ತಂಗಿಽ| ಸೂವಯ್ಯಾ ||೬||

ತಂಗಿ ಹ್ವಾದ ಮರದೀನ ರಂಬೀಗಿ ಬ್ಯಾನಿ ಬಂದು|
ಮನಿಯಾನ ಮಕ್ಕಳಿಗಿ ಉರಿ ಛೆಳಿಯಽ| ಸೂವಯ್ಯಾ ||೭||

ಮನಿಯಾನ ಮಕ್ಕಳಿಗಿ ಉರಿ ಛೆಳೀ ಬಂದರ|
ದೇವಽರ ಕೇಳಾಕ ನಡದಾನಾಽ| ಸೂವಯ್ಯಾ ||೮||

ಕೇಳೂಸಿ ನೋಡಿದರ ದೇವರಿಲ್ಲ ದೀಡೆರಿಲ್ಲ|
ಮನಿಯಾನ ಹೆಣಮಗಳು ಉಸರಂದ| ಸೂವಯ್ಯಾ ||೯||

ಎತ್ತಾರೆ ತಗೊಂಡಾನಽ ಮುಟ್ಟಾರೆ ಬಿಗದಾನ|
ತಂಗ್ಹ್ವಾದ ದಾರಿ ಹಿಡಿದಾಽನ| ಸೂವಯ್ಯಾ ||೧೦||

ಎಂದಿಲ್ಲದಣ್ಣಯ್ಯಾ ಇಂದ್ಯಾಕ ಬಂದಾನ|
ಕುಂಡಽರ ಕೊಡರೆ ಮಣಿ ಚವಕಿ| ಸೂವಯ್ಯಾ ||೧೧||

ಕುಂಡಽರ ಬಂದಿಲ್ಲ ನಿಂದಽರ ಬಂದಿಲ್ಲ|
ಬರಬೇಕ ತಂಗಿ ಮದುವೀಗಿ| ಸೂವಯ್ಯಾ ||೧೨||

ಮಜ್ಜಿಗಿ ಮಾಡವರಿಲ್ಲ ಬೆಣ್ಣಿ ತೆಗೆಯುವರಿಲ್ಲ|
ಹ್ಯಾಂಗ ಬರಲೆಣ್ಣಾ ಮದವೀಗಿಽ| ಸೂವಯ್ಯಾ ||೧೩||

ಮಜ್ಜಿಗಿ ಮಾಡವರ ಕುಡತ ಬೆಣ್ಣಿ ತೆಗೆವರ ಕುಡತ|
ಬರಬೇಕ ತಂಗಿ ಮದವೀಗಿ| ಸೂವಯ್ಯಾ ||೧೪||

ಬ್ಯಾಸೀಗಿ ಬಿಸಲಣ್ಣ ಕೂಸೀನ ತಾಯಣ್ಣ|
ಹ್ಯಾಂಗ ಬರಲೆಣ್ಣ ಮದವೀಗಿಽ| ಸೂವಯ್ಯಾ ||೧೫||

ನಿನಗ ಪಲ್ಲಕಿ ಕುಡತ ಕೂಸಿಗಿ ಮೇಣೇ ಕುಡತ|
ಗಂಡಽಗ ಕುಡುತ ಮರಿಗುದರಿ| ಸೂವಯ್ಯಾ ||೧೬||

ಬಂದಽರ ಬರುವೇನೋ ಬಾಗಿಲ್ದಾಗ ನಿಂತೇನೊ|
ಬಾಲಾಗ ಧಾರಿ ಎರೆದೇನೋ| ಸೂವಯ್ಯಾ ||೧೭||

ಹತ್ತ ರೂಪಾಯಿ ಕೊಟ್ಟು ಸೀರೀಯ ತರಸೀದ|
ಉಟ್ಹೋಗ ತಂಗಿ ಜನದಾಗ| ಸೂವಯ್ಯಾ ||೧೮||

ಇಽವು ಸೀರಿ ಒಯ್ದು ಮಡದೀಗಿ ಉಡಸಣ್ಣಾ|
ಹಾಡ್ಯಾಳೊ ನಿನ್ನ ಹರಸ್ಯಾಳೋ| ಸೂವಯ್ಯಾ ||೧೯||

ಹಾಡಿಯಾಳೊ ನಿನ್ನಽ ಹರಸ್ಯಾಳೊ ನಾಲುರದಾಗ|
ಬಾ ಅಣ್ಣಽನಂದು ಕರದಾಳೋ| ಸೂವಯ್ಯಾ ||೨೦||

ಕಲ್ಲಬುರಗಿಗಿ ಹೋಗಿ ಕುಬ್ಬಽಸ ತಂದೀದ|
ತೊಟಗೋ ಬಾ ತಂಗಿ ಜನದಾಽಗಽ| ಸೂವಯ್ಯಾ ||೨೧||

ಅವು ಕುಬ್ಬಸನೊಯ್ದು ಮಡದೀಗಿ ತೊಡಿಸಣ್ಣ|
ಹಾಡ್ಯಾಳೊ ನಿನ್ನ ಹರಸ್ಯಾಳೋ| ಸೂವಯ್ಯಾ ||೨೨||

