ಮನಸ್ಸಿದು ಅಸ್ತವ್ಯಸ್ತ ಯಾಕೆ?

ಮನಸ್ಸಿದು ಅಸ್ತವ್ಯಸ್ತ ಯಾಕೆ?

ಕೆಲವು ದಿನಗಳ ಹಿಂದೆ ಪೇಪರಿನಲ್ಲಿ ಬಂದ ಒಂದು ವರದಿ ನೋಡಿ ಮನಸ್ಸಿಗೆ ಬಹಳ ಖೇದವಾಯಿತು. ಹದಿಹರೆಯದ ಮಕ್ಕಳಿಬ್ಬರು ಟಿ.ವಿ. ನೋಡುವಾಗ ತಮ್ಮ ಆಯ್ಕೆಯ ಚಾನೆಲ್‌ಗಾಗಿ ಯಾವಾಗಲೂ ಜಗಳಾಡುತಿದ್ದುದ್ದನ್ನು ನೋಡಿ, ನೋಡಿ ಬೇಸತ್ತಿದ್ದ ತಾಯಿ ಅವರಿಬ್ಬರಿಗೂ ಬೈದು ಟಿ.ವಿ. ಆಫ್ ಮಾಡಿ ಯಾವುದೋ ಕಾರ್ಯನಿಮಿತ್ತ ಸ್ವಲ್ಪ ಹೊತ್ತು ಹೊರಗೆ ಹೋಗಿ ಬರುವಷ್ಟರಲ್ಲಿ ಹದಿನಾರು ವರುಷದ ಮಗಳು ತನ್ನ ದುಪ್ಪಟದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಳು. ಹದಿನೆಂಟು ವರುಷದ ಅಣ್ಣ ಜಗಳಾಡಿದ ಮೇಲೆ ಹೊರಗೆ ಹೋಗಿದ್ದ.

ಮನಸ್ಸಿಗೆ ಆಘಾತವಾಗುವಂತಹ ಇಂತಹ ವರದಿಗಳು ಬರುತ್ತಲೇ ಇರುತ್ತವೆ. ನಾವು ಓದುತ್ತಲೇ, ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಹತ್ತಿರದಲ್ಲಿ ನಡೆದುದನ್ನು ನೋಡುತ್ತಲೂ ಇರುತ್ತೇವೆ. ಸ್ವಲ್ಪ ದಿನದಲ್ಲಿ ಅದನ್ನು ಮರೆತೂ ಬಿಡುತ್ತೇವೆ. ಆದರೆ ಅಂತಹ ಸುದ್ದಿಗಳು ಹೃದಯಕ್ಕೆ ಹಾಕಿದ ಬರೆಯ ಕಲೆ ಅಲ್ಲೇ ಉಳಿದು ಬಿಡುತ್ತದೆ. ಅಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆ ಬರೆ ದೊಡ್ಡದಾಗುತ್ತಲೇ ಹೋಗುತ್ತದೆ.

ತಂದೆ-ತಾಯಿ ಬೈದರೆಂದು, ಒಳ್ಳೆಯ ಮಾರ್ಕು ಸಿಗಲಿಲ್ಲವೆಂದು, ಪರೀಕ್ಷೆಯಾದ ಮೇಲೆ ರಿಸಲ್ಟ್ ಬರುವ ಮುಂಚಿನ ಟೆನ್‌ಶನ್ ಎಂದು, ತಾನೆಲ್ಲಾದರೂ ಫೇಲ್ ಆದರೆ ಎನ್ನುವ ಹೆದರಿಕೆ ಎಂದು, ಯಾರೋ ತಮಾಷೆ ಮಾಡಿದರೆಂದು, ತನಗೆ ಇಷ್ಟವಾದ ಉಡುಪನ್ನು ತೆಗೆದು ಕೊಡಲಿಲ್ಲವೆಂದು, ಗೆಳೆಯರೊಡನೆ ರಾತ್ರಿ ಪಾರ್ಟಿಗೆ ಹೋಗಲು ಬಿಡಲಿಲ್ಲ ವೆಂದು, ಪ್ರೀತಿಸಿದವನನ್ನು ಮದುವೆಯಾಗಲು ಬಿಡಲಿಲ್ಲವೆಂದು, ಪ್ರೀತಿಸಿದವನು ಮೋಸ ಮಾಡಿದನೆಂದು, ಗಂಡನೊಡನೆ ಜಗಳವಾಯಿತೆಂದು, ಗಂಡನ ಅಟೆನ್‌ಶನ್ ಕಡಿಮೆಯಾಯಿತೆಂದು, ಒಂದೇ ಎರಡೇ? ಅಬ್ಬಬ್ಬಾ ಎಷ್ಟೊಂದು ಕ್ಷುಲ್ಲಕ ಕಾರಣಗಳು ತನ್ನನ್ನು ತಾನೆ ಕೊಂದು ಕೊಳ್ಳಲು! ಇದು ಹೆಣ್ಣು ಮಕ್ಕಳನ್ನು ಮಾತ್ರ ಕಾಡುವ ಸಮಸ್ಯೆಯಲ್ಲ. ಗಂಡು ಮಕ್ಕಳೂ ಆತ್ಮಹತ್ಯೆಗೆ ಶರಣಾಗುತ್ತಾರೆ. ಎಸ್.ಎಸ್.ಎಲ್.ಸಿ., ಪಿ.ಯೂ.ಸಿ. ರಿಸಲ್ಟ್ ಬಂದ ಸಮಯದಲ್ಲಂತೂ ಪೇಪರ್ ತೆರೆಯಲೂ ಭಯ.

