Home / ಕವನ / ಕವಿತೆ / ನೆನಪಿಸಿಕೊಳ್ಳಬೇಕವರನ್ನೊಮ್ಮೆ

ನೆನಪಿಸಿಕೊಳ್ಳಬೇಕವರನ್ನೊಮ್ಮೆ


ಸುತ್ತಿ ಸುರುಳಿಗಟ್ಟಿ ಮದೋನ್ಮತ್ತದೊಳು
ಸೊಕ್ಕಿ ಹೆಣೆದು ಬಿಗಿದಪ್ಪಿ
ನಿರ್ಭಯದೊಳು ಆಕಾಶಕ್ಕೇರಿ
ಸೂರ್ಯನನ್ನೊಳಗೆ ಬಿಟ್ಟುಕೊಳ್ಳದ
ಪಚ್ಚೆ ಹಸಿರಿನ ಛತ್ರ ಚಾಮರಗಳ
ಪಿಸುನುಡಿಗೆ ಮೈ ಬೆವೆತರೂ
ಮೆರೆಯುವ ದಟ್ಟ ಕಾನನ

ಸುರಿಸುರಿವ ಮಳೆ
ಸೊಲ್ಲಿಲ್ಲ ಸೂರಿಲ್ಲ ಜೀವಕೆ
ಮೈ ಮುಚ್ಚಿಕೊಳ್ಳುವ ಪರಿಯಿಲ್ಲ
ಜೀವಭೀತಿಗೆ ಇದ್ದರಿಲ್ಲಿ ವಿಷಪೂರಿತ
ಬಾಣಿನ ಬೆತ್ತಲೆ ತಿರುಗುವ ಕಾಡು ಕರಿಯರು;
ಭೂರಮೆಯ ಜಾರವಾ ಜೇಂಗೊಡಗಳು.

ಸಾವಿಗೆ ಹುಳಹುಪ್ಪಡಿ ಕ್ರಿಮಿಕೀಟಗಳ
ವಿಷಾರಿ ರೋಗಾಣುಗಳು
ಭಯಾನಕ ಭಯಂಕರ ಕಾಡುವ ಕಾಡು.

ಸುತ್ತೆಲ್ಲ ಚಿತ್ತ ಹರಿಸಿದತ್ತೆಲ್ಲ
ಆಕಾಶಕೆ ತಬ್ಬಿ ಮಗದೊಮ್ಮೆ ಸೆಳೆದು
ಧುಮ್ಮನೆ ಧುಮುಕಿ ರೌದ್ರಾವತಾರದ
ಬಾಯಿಬಿಚ್ಚಿ ಗಡಚಿಕ್ಕಿ ಮುನ್ನುಗ್ಗಿ
ನೆರೆತೊರೆಯ ಸುನಾಮಿಗಳಬ್ಬರಿಸಿ
ಎದೆನಡುಗಿಸಿ ಉಸಿರು ಹಿಡಿದಾವರಿಸಿದ
ಕರಿನೀರಿನಾರಣ್ಯ.

ಕಂಡದ್ದೇ ಕರಿನೀರು ದಟ್ಟಕಾಡು
ಕನಸು ಬಿತ್ತಿದವು ಬಿಳಿಯ ಸರ್ವಾಧಿಕಾರಿಗಳು
ಬಂದೂಕು ಹೆಗಲಿಗೇರಿಸಿ ಚರ್ಮದಪಟ್ಟಿ ಹಿಡಿದು
ಸ್ವಾತಂತ್ರ್ಯ ಚಳುವಳಿಕಾರರ ಹಿಡಿದೆಳೆದು
ಕೈದಿ ಹಣೆಪಟ್ಟಿ ಹೊಡೆದು ಕೈಕಾಲಿಗೆ ಸರಪಳಿ ಬಿಗಿದು
ಹಡಗೇರಿಸಿ ಅಟ್ಟಹಾಸ ಮೆರೆದದ್ದು.

ಅರೆಬೆಂದ ಊಟ ಮಾತಿಲ್ಲ ಕತೆಯಿಲ್ಲ ಮೌನ
ಮೇಲೆ ಸೂರ್‍ಯ ಚಂದ್ರರೊಡನೆ ಮೂಕ ಸಂವಾದ
ಎದುರಿನ ಸಮುದ್ರದಬ್ಬರದ ತೆರೆಗಳೊಡನೆ
ರೋಷತುಂಬಿದೆದೆಯ ಉಸಿರು
ಸಮುದ್ರಕ್ಕಾದರೂ ಬಿದ್ದು ಸಾಯಬೇಕೆಂದರವರು
ಉಪವಾಸ ಬಿದ್ದಾದರೂ ಜೀವ ಬಿಡಬೇಕೆಂದರವರು
ತಪ್ಪಿಸಿಕೊಂಡು ದಂಡಕಾರಣ್ಯದಲ್ಲಾದರೂ ಓಡಬೇಕೆಂದರವರು
ಕಾವಲು ಕಾವಲು ಎಲ್ಲೆಲ್ಲೂ ಕಾವಲು
ಸರಳುಗಳ ಹಿಂದೆ ನಿಂತ ಅಸಹಾಯಕ ದೇಶಪ್ರೇಮಿಗಳು.

