ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ
ರಥವೇರಿ ಬರುತ್ತಿದ್ದ ನೇಸರಗೆ
ಬೆಳ್ಳಕ್ಕಿ ಹಿಂಡಾಗ ಬರೆದಿತ್ತು ಸ್ವಾಗತವ
ಹಾರಾಡಿ ನೀಲಿ ಆಗಸದಾಗೆ
ಮೊಗ್ಗಾದ ಹೂವುಗಳು ಅರಳ್ಯಾವೊ ದಳ ತೆರೆದು
ಚೆಲ್ಲುತ್ತ ಕನ್ನಡದ ಕಸ್ತೂರಿಯ
ಉಣಿಸುತ್ತ ಕಂಪನ್ನು ಬಗೆಬಗೆಯ ಜೀವಕ್ಕೆ
ಸಾರೈತೊ ಈ ಮಣ್ಣಿನ ಮಹಿಮೆಯ
ಗಿರಿ ನವಿಲು ಕುಣಿದಿತ್ತು ಹಸಿರಾದ ಗರಿಬಿಚ್ಚಿ
ಕಾವೇರಿ ಹೊಳೆಯ ಅಂಚಿನಾಗ
ಕಂಡ ಕಣ್ ಸೆಳೆದಿತ್ತು; ಸೆರೆ ಹಿಡಿದು ಬಿಡದಿತ್ತು
ಕರ್ಣಾಟ ಸೀಮೆಯ ಗತ್ತಿನಾಗ
ಅಂಬಾ ಎನ್ನುರ ಗೋವು ಕಚ್ಚೆ ರುಮಾಲ ರೈತ
ಹೊಂಟಾರು ಚಿನ್ನದ ಮಣ್ಣ ಮ್ಯಾಗ
ಬೆವರ್ಹನಿ ಇಳಿಸುತ್ತ ಕೈಲಾಸ ತೋರ್ಯಾರೊ
ಸ್ವರ್ಗಾವೆ ಇಳಿದಂತ ಭೂಮ್ಯಾಗ
ಕಪ್ಪಾದ ತೆರೆ ಸರಿಸಿ ಬಂದ ಬೆಳಕಿನ ರಾಯ
ಕರುನಾಡ ಸೀಮೆಯ ಸಿರಿ ತೋರಿದ
ಇದ ಕಂಡು ಮನಸೋತು ಮೈದುಂಬಿದ ನನ್ನ
ಈ ಮಣ್ಣ ಹಾಡಿಂದ ಕವಿ ಮಾಡಿದ
*****