ಯಾಕೆ ನಮ್ಮ ಯುವ ಜನಾಂಗ ಇಷ್ಟೊಂದು ದುರ್ಬಲವಾಗುತ್ತಿದೆ? ಈ ದುರ್ಬಲತೆಗೆ ಕಾರಣವೇನು?

ಹಿಂದೆ ಇಷ್ಟೊಂದು ಆತ್ಮಹತ್ಯೆಗಳು ಆಗುತ್ತಿರಲಿಲ್ಲ. ಮಕ್ಕಳಂತೂ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ. ಈಗ ಹುಟ್ಟು, ಸಾವಿನ ಅರ್ಥವೂ ಗೊತ್ತಿಲ್ಲದ ಏಳೆಂಟು ವರುಷದ ಮಕ್ಕಳೂ ನಾನು ಹುಟ್ಟ ಬಾರದಿತ್ತು. ನಾನು ಸಾಯಬೇಕು ಎನ್ನುವುದನ್ನು ಕೇಳುತ್ತೇವೆ. ಆಗಿನ ಮಕ್ಕಳಿಗೆ ಹೆತ್ತವರ ಬೈಗಳು ಇರಲಿಲ್ಲವೇ? ಇತ್ತು. ಬಹಳ ಕೆಟ್ಟ ಮಾತುಗಳ ಬೈಗಳು ಇತ್ತು. ಪೆಟ್ಟು ಚೆನ್ನಾಗಿ ಬೀಳುತ್ತಿತ್ತು. ಅದೂ ನಾಗರಬೆತ್ತದ ಪೆಟ್ಟು, ಮನೆಯಲ್ಲಿ ಗಲಾಟೆಗಳಾದಾಗ ಹೆಚ್ಚೆಂದರೆ ಮಕ್ಕಳು ಮನೆಬಿಟ್ಟು ಓಡಿ ಹೋಗುತ್ತಿದ್ದರು. ಹಾಗೆ ಹೋದವರು ಸೋತು ಸಾವಿಗೆ ಶರಣಾಗುತ್ತಿರಲಿಲ್ಲ. ಏನಾದರೂ ಸಾಧನೆ ಮಾಡಿ ಹಿಂತಿರುಗಿ ಬಂದು ಮುಖ ತೋರಿಸುತ್ತಿದ್ದರು. ಹೆತ್ತವರಿಗೆ ಆಸರೆಯೂ ಆಗುತ್ತಿದ್ದರು.

ಮನೆಬಿಟ್ಟು ಬೊಂಬಾಯಿಗೆ ಹೋದ ಎಷ್ಟೋ ಮಕ್ಕಳು ಅಲ್ಲಿ ಹೊಟೇಲಲ್ಲಿ ತಟ್ಟೆ ತೊಳೆದು ರಾತ್ರಿ ಶಾಲೆಗೆ ಹೋಗಿ ರಸ್ತೆ ದೀಪದಲ್ಲಿ ಓದಿ, ಕಲಿತು ದೊಡ್ಡ, ದೊಡ್ಡ ವ್ಯಕ್ತಿಗಳಾಗಿದ್ದನ್ನು ನೋಡಿದ್ದೇವೆ. ಕೇಳಿದ್ದೇವೆ. ಅವರಲ್ಲಿ ಅಷ್ಟೊಂದು ಛಲವಿರುತ್ತಿತ್ತು. ಜೀವಿಸುವ ಹಟವಿರುತ್ತಿತ್ತು.

