Home / ಕವನ / ಕವಿತೆ / ಉತ್ತಮ ರಾಜ್ಯ

ಉತ್ತಮ ರಾಜ್ಯ

“ಕಂದ, ಕೇಳುತ್ತಮದ ರಾಜ್ಯ ಒಂದಿಹುದು:
ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;”
ಎಂದು ನೀನಾಡುವಾ ರಾಜ್ಯವೆಲ್ಲಿಹುದು?
ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ!

“ಕಿತ್ತಳೆಯ ಮರಗಳಲಿ ಹೂಗಳರಳುತ್ತ
ಎತ್ತಲೂ ಮಿಂಚುಹುಳು ಚಿಮ್ಮಿ ಕುಣಿಯುತ್ತ,
ಮುತ್ತಿಕೊಂಡಿಹ ದೇಶದೊಳಗಿಹುದೆ ತಾಯೆ!”
“ಅತ್ತಲಿಲ್ಲಾ ರಾಜ್ಯ, ಅತ್ತಲಿಲ್ಲಣುಗಾ!”

“ತಾಳೆಗಳು ಬೆಳೆದು, ಖರ್‍ಜೂರದಲಿ ಹಣ್ಣು
ಜೋಲುತಿಹ ಬಿಸಿಲ ಸೀಮೆಯಲಿ ನೆಲಸಿಹುದೇ?
ಆಲಿಗಳಿಗಚ್ಚ ಹಸುರಾಗಿ ಸೊಗಸುತ್ತಾ
ಸಾಲು ಸಾಲಾಗೆಸೆದು ಸಾಗರದ ನಡುವೆ?-

“ಹಳುವಗಳ ಪರಿಮಳವ ಗಾಳಿಗೊಪ್ಪಿಸುತ್ತಾ,
ಹಲವು ಬಣ್ಣದ ಗರಿಯ ಪಕ್ಷಿ ಸಂಕುಲದಿ
ತೊಳಗುವಾ ದ್ವೀಪಂಗಳಲ್ಲಿಹುದೆ? ತಾಯೆ!”
“ಎಲೆ ಮಗುವೆ! ಕೇಳ್, ಅತ್ತಲಿಲ್ಲತ್ತಲಿಲ್ಲ.”

“ಹೊಳೆವ ಹೊನ್ನಿನ ಮರಳ ಮೇಲೆ ಹೊಳೆ ಹರಿವ,
ತೊಳಗುತಿಹ ಕೆಂಪುಗಳ ಕೆಂಬೆಳಗನುಗುಳ್ವ,
ತಳಿತಳಿಪ ವಜ್ರಗಳ ಗಣಿಗಳಿಂದೆಸೆವ
ತಿಳಿಮುತ್ತುಗಳ ನಗೆಯ ಬೆಳಕಿಂದ ಹೊಳೆವ-

“ಜಲದೊಳಗೆ ನೆಲೆಗೊಂಡ ಹವಳಗಳ ಕೆಳಗೆ
ತಳಿರ ಬಣ್ಣವ ತಳೆದ ಸಾಗರದ ನಡುವೆ
ಹೊಳೆವ ದ್ವೀಪಂಗಳಲಿ ನೆಲಸಿಹುದೆ? ತಾಯೆ!”
“ಎಲೆ ಮಗುವೆ! ಕೇಳತ್ತಲಿಲ್ಲತ್ತಲಿಲ್ಲ.

“ಅದರ ಸೊಗಸಿನ ಸಿರಿಯ ಕಣ್ಣು ಕಂಡಿಲ್ಲ.
ಅದರ ಗಾನದ ಸವಿಯ ಕಿವಿಯು ಕೇಳಿಲ್ಲ.
ಅದರಂದವನು ಕನಸು ಕಂಡರಿದುದಿಲ್ಲ.
ಅದರ ನೆಲೆಯನು ಸಾವು ನೋವರಿದುದಿಲ್ಲ.

“ಎಂದೆಂದುಮಾ ಪರಮರಾಜ್ಯ ವಿಭವಗಳು.
ಕುಂದುಕೊರತೆಗೆ ಸಿಲುಕದೊಂದೆ ತೆರವಿಹವು.
ಕಂದ! ಕೇಳದು ಸಾವಿನಿಂದತ್ತಲತ್ತ
ನಿಂದು ತಾನನಿಗಾಲ ಎಸೆದೊಪ್ಪುತ್ತಿಹುದು.”
*****
(ಕವಿಶಿಷ್ಯ)

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...