ಮನಸ ಜೈನರ ಮಡದಿ

ಮನಸ ಜೈನರ ಮಡದೆಽ ಬಾಽ
ಘನಮನಸಿನ ಗಂಬಿರಳಽ ಬಾಽ
ಘನಮನಸೆಂಬೊ ಗರತ್ಯಾರು ಮೆಚ್ಚಿ
ನೀಲಽ ಬಾಽಽ ನೀಲಽ ಸೀಲಽಽ ಬಾಽಽ
ಸೋಗಿನ ಗೊಂಬೆ ನೀ ಬಾರ ಹೆಸಿಯ ಜಗಽಽಲೀಗೇ ಸೋ ||೧||

ಅನಂದರಾಯರ ಇಗತೇ ಬಾ
ಆದಿಪುರುಷರ ಸತಿಯಳು ಬಾ
ಅದರ ಮ್ಯಾಲ ಪೂರ್ಮಾ ನೀರ್ಮ್ಯಾಲ ಗುರುಳಿ
ಜೂಜ ಬಾಽ ಬಾ ಬಾ ಮೇತ್ರಿ ಬಾಽಽ
ಪುನ್ಯಫಲ ಮೇತ್ರಿ ನೀ ಬಾರಽ ಹಸಿಯ ಜಗಽಽಲೀಗೇ ಸೋ ||೨||

ನಾಗೀಂದ್ರನರಗಲ್ಲವು ಬಾ
ಅರಗಲ್ಲದ ರೂಪವು ಬಾ
ಹೋಯಿತು ಸರ್ಪಾ
ಎಡದಲಿ ಕುಳಿತ
ಕಲ್ಪ ಬಾಽ ಬಾ ಬಾ ಫಣಿಯವು ಬಾ
ಸೋಗಿನ ಗೊಂಬೆ ನೀ ಬಾರ ಹಸಿಯ ಜಗಽಽಲೀಗೇ ಸೋ ||೩||

ಮಂದಗಮನೆ ಮೋವನ್ನೇ ಬಾ
ಗಂಧ ಕಸ್ತುರಿ ಪರಿಮಳ ಬಾ
ನನ್ನಾಣೆ ಬಾಽ ಕಟ್ಟಾಣೆ ಬಾ
ಧನ ಧನಿಯಳು ಬಾಽ
ಕೂಕಮದಾಗಿನ ಭರಣೆ ಬಾರೊಂದ್ಹ ಸೀ ಜಗಽಽಲೀಗೇ ಸೋ ||೪||

ಮಾಣಿಕದಾಗಿನ ಏಣವು ಬಾ
ಜೋಡಮುತ್ತಿನ ಜಾಣೇ ಬಾ
ಚಂದ್ರನ ಸೊಸಿಯೇ ಬಾ
ಇಂದ್ರನ ಸತಿಯಳು ಬಾ
ಭಂಗರದಾಗಿನೆ ಭರಣೆ ಬುರೊಂದ್ಹಸಿಯ ಜಗಽಽಲೀಗೆ ಸೋ ||೫||

ಮಂಗಳ ಮಹಿಮನ ರುಣೀ ಬಾ
ಶ್ರಿಂಗಾರದ ಮುದ್ದಾನೇ ಬಾ
ಕುಂಬಕುಚಗಳು ನಲನಲಿದಾಡುತ
ರಂಬೇ ಬಾ ದೇಶದ ಗೊಂಬೆ ಬಾ
ಅಂಗೈನಿಂಗ ನೀ ಬಾರಽ ಹೆಸಿಯ ಜಗಽಽಲೀಗೇ ಸೋ ||೬||
*****

ಸೋಬಾನದ ಹಾಡುಗಳು

ಮಾನವದೇಹದಲ್ಲಿ ಪೂರ್ಣಸೌಂದರ್ಯವು ಪ್ರಕಟವಾಗುವ ಕಾಲಗಳು ಎರಡು. ಒಮ್ಮೆ ಎಳಗೂಸಿದ್ದಾಗ, ಇನ್ನೊಮ್ಮೆ ಪ್ರಾಯವೇರುವಾಗ. ಯೌವನದ ಬೆಡೆಗು ಶೃಂಗಾರರಸಕ್ಕೆ ಉದ್ದೀಪಕ. ಹೆಣ್ಣಿನ ಶೃಂಗಾರವನ್ನು ಹೆಣ್ಣುಮಕ್ಕಳೇ ಬಣ್ಣಿಸಿದ್ದು ಸೋಬಾನದ ಹಾಡುಗಳಲ್ಲಿ ನೋಡಲಿಕ್ಕೆ ಸಿಗುವಂತಿದೆ. ಶೃಂಗಾರವನ್ನು “ನೈಸರ್ಗಿಕವಾಗಿ ಲಜ್ಜಾಶೀಲರಾದ ನಾರಿಯರು ವರ್ಣಿಸಿದ ರೀತಿಗೂ ಸ್ವಚಂದತೆಗಾಸ್ಪದವಿರುವ್ ಪುರುಷರು ವರ್ಣಿಸಿದ ರೀತಿಗೂ ಮಹದಂತರವಿರುತ್ತದೆ. ಲಾವಣಿಯೊಳಗಿನ ಶೃಂಗಾರಕ್ಕೂ ಸೋಬಾನದ ಹಾಡುಗಳೊಳಗಿನ ಶೃಂಗಾರಕ್ಕೂ ಸರಿಹಚ್ಚಿ ನೋಡಿದರೆ ನಮ್ಮ ಈ ಅಭಿಪ್ರಾಯವು ಸ್ಪಷ್ಟವಾಗುವುದು. ಕವಿಚರಿತ್ರೆಯಲ್ಲಿ ಬಂದ ಕುಮಾರವ್ಯಾಸನ ದ್ರೌಪದಿಯ ಚೆಲುವಿಕೆಯ ವರ್ಣನೆಗೂ ರಾಜಶೇಖರವಿಳಾಸ ಮುಂತಾದ ಕಾವ್ಯಗಳೊಳಗಿನ ವೇಶ್ಯೆಯರ ವರ್ಣನೆಗೂ ಇರುವ ವ್ಯತ್ಯಾಸವನ್ನು ಲಕ್ಷ್ಯಕ್ಕೆ ತಂದುಕೊಂಡರೆ ಮೇಲ್ಕಂಡ ನಮ್ಮ ಮಾತಿನ ಭಾವವು ಇನ್ನಿಷ್ಟು ಸ್ಫುಟವಾಗುವುದು.

ಹೆಣ್ಣುಮಕ್ಕಳು ವರ್ಣಿಸಿದ ಶೃಂಗಾರದಲ್ಲಿ ಒಂದು ಸಹೆಜವಾದ ಜೋಕೆಯಿದೆ. ಗಂಡಸರ ಹಾಡುಗಳಲ್ಲಿ ರೂಪವರ್ಣನೆಯು ಮೂರು ವಿಧದಲ್ಲಿ ಮಾಡಲ್ಪಟ್ಟಿದೆ. “ಮನಸ ಜೈನರ ಮಡದಿ” ಎಂಬ ಈ ಹಾಡಿನಲ್ಲಿ ಇಡೀ ಯೌವನಕ್ಕೆ ಸಂಬಂಧವಾಗುವ ಉಪಮೆಗಳಿವೆ. ಇದು ಒಂದು ವಿಧ. “ಹಿಂಬಳಿ ಮುಂಬಳಿ” ಮತ್ತು “ರನ್ನದುಡುಗುಣಿ” ಎಂಬೆರಡು ಹಾಡುಗಳಲ್ಲಿ ಮೈ ಮೇಲಿನ ಅಲಂಕಾರಗಳ ವರ್ಣನೆಯಿಂದ ಶೃಂಗಾರಕ್ಕೆ ಬಣ್ಣ ಕೊಡಲು ಯತ್ನಿಸಲಾಗಿದೆ. ಇದು ಎರಡನೆಯ ವಿಧ. ಇನ್ನು “ಹಸುಮಗಳಽ ನೀಲಮ್ಮ” ಮತ್ತು “ಹಣಿ ಎಂಬು ಭಾಂವಕ” ಎಂಬೆರಡು ಹಾಡುಗಳಲ್ಲಿ “ಅಕ್ಕ ಭಾವಽಗ ವರನಂದ” “ನಾರೀಗಿ ತಮಗ ವರನಂದ” ಮುಂತಾದ ಮಾತುಗಳಿಂದ ಪರ್ಯಾಯದಿಂದ ರೂಪವನ್ನು ವರ್ಣಿಸಿದಂತಿದೆ. ಇದು ಮೂರನೆಯ ವಿಧ.

“ಬಾಲಿ ತಾ ಮೈನೆರದು” ಎಂಬ ಹಾಡಿನ ಮೊದಲಿನ ನಾಲ್ಕು ನುಡಿಗಳಲ್ಲಿ ಖುತುಸಮಯದ ತಾತ್ಕಾಲಿಕ ಮುಖಲಕ್ಷಣ ಮುಂತಾದವುಗಳ ಸೊಗಸಾದ ವರ್ಣನೆಯಿದೆ. ಇದು ನಾಲ್ಕನೆಯ ವಿಧವೆಂದು ಹೇಳಬಹುದು.

“ಮನಸ ಜೈನರ ಮಡದಿ”

ಈ ಹಾಡಿನಲ್ಲಿ ಮೊದಲಿನಿಂದ ಕೊನೆಯವರೆಗೆ ಒಂದೇ ಸಂದರ್ಭದ ವರ್ಣನೆಯಿರುವುದರಿಂದ ತಿಳಿದುಕೊಳ್ಳಲಿಕ್ಕೆ ನಡುವೆ ಎಲ್ಲಿಯೂ ತೊಂದರೆ ಬರುವಂತಿಲ್ಲ.

ಛಂದಸ್ಸು:- ಮಂದಾನಿಲರಗಳೆಗೆ ಸಮೀಪವಾಗಿದೆ.

ಶಬ್ದ ಪ್ರಯೋಗಗಳು:- ಮನಸ ಜೈನರು=ಹಿಂದಕ್ಕೆ ಬಹಳ ಘನವಂತಿಕೆಯಿದ್ದ ಒಂದು ಜಾತಿ. ಗಂಬಿರಳ=ಗಂಭೀರಳು. ಸೋಗಿನ=ವಯ್ಯಾರದ. ಇಗತಿ=ಯುಕ್ತಿ ಯುಳ್ಳವಳು. ಜೂಜ=ಪಂಥಗಾರ್ತಿ. ಹಸಿಯ ಜಗಲಿ=ಲಗ್ನ ಫಲಶೋಭನಗಳ ಪೀಠ. ನಾಗೀಂದ್ರನ ಅರಗಲ್ಲ=ಹಾವಿನ ಹೆಡೆಯೊಳಗಿನ ಮಣಿ. ಅರಗಲ್ಲು=ಅರಸುಗಲ್ಲು (ರತ್ನ). ಕಲ್ಪ=ತಲ್ಪ(?) ಮಾಣಿಕದಾಗಿನ ಏಣ, ಭಂಗರದಾಗಿನ ಭರಣೆ=ಮಾಣಿಕದ ಏಣು, ಭಂಗಾರದ ಭರಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತ ಕಮ್ಮಿಯಿಲ್ಲ
Next post ಹಣತೆ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…