ಅಸಮ ದಾಂಪತ್ಯವಂತೂ ಲೆಖ್ಖವಿಲ್ಲದಷ್ಟು ಇದ್ದುವು. ಆದರೆ ಮನೆಯ ನಾಲ್ಕು ಗೋಡೆಯ ಒಳಗೇ ಮಕ್ಕಳ ಮುಖ ನೋಡಿ ಸಹನೆ ಮತ್ತು ಮರ್ಯಾದೆ ಎನ್ನುವ ಚೌಕಟ್ಟಿನಲ್ಲಿ ಉಳಿಯುತ್ತಿದ್ದುವು. ಏನಾದರೂ ಅವರೆಲ್ಲಾ ಜೀವನಕ್ಕೆ ಹೆದರಿ ಓಡುತ್ತಿರಲಿಲ್ಲ. ಎಲ್ಲಾ ಕಷ್ಟಗಳೊಡನೆ ಜೀವಿಸುತ್ತಿದ್ದರು. ಎಲ್ಲವನ್ನೂ ಎದುರಿಸಿ ಜೀವಿಸುವ ಕೆಚ್ಚು ಅವರಿಗಿತ್ತು.

ಈಗ ಅಂತಹ ಹಟವಾಗಲೀ ಜೀವನ ಪ್ರೀತಿಯಾಗಲೀ ಏಕಿಲ್ಲ? ಆಗ ಮಾನಸಿಕ ತರಬೇತಿ ನೀಡುವ ಕೇಂದ್ರಗಳಾಗಲೀ ಹೇಗೆ ಜೀವಿಸಬೇಕು ಎಂದು ಹೇಳಿಕೊಡುವ ಕೌನ್ಸಿಲಿಂಗ್ ಸೆಂಟರ್‌ಗಳಾಗಲೀ, ಹೀಗೆ ಜೀವಿಸಿ ಎಂದು ಮಾರ್ಗದರ್ಶನ ನೀಡುವ ಪುಸ್ತಕಗಳಾಗಲೀ ಇರಲಿಲ್ಲ. ಆದರೂ ಅವರು ಎಲ್ಲ ಕಷ್ಟಗಳನ್ನೂ ಮೆಟ್ಟಿನಿಂತು ಜೀವಿಸುತ್ತಿದ್ದರು.

ಈಗಿನ ಪರಿಸ್ಥಿತಿಯನ್ನು ನೋಡುವಾಗ ಎಷ್ಟೋ ಸಲ ಅನಿಸುತ್ತದೆ ಈಗ ಮಕ್ಕಳನ್ನು ಬೆಳೆಸುತ್ತಿರುವ ರೀತಿಯೇ ಸರಿ ಇಲ್ಲವೇನೋ ಎಂದು. ಮಕ್ಕಳನ್ನು ರಫ್ ಅಂಡ್ ಟಫ್ ಆಗಿ ಬೆಳೆಸುತ್ತಿಲ್ಲ. ಕಷ್ಟ-ಸುಖ ಎರಡೂ ಇದೆ ಎನ್ನುವ ಅರಿವನ್ನು ಅವರಲ್ಲಿ ಮೂಡಿಸುವುದಿಲ್ಲ. ಬಯಸಿದ್ದೆಲ್ಲವೂ ಸಿಗುವುದಿಲ್ಲ ಎನ್ನುವ ಸತ್ಯವನ್ನು ಅವರಿಗೆ ಮನದಟ್ಟು ಮಾಡುವುದಿಲ್ಲ. ಜೀವನವನ್ನು ಎದುರಿಸುವ ಛಲವನ್ನು ಅವರಲ್ಲಿ ಹುಟ್ಟಿಸುವುದಿಲ್ಲ. ಜೀವನದಲ್ಲಿರುವ ಹಲವಾರು ಆಯ್ಕೆಗಳ ಬಗೆಗಿನ ಸಾಮಾನ್ಯ ತಿಳುವಳಿಕೆಯನ್ನೂ ಅವರಿಗೆ ಕೊಟ್ಟಿರುವುದಿಲ್ಲ. ಕಾಮನ್‌ಸೆನ್ಸ್ ಅನ್ನುವುದು ಏನೆಂದು ಅವರಿಗೆ ಗೊತ್ತೇ ಇಲ್ಲ. ಹೆಚ್ಚು ಮಾರ್‍ಕುಗಳನ್ನು ತೆಗೆಯಬೇಕೆನ್ನುವ ಒತ್ತಡದಲ್ಲಿ ಬರೇ ಪುಸ್ತಕದ ಬದನೆಕಾಯಿಗಳನ್ನಾಗಿ ಬೆಳೆಸುತ್ತಿದ್ದೇವೆ. ಮಾರ್ಕುಗಳಿಂದ ಒಳ್ಳೆಯ ಡಿಗ್ರಿಗಳನ್ನು ಪಡೆಯಬಹುದು ಆದರೆ ಜೀವಿಸುವ ಉತ್ಸಾಹವನ್ನಲ್ಲ; ಸೋಲನ್ನು ಎದುರಿಸುವ ಛಲವನ್ನಲ್ಲ.

