Home / ಕವನ / ಕವಿತೆ / ಅಘನಾಶಿನಿ

ಅಘನಾಶಿನಿ

ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ
ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ
ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ
ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ
ಆ ಜೀವದ ಮೂಲ ಚೈತನ್ಯದ ನಾಡಿ ಮಿಡಿತಕ್ಕೆ
ಇಲ್ಲಿ ಅಂಬಿಗರು ಹಾಕುವ ಹುಟ್ಟು ಆ ಹುಟ್ಟು
ಚಿಮ್ಮಿಸುವ ನೀರಿನ ಕಣಗಳ ಕುಣಿತ ಆಟಕ್ಕೆ
ಮೌನದಲ್ಲಿ ಭೋರ್ಗರೆಯುವ ಇಲ್ಲಿಯ ಅಲೆಗಳ ಕಲ್ಲುಬಡಿತಕ್ಕೆ
ಭರತಕ್ಕೆ ಇಳಿತಕ್ಕೆ
ನನ್ನ ಭಾವನೆಗಳನ್ನು ಕವಿತೆಗಳನ್ನು ಅಕ್ಷರ ಶಬ್ದಗಳನ್ನು
ಒಪ್ಪಿಸುವೆ ಪ್ರಿಯ ಅಘವಾಶಿನಿ

ಈ ನದಿಯನ್ನು ದಾಟಿ ಯಾರಾರೋ ಬರುವರು
ಅವರು ತಂದಿದ್ದರೆ ಸೈಕಲ್ಲನ್ನು
ಅಂಬಿಗರು ದಡಕ್ಕೆ ಹೊತ್ತು ತರುವರು ದೋಣಿ
ಅಲ್ಲಿಂದ ಇಲ್ಲಿಗೂ ಇಲ್ಲಿಂದ ಅಲ್ಲಿಗೂ
ಹೋಗುತ್ತಲಿರುವುದು

ಗಾಳಿ ಮಳೆಗೆ ಹಾಯಿ ಬಿಚ್ಚಿಕೊಳ್ಳುವುದು
ಅದರ ಸಹಸ್ರ ತೂತುಗಳಲ್ಲಿ ನನ್ನವರ ಬಡತನ
ನಿನ್ನ ಒಡಲಾಳದಲ್ಲಿ
ಯಾವಾವ ಜಾತಿಯ ಮೀನುಗಳು ಹುದುಗಿವೆ
ಇವರ ನಿರಕ್ಷರತೆ ದಾರಿದ್ರ್ಯ ಹಸಿವು ಸರಳ
ಹಾಗೂ ಕಠಿಣ
ಸರಾಯಿ ಘಮ್ಮೆಂದು ಮೂಗಿಗೆ ಬಡಿಯುವ ಬದುಕು
ಯಾವ ಕೈಯಲ್ಲಿ ಬರೆದೆ
ಇವರನ್ನು ದಡದಲ್ಲಿ ಕುಳ್ಳಿರಿಸಿ
ನೀನು ಯಾವಾವ ಲೋಕಕ್ಕೆ ನಡೆವೆ ನಿನ್ನ
ಗುಟ್ಟು ಬಗೆಯಲು ಕಾತರಿಸಿರುವೆ
ಉಪ್ಪು ನೀರಿನ ಒಳಗೂ ಸಿಹಿ
ತುಂಬಿ ತುಳುಕುವುದು ತದಡಿಯ ದಡಕ್ಕೊತ್ತಿ ನಿಂತ
ಲಾಂಚುಗಳು ರಾತ್ರಿಯ ಬೆಳಕಲ್ಲಿ
ದೋಣಿಗಳ ಕಂಡು ನಗಲಾರಂಭಿಸಿವೆ ತಾರೆಗಳು
ನೀರಲ್ಲಿ ಮುಖ ನೋಡಿ ರಾತ್ರಿಯ ಆಟಕ್ಕೆ
ಸಜ್ಜಾಗಿವೆ ತೇಲಿ ತೇಲಿ ಬರುತ್ತಿವೆ ನೆನಪುಗಳು
ಅಘನಾಶಿನಿ ಎಂದಾದರೊಂದು ದಿನ
ಈ ಕವಿತೆ ಪೂರ್ತಿ ಮಾಡುವೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...