Home / ಕವನ / ಕವಿತೆ / ಕಡಲಗರ್‍ಭ

ಕಡಲಗರ್‍ಭ

ಕಡಲಬಸಿರು ನೋಡುವ ಆಸೆಕಣ್ಗಳು-
ತನ್ನವೇ ಐದಾರು ಬಸಿರು
ನೆಲಕ್ಕುರುಳಿ ಬೆಳೆದು ನೀರಿಗಿಳಿದು
ಜಾಲರಿ ತುಂಬಿ ತುಂಬಿ ಮೀನುಗಳ
ತರುವ ಮಕ್ಕಳ ನೋಡಿ ನಕ್ಕಾಕೆ…
ಬೆಂಕಿಯ ನಾಲಿಗೆಗೆ ಸಿಕ್ಕು
ಸುಟ್ಟ ಮೀನುಗಳಿಗೆ ಅತ್ತಾಕೆ….
ಕತ್ತಲಕಾಯಕಕೆ ಬೆತ್ತಲಾಗಿ
ಹಗಲು ಹಣೆಬರಹಕೆ ಬಣ್ಣತುಂಬಿ
ಮನದೊಳಗೆ ಉಬ್ಬರ ಪಟ್ಟಾಕೆ…

ಮಳೆ ಮಳೆ ಮಳೆ ಹುಚ್ಚೆದ್ದ ಆಕಾಶ
ಮಳೆಸುರಿಸಿ ಹೊಳೆಹಳ್ಳ ತುಂಬಿ ಹರಿದು
ಕಡಲತಾಯಿ ಗರ್‍ಭವತಿ
ಕುಲುಕಾಟ ನೂರಾರು ಜೀವರಾಶಿಗಳೊಡಲು
ಬಣ್ಣ ಭಾವನೆಗಳ ಭಾರ ಹೊಯ್ದಾಟ.

ಬಿಟ್ಟೂಬಿಡದ ಉರಿಯನಾಲಿಗೆಗೆ ಸಿಕ್ಕು
ಒಳಗೊಳಗೆ ಬೆಂದು ನೋವುಂಡು
ನೆರಳಿ ಹೊರಳಿ ತೆವಳುತ ನಿಂತ ಕಡಲಗರ್‍ಭ
ಹಗಲೊಮ್ಮೆ ರಾತ್ರಿಯೊಮ್ಮೆ
ಕಡಲಗರ್‍ಭ ಕಂಡು ವಿಸ್ಮಯ
ಆಳ ಅಗಾಧತೆಗೆ ತನ್ನದೇ ಹೊಟ್ಟೆ ಸವರಿ
ಮಗದೊಮ್ಮೆ ಕಡಲಿನುಬ್ಬರಕೆ ದೃಷ್ಟಿ ಸರಿಸಿ
ಮೌನಿಯಾಗಿ ನಕ್ಕಾಕೆ.

ಕಡಲು ರಾಜನೆ? ಅವನಿಗದೆಂತಹ ಬಸಿರು!
ಕಡಲು ರಾಣಿಯೆ? ಅವಳಿಗದೆಲ್ಲಿಯ ನೆಮ್ಮದಿ!!
ಅದು ಬೆಸ್ತನರಮನೆ ಒಳಗೆ
ಹೆಂಡತಿಯ ದುಃಖದುಮ್ಮಾನಗಳಬ್ಬರ
ತಾಕಲಾಟದ ಗರ್‍ಭ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...