ಮತ್ತೂ ಒಂದು ಸಂಗತಿ ಈಗಿನ ಮಕ್ಕಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ. ಏನು ಬೇಕಾದರೂ ಕೇಳಿದ ಕೂಡಲೇ ಸಿಗುತ್ತದೆ. ಕೆಲವೊಮ್ಮೆ ಅತ್ಯಂತ ದುಬಾರಿ ಬೆಲೆಯ ವಸ್ತುಗಳನ್ನು ಅವರು ಕೇಳುವ ಮುಂಚೆಯೇ ತೆಗೆಸಿ ಕೊಡುವುದನ್ನೂ ನೋಡುತ್ತೇವೆ. ‘ಇಲ್ಲ’ ಎನ್ನುವುದರ ಅರ್ಥವೇ ಈಗಿನ ಮಕ್ಕಳಿಗೆ ಗೊತ್ತಿರುವುದಿಲ್ಲ. ಹಾಗೆ ಬೆಳೆದ ಮೇಲೆ ಒಮ್ಮೆ ‘ಇಲ್ಲ’ ಅಥವಾ ‘ಬೇಡ’ ಎಂದರೆ ಅದನ್ನು ಸಹಿಸುವ ಸಹನೆ ಅವರಿಗಿರುವುದಿಲ್ಲ. ಸ್ವಲ್ಪ ನಿರಾಸೆಯನ್ನೂ ತಡೆದುಕೊಳ್ಳುವ ಮಾನಸಿಕ ಸ್ಥೈರ್‍ಯ ಅವರಲ್ಲಿರುವುದಿಲ್ಲ. ಇದರ ಹೊಣೆ ಯಾರದ್ದು?

ಹೆತ್ತವರಿಬ್ಬರೂ ದುಡಿಯುತ್ತಿರುವಾಗ ಮಕ್ಕಳಿಗೆ ಸಾಕಷ್ಟು ಲಕ್ಷ್ಯ ಸಿಗುವುದಿಲ್ಲ ಎನ್ನುವ ಪಾಪಪ್ರಜ್ಞೆಯಿಂದಲೋ, ಕೆಲವೊಮ್ಮೆ ತಂದೆ ತಾಯಿ ಬೇರೆಬೇರೆಯಾಗಿದ್ದು ಒಬ್ಬರೇ ಮಕ್ಕಳನ್ನು ಬೆಳೆಸುವಾಗ ಮಕ್ಕಳಿಗೆ ಇನ್ನೊಬ್ಬರ ಅನುಪಸ್ಥಿತಿಯ ನೋವು ಆಗಬಾರದೆಂದೋ ಮಕ್ಕಳನ್ನು ತುಂಬಾ ಡಿಪೆಂಡೆಂಟ್ ಆಗಿ ಬೆಳೆಸುವುದನ್ನು ಕಾಣುತ್ತೇವೆ. ಎಲ್ಲವನ್ನೂ ಹಿರಿಯರೇ ಮಾಡಿ ಅಥವಾ ಕೆಲಸದವರಿಂದ ಮಾಡಿಸಿ ಅವರವರ ಕೆಲಸ ಅವರವರು ಮಾಡಲಾಗದಷ್ಟು ಪರಾವಲಂಬನೆ ಅವರಲ್ಲಿ ಬೆಳೆಸುವುದನ್ನೂ ನೋಡುತ್ತೇವೆ. ಇದು ಖಂಡಿತಕ್ಕೂ ಆರೋಗ್ಯಕಾರಿ ಬೆಳವಣಿಗೆಯಲ್ಲ.