ಹಾಡಿಯಾಽಳ ನಿನ್ನ ಹರಸ್ಯಾಳ ನಾಲುರದಾಗ|
ಬಾರಣ್ಣನೆಂದು ಕರದಾಽಳಽ| ಸೂವಯ್ಯಾ ||೨೩||

ಪಂಡ್ರಾಪೂರಕ್ಹೋಗಿ ಕೂಕಮ ತಂದೀದ|
ಹಚಗೊ ಬಾ ತೆಂಗಿ ಸಬೆದಾಽಗಽ| ಸೂವಯ್ಯಾ ||೨೪||

ಅಽವು ಕೂಕುಮನೊಯ್ದು ಮಡದೀಗಿ ಹೆಚ್ಚಣ್ಣಾ|
ಹಾಡ್ಯಾಳೊ ನಿನ್ನ ಹೆರಸ್ಯಾಳೋ| ಸೂವಯ್ಯಾ ||೨೫||

ಹಾಡಿಯಾಽಳಽ ನಿನ್ನ ಹರಸ್ಯಾಳ ನಾಲುರದಾಗ|
ಬಾರಣ್ಣನೆಂದು ಕರದಾಳಽ| ಸೂವಯ್ಯಾ ||೨೬||

ನನ್ನಲ್ಲಿ ಹುಟ್ಟೀದಿ ನನ್ನಲ್ಲಿ ಬೆಳದೀದಿ|
ಇಟ್ಟ ಮಾತೆಲ್ಲಿ ಕಲತೆವ್ವಾಽ| ಸೂವಯ್ಯಾ ||೨೭||

ಅಡವ್ಯಾಗ ಹುಟ್ಟೀದ ಆಡವ್ಯಾಗ ಬೆಳದೀದ|
ಎಲಿಗೊಂದ ಮಾತ ಕಲತೀನಽ| ಸೂವಯ್ಯಾ ||೨೮||

ಹುಟ್ಟಿದ ಮಲ್ಲಿಗಿಗೀಡ ಹುಟ್ಟಿದಂಗ ಇರುದಿಲ್ಲ|
ದಿನಕೊಂದು ಪರಿಯ ಚಿಗವೂದಽ| ಸೂವಯ್ಯಾ ||೨೯||

ದಿನಽಕೊಂದು ಪರಿಯ ಚಿಗವೂ ಮಲ್ಲಿಗಿ ಹೊವ|
ಮತ್ತೊಬ್ಬ ಜಾಣ ಮುಡಿಯೋದಽ| ಸೂವಯ್ಯಾ ||೩೦||
*****
ಶಾಂವಕ್ಕಿ ಕುಟ್ಟಂದ್ರ

ಈ ಹಾಡಿನಲ್ಲಿ ನಾದುನಿಯು (ಗಂಡನ ತಂಗಿ) ಸೊಗಸಿನ ಸಂಸಾರಕ್ಕೆ ಹೇಗೆ ಮುಳುವಾಗುವಳೆಂಬುದು ತೋರಿಸಲ್ಪಟ್ಟಿದೆ. “ನಡಿಯುವ ಹೆಣ್ಣಿಗೆ ನಾದುನಿ ಮೂಲ” ಎಂಬ ಗಾದೆಯ ಮಾತಿಗೆ ಈ ಹಾಡು ತಕ್ಕ ದೃಷ್ಟಾಂತವಾಗಿದೆ. ಅವಳು ಅಣ್ಣನ ಅಂತಃಕರಣವನ್ನು ಹಿಂಡಿ ಹಿಪ್ಪೆಮಾಡಿ ಒಗೆತನ ಹರಿಸುವುದಕ್ಕೆ ಹೇಗೆ ಆಟ ಹೊಡುತ್ತಾಳೆಂಬುದನ್ನು ನಾವು ಇಲ್ಲಿ ಸ್ಪಷ್ಟವಾಗಿ ಕಂಡುಕೊಳ್ಳುವೆವು; ಈ ಹಾಡು ಒಂದು ಕಥೆಯಂತಿದೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದಪ್ರಯೋಗಗಳು:- ಶಾಂವಕ್ಕಿ=ಶಾಂವಿ ಎಂಬ ಒಂದು ತರದ ಧಾನ್ಯ. ಥಳಿಸು=ಅಕ್ಕೀ ಕುಟ್ಟು. ಕಿಟಕಿಟ=ಕರಕರೆ. ಹೊಂತೂಟ್ಲೆ-ಹೊತ್ತಿರುವುದರೊಳಗಾಗಿ (ಹೊತ್ತುಂಟಲೆ). ಇಟ್ಟು=ಇಷ್ಟು.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...