Home / ಕವನ / ಕವಿತೆ / ಹೊತ್ತಲ್ಲದ ಹೊತ್ತಲ್ಲಿ

ಹೊತ್ತಲ್ಲದ ಹೊತ್ತಲ್ಲಿ

ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?

ಹೊತ್ತು – ಗೊತ್ತು
ಒಂದೂ ಇಲ್ಲದೇ ಹೀಗೆ
ಸುರಿದು ಬಿಡುವುದೇ ಇಳೆಗೆ?

ನಡೆಯುತ್ತಾ ನಡೆಯುತ್ತಾ
ಅರ್ಧದಲ್ಲೇ ಥಟ್ಟನೆ
ಎಲ್ಲಾ ನಿಂತು
ಗಾಳಿ – ನೀರು – ಬೇರುಗಳೆಲ್ಲಾ
ಇಳೆಯೊಂದಿಗೇ
ಮೌನದಾಳದಲಿ ಹೂತಿರುವಾಗ
ಜೀವಂತಿಕೆ ಇಲ್ಲದೇ ಸೋತಿರುವಾಗ

ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?

ಬೇಕೋ – ಬೇಡವೋ
ಆಗಲೋ – ಈಗಲೋ
ಎಂದನುಮಾನಿಸುತ್ತಲೇ
ಮೆಲ್ಲಗೆ ಕದ ತೆರೆದು
ಮುಗ್ಧತೆಯಿಂದ ಮಳೆಯ ಕಥೆಗೆ
ಕಿವಿ ನೀಡಿದ್ದ ಇಳೆಗೆ
ಸದ್ದಿಲ್ಲದೇ ರಪರಪನೆ ಬಡಿದು
ತೊಯ್ದು ತೊಪ್ಪೆಯಾಗಿಸಿದ ಮಳೆಗೆ
ಮೀಸೆಯಂಚಿನಲ್ಲೇ ನಗು
ಇಳೆಯನ್ನರಳಿಸಿದ ಬೀಗು!

ಏನೂ ಆಗಿಯೇ ಇಲ್ಲವೆಂಬಂತೆ
ಮಳೆ ನೀರು ಕೊಡವಿ
ಮಿಂದು ಮಡಿಯುಟ್ಟ ಇಳೆ
ತನ್ನೆದೆಯಾಳದ ಮಾತಿಗೆ
ಜೀವ ಬಂದುದ ನೋಡಿ ಹಿಗ್ಗುತ್ತದೆ
ಹಮ್ಮಿನಲಿ ದೂರ ಸರಿದು ನಿಂತ
ಮಳೆಯ ತಬ್ಬಿ
ನೂರು ಹೊಸರಾಗಗಳ ಹಾಡುತ್ತದೆ
ಕಂಡೂ ಕಾಣದಂತೆ
ಗೆಲುವಿನ ನಗೆ ನಗುತ್ತದೆ!
ಇಳೆಯ ಮೈ ಮನದ ತುಂಬೆಲ್ಲಾ
ಈಗ ಚಿಗುರು ಹೂ – ಹಣ್ಣು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...