Home / ಕವನ / ಕವಿತೆ / ಸಾವಲ್ಲದ ಸಾವು!

ಸಾವಲ್ಲದ ಸಾವು!


ಇದ್ದರೂ ಸತ್ತಂತ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು-
ಮಾಡಿಕೊಂಡವರು ಹಲರು!

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ಸಿದ್ದಿ ತುಂಬಿದರಾರು, ನಿನ್ನವೊಲು ಗಾಂಧೀಜಿ
ಸಾವಿರದ ಶೂರರಾರು?


ನೀನು ಮಾನವನೇನು? ಮರುಳಿದು
ಮಾನವನು ನೀನೆಂಬುದು ;
ಮಾನವತಯಾದರ್ಶವೇ ಮೈ-
ಗೊಳುತ ಬಂದಿಲ್ಲಿರ್ದ್ದುದು

ಕುದಿವ ಮಾನವಲೋಕವನು ಕಂ-
ಡದನು ತಣಿಸಲು ಪ್ರಕೃತಿಯು,
ಹದದಿ ನಿನ್ನನು ರೂಪಿಸುತ ಕಳು-
ಹಿದುದು ನಮ್ಮಯ ಸುಕೃತಿಯು!

ಪಂಚಭೂತಶರೀರಿಯೇ ನೀ
ಪಂಚಭಾವಶರೀರ!
ಕರುಣೆ ಮೈತ್ರಿಯು ಹರುಷ ನಿರ್ಭಯ
ಶಾಂತಿಗಳ ಸಾಕಾರ!


ಹೂವಿನರಳುವ ಗುಣವೆ ನಿನ್ನ ನಗೆಯಾಯ್ತೊ,
ಜೇನ ಸವಿ ನಿನಗೆ ಮೆಲುಮಾತನೊದವಿಸಿತೊ!
ಆಗಸದ ಕೇಂದ್ರವೇ ಎದೆಯು ನಿನಗಾಯ್ತೊ,
ಸಾಗರದ ಆಳ ಗಾಂಭೀರ್ಯ ಹವಣಿಸಿತೋ!


ನಿನ್ನ ಕಣ್ಗೆ ರವಿಯ ಪ್ರಭೆಯು ಹಿಂಗದ ಬೆಳಕೂಡಿತೊ!
ನಿನ್ನ ಭಾವಗಳಲಿ ಅಮರಗಣವು ಅಮೃತ ನೀಡಿತೊ!
ನೀನು ನುಡಿದುದೆಲ್ಲ ಋಷಿಯ ದಿವ್ಯಕಾವ್ಯವಾಯಿತೊ,
ನೀನು ನಡೆದುದೆಲ್ಲ ಜನಕೆ ಬಾಳ ತಿರುಳ ತಿಳುಹಿತೊ!


ನೂರಾರು ವರ್ಷಗಳ ಪಾರತಂತ್ರದಿ ಸಿಲುಕಿ-
ಭಾರತೀಯರು ಬಾಯಿ ಬಾಯಿ ಬಿಡುತಿರುವಾಗ
ಪಾರುಗಾಣಿಸಲೆಂದು ಹೋರಾಡಿದರು ಹಲರು !
ದೊರೆಯಲಿಲ್ಲಾರಿಗಾ ಕೀರ್ತಿ;

ನಿಜವು ನೀ ನಿಜ ಯಶೋಮೂರ್ತಿ !
ದಾರಿಯರಿತವ ನೀನು ತೋರಿ ಅವರಿಗೆ ಯುಕ್ತಿ
ಹೂಡಿದೆಯೊ ಗೆಲುವ ಶಕ್ತಿ…
ಮಾಡಿದೆಯೊ ಬಂಧಮುಕ್ತಿ!


ನಿನ್ನ ಮಾತೇ ಮಾತು ತುಂಬಿದೆ
ದಿಕ್ಕು-ದಿಕ್ಕುಗಳಲ್ಲಿ….
ನಿನ್ನ ರೂಪವೆ ನೆಲಸಿ ನಿಂತಿದೆ
ಜಗದ ಜನಮನದಲ್ಲಿ !

ನಿನ್ನ ಉನ್ನತ ಭಾವ ಹರಡಿದೆ
ಗಾಳಿಯಲೆಯಲೆಯಲ್ಲಿ….
ನಿನ್ನ ಕೀರ್ತಿಯ ಕಳಸ ಸಾರಿದೆ
ಬಾನತುತ್ತುದಿಯಲ್ಲಿ !

ಎಲ್ಲೆಡೆಯು ಗಾಂಧೀಜಿಯಾಗಿರೆ
ನಿನಗೆ ಕೊನೆಯಿನ್ನೆಲ್ಲಿ ?
ನಿನ್ನ ನೊಯ್ಯುವ ಬಲವು ಎಲ್ಲಿದೆ
ಮೃತ್ಯುವಿನ ಮೈಯಲ್ಲಿ ?


ಶಕ್ತಿಯಿಲ್ಲದ ಮೃತ್ಯು ಯುಕ್ತಿಯೇನನೊ ಹೂಡಿ,
ತನ್ನ ಬಲೆಯೊಳು ಬಿಗಿದು ನಿನ್ನ ಕಟ್ಟಿಹೆನೆಂದು
ಹುಸಿಬಿಂಕದಲ್ಲಿಹುದು,
ಹುರುಪಿನಲ್ಲಿಹುದು….
ಹುಸಿಬಿಂಕದಲ್ಲಿಹುದು, ಹುರುಪಿನಲ್ಲಿಹುದು-
ವ್ಯಕ್ತಿಗಿರುವುದು ಸಾವು, ಶಕ್ತಿಗೆಲ್ಲಿಹುದು ?
ಗಾಂಧೀಜಿಯನು ಕೊಂದೆನೆಂದು ಸಾರುವ ಸಾವು,
ಲೌಕಿಕರ ಹೃದಯದಲಿ ಕೆರಳಿಸಿದ ನೋವು!


ವ್ಯಕ್ತಿಯೇನೊ ಸಾಯಬಹುದು
ಶಕ್ತಿಗೆಲ್ಲಿ ಸಾವು ?
ಗರುಡನನ್ನು ಕೆಣಕಿ ಮಾಡ-
ಬಲ್ಲದೇನು ಹಾವು ?

ಗಾಂಧಿಯವರ ಮರೆಮಾಡಿದ
ಸಾವಲ್ಲದ ಸಾವು….
ಮೃತ್ಯುವಿಗಿತ್ತಿಹುದು ಟೊಳ್ಳು
ಅಮರತ್ವದ ಠಾವು!


ಇದ್ದರೂ ಸತ್ತಂತೆ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವ
ಮಾಡಿಕೊಂಡವರು ಹಲರು.

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ತಿದ್ದಿ ನಡೆಸಿದರಾರು ನಿನ್ನವೊಲು ಬಾಪೂಜಿ,
ಸಾವಿರದ ಶೂರರಾರು?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...