Home / ಕವನ / ಕವಿತೆ / ಯುಗಾದಿಯ ನೆನಪು

ಯುಗಾದಿಯ ನೆನಪು

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ
ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ!
ಇಂದೆನ್ನನೀಚಿಸುವ ವೀಚಿಯೂ ವಿಭವಂ
ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪

ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ-
ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ?
ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ-
ಹಬ್ಬಮಿನ್ನೆನಗೆ ನಿನ್ನೊಡಗೂಡುವಲ್ಲಿ! ೮

ಕೊನೆಯ ತವರ್ಮನೆಗಕಟ! ನೀ ತೆರಳುವಂದು
ತಿಂಗಳಾರರ ಮುನ್ನಮುಟ್ಟ ಮಡಿಸೀರೆ
ಕಡೆಗಾಯ್ತೆ? ಇನ್ನುಡೆಯನೆಂತೀವೆನೆಂದು
ನೆನವ ನೂಲಂ ಮೀಸಲಿಡುವೆನಿದೊ ನೀರೆ! ೧೨

ಸರ್ವಮಂಗಲೆ! ಸರ್ವಶೃಂಗಾರವೆತ್ತು-
ಕೆಚ್ಚೆರಂಕದಿನೆನ್ನ ಹಚ್ಚಿ ಕುಂಕುಮಮಂ,
ನೆನವ ಬಾಗಿನವನೆನಗನುವಿಂದ ತೆತ್ತು,
ಮುಡಿದು ಮುಡಿಗೆನ್ನ ಸುರಿಕಂಬನಿಯ ಸುಮಮಂ- ೧೬

ಮದವಳಿಗೆ ಲಗ್ನವೇದಿಕೆಯಂತೆ, ಚಿತಿಯ
ಪೊಗುತಗ್ನಿಯಂ ಮನ್ಮನೋರಣಿಯಿನಾಂತು,
ನಮ್ಮೇಕ ಗಾರ್ಹಪತ್ಯವ್ರತವ ಸತಿಯ
ಧರ್ಮದಿಂದುದ್ಯಾಪಿಸಿದೆ ನೀ ಸಮಂತು ೨೦

ನಿನ್ನಯ ಚಿತಾಗ್ನಿಯಾಗಳಿನೆದೆಯೊಳೆನ್ನ
ಬೇಯೆ ಬಾಂಗಿನೆಯೆ ಬೈಗಿನ ಬೆಂಕಿಯಂತೆ
ಮೂಡಿಂದುವಂತೆ! ಕರೆಯಕ್ಕರೆಯ ಜೊನ್ನ
ದುಮ್ಮನದ ಗುಮ್ಮನೆರಕೆಯಿಳುಂಕಿಪಂತೆ. ೨೪

ಕಂತಿದಿಂ ಬಳಿಕ ನೀ ನಿನ್ನೊಸಗೆಯರಿಯೆಂ,
ನೀನಾದಡಂ ಬಲ್ಲೆಯೇನಳಲನೆನ್ನ?-
ನನೆನಲಿನಮಂ ನಿಟ್ಟಿಪಂತಿರುಳ ಮರೆಯಿಂ
ನೇಸರೇನಿರುಳ ನಲಿನಂ ನೇಸರನ್ನ? ೨೮

ಕುಂದೇನು ಮನದನ್ನೆ ನೊಂದಡಾನಿಲ್ಲಿ?
ಮಗು ಮುಡಿದ ತೊಟ್ಟಿಲೇನಾದಡೇನಂತೆ?
ನೀರ ಕೆರೆ ತಾರದಂತರಗಾಲದಲ್ಲಿ,
ನೀನಲ್ಲಿ ನೆಮ್ಮದಿಯಿನಿರೆ ಸಾಕು, ಕಾಂತೆ! ೩೨

ಪತಿಗೆ ಹೆಂಡತಿ ಸಾಲಗಾತಿ ತಾನಂತೆ,
ನಮ್ಮೊಳಂತಲ್ಲ, ನಾ ಸಾಲಿಗನೆ ನಿನ್ನ-
ಕಣ್ಣ ಕಾಣಿಕೆಯಂತೆ ನನ್ನಿರವನಾಂತೆ,
ಪಾಲಾಗಿ ನೀರನಿನಿವಾಲೆಸಗಿದೆನ್ನ ೩೬

ಇದ್ದೆ ಸೆಯಿನಿದ್ದೊರೆಗಳೆದ್ದು ಮುಂಬೆರೆಯೆ,
ಒಂದನಿನ್ನೊಂದು ಮರೆಸಂದು ಹರಿವಂತೆ,
ಬಲ್ಲೆನೆನ್ನಯ ಕಂಗಣಂಗಿ ನೀ ಸರಿಯೆ,
ಬೆರತಿನ್ನುಮಿರವನ್ನ ಹರಿವೆ ಮುನ್ನಂತೆ. ೪೦

ಕಡಲೆನಿತು ಕೆರಳ್ದೊಡಂ, ಕಡೆವುದೇಂ ಕರೆಯಂ?-
ಆಯುರವಧಿಯನೆನ್ನ ನನ್ನಳವೆ ಮೀರೆ?
ಕಾವೆನಾಚೆಗೆ ನಿನ್ನ ತೇರಿಸಿದ ತರಿಯಂ,
ಗೆಣೆವಕ್ಕಿ ಹಗಲಂತೆ ತನ್ನೆಣೆಯ ಸೇರೆ. ೪೪

ಎನಿತಿನ್ನುಮೆನ್ನ ಬಾಳ್ವೆಯ ಹುಳುಕು ವಾಲೆ
ಮಗಚುವುದೊ ನಾನರಿಯೆ- ಬರೆದವನೆ ಬಲ್ಲಂ!
ಇನ್ನುಮಳ್ತಿಯೆ ನನ್ನನಿಂತು ವಿಧಿಯಾಲೆ
ಹಿಳಿಯಲೇವಾಳ್ತೆ? ಕಳಲಿಂದಹುದೆ ಬೆಲ್ಲಂ? ೪೮

ತಾಳದು ವಿಕಾಳಿಸುವ ಕಾಳಿಮೆ! ಇದನ್ನ
ತಾಳದಕಟಾ ನಿನ್ನ ಬಾಳೆನೆನೆ, ಮನವಂ
ಸೇರುವೆಗೆ ಕೋರಿಸಿ ಚಕೋರಿಸುವೆನೆನ್ನ
ಪ್ರೇಮಪರಿಧಿಯ ಸುಧಾನಿಧಿಯೆ ನಿನ್ನೆನವಂ! ೫೨
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...