ಚಿಕ್ಕಮಕ್ಕಳಿರುವಾಗಲೇ ಮಕ್ಕಳಿಗೆ ‘ಬೇಡ’ ಮತ್ತು ‘ಇಲ್ಲ’ವೆನ್ನುವುದರ ಪರಿಚಯ ಮಾಡಿಕೊಡುವುದು ಬಹಳ ಅಗತ್ಯ. ಅಪೇಕ್ಷಿಸಿದ್ದೆಲ್ಲವೂ ಸಿಗುವುದಿಲ್ಲ ಎನ್ನುವ ಅರಿವು ಬಾಲ್ಯದಿಂದಲೇ ಇರಬೇಕು. ಬಾಲ್ಯದಲ್ಲಿ ಈ ಶಬ್ದಗಳ ಅರ್ಥ ಕಲಿಯದಿದ್ದರೆ ಮುಂದೆ ಈ ಶಬ್ದಗಳೇ ಆತ್ಮಹತ್ಯೆಯಂತಹ ಮನೋದೌರ್ಬ್ಯಲ್ಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಹೆತ್ತವರು ಮರೆಯಬಾರದು. ಈಗಿನ ಮಕ್ಕಳು ದೈಹಿಕವಾಗಿ ಆರೋಗ್ಯವಂತರಾಗಿದ್ದೂ, ಮಾನಸಿಕವಾಗಿ ದುರ್ಬಲರಾಗಿರುವುದಕ್ಕೆ ಇದೇ ಕಾರಣ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಕನಸುಗಳು ಇರಬೇಕು. ಆದರೆ ಕನಸುಗಳು ನೆನಸಾಗದಾಗ ಅದನ್ನು ಎದುರಿಸುವ ಮನೋದಾರ್ಡ್ಯತೆಯೂ ಬೇಕು ಎನ್ನುವುದನ್ನು ಮಕ್ಕಳಲ್ಲಿ ಮನದಟ್ಟು ಮಾಡಿಕೊಡಬೇಕು.

ಜೀವನದಲ್ಲಿ ಒಂದೇ ದಾರಿಯಲ್ಲ. ಹಲವಾರು ದಾರಿಗಳಿವೆ. ಕವಲುದಾರಿಗಳಂತೂ ಬಹಳವಿವೆ. ಒಂದು ದಾರಿ ಮುಚ್ಚಿದರೆ ಇನ್ನೊಂದು ದಾರಿಯಲ್ಲಿ ಹೋಗಿ ಜೀವನದಲ್ಲಿ ಗೆಲ್ಲುವ ಆತ್ಮವಿಶ್ವಾಸ ಮುಖ್ಯ ಎನ್ನುವುದನ್ನು ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ತಿಳಿಸಿದರೆ ಸ್ವಲ್ಪ ಸೋತಲ್ಲಿ ಆತ್ಮಹತ್ಯೆಗೆ ಶರಣಾಗುವುದು ಕಡಿಮೆಯಾಗಬಹುದು.

ಜೀವನದಲ್ಲಿ ಎದುರಾಗುವ ಅಡಚಣೆಗಳು, ಸೋಲುಗಳು, ನೋವುಗಳು ನಮ್ಮ ತಿಳುವಳಿಕೆಯನ್ನು ಧೈರ್ಯವನ್ನು ಬೆಳೆಸುತ್ತವೆ ಎನ್ನುವ ಅರಿವು ಮುಖ್ಯ ಸೋಲುಗಳು ಗೆಲುವಿನ ಕಡೆಗೆ ಸೋಪಾನಗಳು ಎನ್ನುವ ಅನುಭವದ ಮಾತುಗಳು ಯಾವತ್ತಿಗೂ ಸತ್ಯ!
*****
೫-೭-೨೦೦೯

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದಿರ
Next post ಸೋಸೋದು

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…