ಸಾವಲ್ಲದ ಸಾವು!


ಇದ್ದರೂ ಸತ್ತಂತ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು-
ಮಾಡಿಕೊಂಡವರು ಹಲರು!

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ಸಿದ್ದಿ ತುಂಬಿದರಾರು, ನಿನ್ನವೊಲು ಗಾಂಧೀಜಿ
ಸಾವಿರದ ಶೂರರಾರು?


ನೀನು ಮಾನವನೇನು? ಮರುಳಿದು
ಮಾನವನು ನೀನೆಂಬುದು ;
ಮಾನವತಯಾದರ್ಶವೇ ಮೈ-
ಗೊಳುತ ಬಂದಿಲ್ಲಿರ್ದ್ದುದು

ಕುದಿವ ಮಾನವಲೋಕವನು ಕಂ-
ಡದನು ತಣಿಸಲು ಪ್ರಕೃತಿಯು,
ಹದದಿ ನಿನ್ನನು ರೂಪಿಸುತ ಕಳು-
ಹಿದುದು ನಮ್ಮಯ ಸುಕೃತಿಯು!

ಪಂಚಭೂತಶರೀರಿಯೇ ನೀ
ಪಂಚಭಾವಶರೀರ!
ಕರುಣೆ ಮೈತ್ರಿಯು ಹರುಷ ನಿರ್ಭಯ
ಶಾಂತಿಗಳ ಸಾಕಾರ!


ಹೂವಿನರಳುವ ಗುಣವೆ ನಿನ್ನ ನಗೆಯಾಯ್ತೊ,
ಜೇನ ಸವಿ ನಿನಗೆ ಮೆಲುಮಾತನೊದವಿಸಿತೊ!
ಆಗಸದ ಕೇಂದ್ರವೇ ಎದೆಯು ನಿನಗಾಯ್ತೊ,
ಸಾಗರದ ಆಳ ಗಾಂಭೀರ್ಯ ಹವಣಿಸಿತೋ!


ನಿನ್ನ ಕಣ್ಗೆ ರವಿಯ ಪ್ರಭೆಯು ಹಿಂಗದ ಬೆಳಕೂಡಿತೊ!
ನಿನ್ನ ಭಾವಗಳಲಿ ಅಮರಗಣವು ಅಮೃತ ನೀಡಿತೊ!
ನೀನು ನುಡಿದುದೆಲ್ಲ ಋಷಿಯ ದಿವ್ಯಕಾವ್ಯವಾಯಿತೊ,
ನೀನು ನಡೆದುದೆಲ್ಲ ಜನಕೆ ಬಾಳ ತಿರುಳ ತಿಳುಹಿತೊ!


ನೂರಾರು ವರ್ಷಗಳ ಪಾರತಂತ್ರದಿ ಸಿಲುಕಿ-
ಭಾರತೀಯರು ಬಾಯಿ ಬಾಯಿ ಬಿಡುತಿರುವಾಗ
ಪಾರುಗಾಣಿಸಲೆಂದು ಹೋರಾಡಿದರು ಹಲರು !
ದೊರೆಯಲಿಲ್ಲಾರಿಗಾ ಕೀರ್ತಿ;

ನಿಜವು ನೀ ನಿಜ ಯಶೋಮೂರ್ತಿ !
ದಾರಿಯರಿತವ ನೀನು ತೋರಿ ಅವರಿಗೆ ಯುಕ್ತಿ
ಹೂಡಿದೆಯೊ ಗೆಲುವ ಶಕ್ತಿ…
ಮಾಡಿದೆಯೊ ಬಂಧಮುಕ್ತಿ!


ನಿನ್ನ ಮಾತೇ ಮಾತು ತುಂಬಿದೆ
ದಿಕ್ಕು-ದಿಕ್ಕುಗಳಲ್ಲಿ….
ನಿನ್ನ ರೂಪವೆ ನೆಲಸಿ ನಿಂತಿದೆ
ಜಗದ ಜನಮನದಲ್ಲಿ !

ನಿನ್ನ ಉನ್ನತ ಭಾವ ಹರಡಿದೆ
ಗಾಳಿಯಲೆಯಲೆಯಲ್ಲಿ….
ನಿನ್ನ ಕೀರ್ತಿಯ ಕಳಸ ಸಾರಿದೆ
ಬಾನತುತ್ತುದಿಯಲ್ಲಿ !

ಎಲ್ಲೆಡೆಯು ಗಾಂಧೀಜಿಯಾಗಿರೆ
ನಿನಗೆ ಕೊನೆಯಿನ್ನೆಲ್ಲಿ ?
ನಿನ್ನ ನೊಯ್ಯುವ ಬಲವು ಎಲ್ಲಿದೆ
ಮೃತ್ಯುವಿನ ಮೈಯಲ್ಲಿ ?


ಶಕ್ತಿಯಿಲ್ಲದ ಮೃತ್ಯು ಯುಕ್ತಿಯೇನನೊ ಹೂಡಿ,
ತನ್ನ ಬಲೆಯೊಳು ಬಿಗಿದು ನಿನ್ನ ಕಟ್ಟಿಹೆನೆಂದು
ಹುಸಿಬಿಂಕದಲ್ಲಿಹುದು,
ಹುರುಪಿನಲ್ಲಿಹುದು….
ಹುಸಿಬಿಂಕದಲ್ಲಿಹುದು, ಹುರುಪಿನಲ್ಲಿಹುದು-
ವ್ಯಕ್ತಿಗಿರುವುದು ಸಾವು, ಶಕ್ತಿಗೆಲ್ಲಿಹುದು ?
ಗಾಂಧೀಜಿಯನು ಕೊಂದೆನೆಂದು ಸಾರುವ ಸಾವು,
ಲೌಕಿಕರ ಹೃದಯದಲಿ ಕೆರಳಿಸಿದ ನೋವು!


ವ್ಯಕ್ತಿಯೇನೊ ಸಾಯಬಹುದು
ಶಕ್ತಿಗೆಲ್ಲಿ ಸಾವು ?
ಗರುಡನನ್ನು ಕೆಣಕಿ ಮಾಡ-
ಬಲ್ಲದೇನು ಹಾವು ?

ಗಾಂಧಿಯವರ ಮರೆಮಾಡಿದ
ಸಾವಲ್ಲದ ಸಾವು….
ಮೃತ್ಯುವಿಗಿತ್ತಿಹುದು ಟೊಳ್ಳು
ಅಮರತ್ವದ ಠಾವು!


ಇದ್ದರೂ ಸತ್ತಂತೆ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವ
ಮಾಡಿಕೊಂಡವರು ಹಲರು.

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ತಿದ್ದಿ ನಡೆಸಿದರಾರು ನಿನ್ನವೊಲು ಬಾಪೂಜಿ,
ಸಾವಿರದ ಶೂರರಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಳೆಯ ವ್ಯಾಸ
Next post ದಮಯಂತಿ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys