Home / ಕವನ / ಕವಿತೆ / ಯುಗಾದಿಯ ನೆನಪು

ಯುಗಾದಿಯ ನೆನಪು

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ
ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ!
ಇಂದೆನ್ನನೀಚಿಸುವ ವೀಚಿಯೂ ವಿಭವಂ
ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪

ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ-
ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ?
ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ-
ಹಬ್ಬಮಿನ್ನೆನಗೆ ನಿನ್ನೊಡಗೂಡುವಲ್ಲಿ! ೮

ಕೊನೆಯ ತವರ್ಮನೆಗಕಟ! ನೀ ತೆರಳುವಂದು
ತಿಂಗಳಾರರ ಮುನ್ನಮುಟ್ಟ ಮಡಿಸೀರೆ
ಕಡೆಗಾಯ್ತೆ? ಇನ್ನುಡೆಯನೆಂತೀವೆನೆಂದು
ನೆನವ ನೂಲಂ ಮೀಸಲಿಡುವೆನಿದೊ ನೀರೆ! ೧೨

ಸರ್ವಮಂಗಲೆ! ಸರ್ವಶೃಂಗಾರವೆತ್ತು-
ಕೆಚ್ಚೆರಂಕದಿನೆನ್ನ ಹಚ್ಚಿ ಕುಂಕುಮಮಂ,
ನೆನವ ಬಾಗಿನವನೆನಗನುವಿಂದ ತೆತ್ತು,
ಮುಡಿದು ಮುಡಿಗೆನ್ನ ಸುರಿಕಂಬನಿಯ ಸುಮಮಂ- ೧೬

ಮದವಳಿಗೆ ಲಗ್ನವೇದಿಕೆಯಂತೆ, ಚಿತಿಯ
ಪೊಗುತಗ್ನಿಯಂ ಮನ್ಮನೋರಣಿಯಿನಾಂತು,
ನಮ್ಮೇಕ ಗಾರ್ಹಪತ್ಯವ್ರತವ ಸತಿಯ
ಧರ್ಮದಿಂದುದ್ಯಾಪಿಸಿದೆ ನೀ ಸಮಂತು ೨೦

ನಿನ್ನಯ ಚಿತಾಗ್ನಿಯಾಗಳಿನೆದೆಯೊಳೆನ್ನ
ಬೇಯೆ ಬಾಂಗಿನೆಯೆ ಬೈಗಿನ ಬೆಂಕಿಯಂತೆ
ಮೂಡಿಂದುವಂತೆ! ಕರೆಯಕ್ಕರೆಯ ಜೊನ್ನ
ದುಮ್ಮನದ ಗುಮ್ಮನೆರಕೆಯಿಳುಂಕಿಪಂತೆ. ೨೪

ಕಂತಿದಿಂ ಬಳಿಕ ನೀ ನಿನ್ನೊಸಗೆಯರಿಯೆಂ,
ನೀನಾದಡಂ ಬಲ್ಲೆಯೇನಳಲನೆನ್ನ?-
ನನೆನಲಿನಮಂ ನಿಟ್ಟಿಪಂತಿರುಳ ಮರೆಯಿಂ
ನೇಸರೇನಿರುಳ ನಲಿನಂ ನೇಸರನ್ನ? ೨೮

ಕುಂದೇನು ಮನದನ್ನೆ ನೊಂದಡಾನಿಲ್ಲಿ?
ಮಗು ಮುಡಿದ ತೊಟ್ಟಿಲೇನಾದಡೇನಂತೆ?
ನೀರ ಕೆರೆ ತಾರದಂತರಗಾಲದಲ್ಲಿ,
ನೀನಲ್ಲಿ ನೆಮ್ಮದಿಯಿನಿರೆ ಸಾಕು, ಕಾಂತೆ! ೩೨

ಪತಿಗೆ ಹೆಂಡತಿ ಸಾಲಗಾತಿ ತಾನಂತೆ,
ನಮ್ಮೊಳಂತಲ್ಲ, ನಾ ಸಾಲಿಗನೆ ನಿನ್ನ-
ಕಣ್ಣ ಕಾಣಿಕೆಯಂತೆ ನನ್ನಿರವನಾಂತೆ,
ಪಾಲಾಗಿ ನೀರನಿನಿವಾಲೆಸಗಿದೆನ್ನ ೩೬

ಇದ್ದೆ ಸೆಯಿನಿದ್ದೊರೆಗಳೆದ್ದು ಮುಂಬೆರೆಯೆ,
ಒಂದನಿನ್ನೊಂದು ಮರೆಸಂದು ಹರಿವಂತೆ,
ಬಲ್ಲೆನೆನ್ನಯ ಕಂಗಣಂಗಿ ನೀ ಸರಿಯೆ,
ಬೆರತಿನ್ನುಮಿರವನ್ನ ಹರಿವೆ ಮುನ್ನಂತೆ. ೪೦

ಕಡಲೆನಿತು ಕೆರಳ್ದೊಡಂ, ಕಡೆವುದೇಂ ಕರೆಯಂ?-
ಆಯುರವಧಿಯನೆನ್ನ ನನ್ನಳವೆ ಮೀರೆ?
ಕಾವೆನಾಚೆಗೆ ನಿನ್ನ ತೇರಿಸಿದ ತರಿಯಂ,
ಗೆಣೆವಕ್ಕಿ ಹಗಲಂತೆ ತನ್ನೆಣೆಯ ಸೇರೆ. ೪೪

ಎನಿತಿನ್ನುಮೆನ್ನ ಬಾಳ್ವೆಯ ಹುಳುಕು ವಾಲೆ
ಮಗಚುವುದೊ ನಾನರಿಯೆ- ಬರೆದವನೆ ಬಲ್ಲಂ!
ಇನ್ನುಮಳ್ತಿಯೆ ನನ್ನನಿಂತು ವಿಧಿಯಾಲೆ
ಹಿಳಿಯಲೇವಾಳ್ತೆ? ಕಳಲಿಂದಹುದೆ ಬೆಲ್ಲಂ? ೪೮

ತಾಳದು ವಿಕಾಳಿಸುವ ಕಾಳಿಮೆ! ಇದನ್ನ
ತಾಳದಕಟಾ ನಿನ್ನ ಬಾಳೆನೆನೆ, ಮನವಂ
ಸೇರುವೆಗೆ ಕೋರಿಸಿ ಚಕೋರಿಸುವೆನೆನ್ನ
ಪ್ರೇಮಪರಿಧಿಯ ಸುಧಾನಿಧಿಯೆ ನಿನ್ನೆನವಂ! ೫೨
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...