ಗಸ್ತಿನವರ ಚಾಟಿ ಸರಪಳಿ ಏಟುಗಳಿಗೆ
ಮೈಯೆಲ್ಲಾ ಬೆಂಕಿ
ಎದುರು ಮಾತನಾಡಿದ್ದಾದರೆ
ಎದುರಿಗೆ ತೂಗುವ ನೇಣು ಕುಣಿಕೆಗಳು
ಆದರೂ ತಗ್ಗದೆ ಕುಗ್ಗದೆ ಬಗ್ಗದೆ
ಜೀವದ ಹಂಗುತೊರೆದು ಜೈ ಘೋಷ ಕೂಗಿ
ಗವೆನ್ನುವ ಕತ್ತಲು ನೆಲಮಾಳಿಗೆಗೆ
ಹರಿದೋಡುವ ಬಿಸಿನೆತ್ತರಕೆ ಹೆದರದೆ
ಕುಣಿಕೆಗೆ ಕತ್ತೊಡ್ಡಿ ಬಲಿಯಾದರು.

ಅದರಾಚೆ ಹೆಣಗಳು ನುಂಗಲು ಸ್ಪರ್ಧಿಸುವ
ಕಪ್ಪು ಕರಿನೀರ ಹೆದ್ದೆರೆಗಳ ಹಲಗೆ ನಗಾರಿಗಳ ಹೊಡೆತ
ಬಿರುಗಾಳಿ ಮಳೆಯ
ಕಣ್ಣೀರಪ್ಪಳಿಸುವಿಕೆಯ ಅಲ್ಲೋಲ ಕಲ್ಲೋಲ
ಅಯ್ಯೋ! ಅದೆಷ್ಟು ಛಲ ಹೋರಾಟ
ಈ ತಾಯಿನೆಲದ ಪ್ರೀತಿಯ ಋಣಕ್ಕೆ
ಕ್ಷೋಭೆ ಹೋರಾಟ ಹತಾಶೆ ಅಸಹಾಯಕತೆಗೇ
ಇರಬೇಕು; ಗುಂಡಿನೇಟುಗಳಿಗುರುಳಿ ಕಠಿಣ ಶಿಕ್ಷೆಗೇ
ಇರಬೇಕು; ಗಲ್ಲಿಗೆ ಕತ್ತೊಡ್ಡಿ ಕೆಂಪುರಕ್ತ ಕಪ್ಪಾಗಿ ನಂಜೇರಿದ್ದು..
‘ಕಾಳಾಪಾಣಿ’ ಭಯಾನಕ ಶಬ್ದ ಹೊರಹೊಮ್ಮಿದ್ದು.

ಲಕ್ಷಾಂತರ ಚಳುವಳಿಕಾರರ ಕೂಗಿಗೆ
ಜೀವತೆತ್ತ ಆತ್ಮಗಳುಸುರಿಗೆ
ಸಿಕ್ಕಿತು ಸ್ವಾತಂತ್ರ್ಯ ಹೊರಟುಹೋದವು ಪರಂಗಿ
ಪರದೇಶದವುಗಳು


ಕುರ್ಚಿಗಾಗಿ

ಸ್ವಾರ್‍ಥಿಗಳ ಕಚ್ಚಾಟ ಹುನ್ನಾರ ವಿರೋಧ
ಗಾಂಧೀ ತಾತ ನೋಡಿಲ್ಲಿ ನಿನ್ನ ಆದರ್ಶದೇಶದ
ರೆಸಾರ್‍ಟ್ ರಾಜಕೀಯ
ಅವು ಬರಬೇಕೀ ಪುಣ್ಯಕ್ಷೇತ್ರಕೆ
ನಾಚಿಕೆ ಪಟ್ಟುಕೊಳ್ಳಬೇಕೊಮ್ಮೆ ತಮ್ಮ ಐಶಾರಾಮಿಗೆ-
ಕ್ಲಬ್ಬು ಮೋಜು ಮಜ ಕುಣಿತ ಕುಡಿತ
ಬಿಟ್ಟೊಮ್ಮೆ ಬರಬೇಕಿಲ್ಲಿ
ಯುವ ಪೀಳಿಗೆಯ ಅರೆಬರೆಯವು-

ದ್ವೀಪಗಳ ತುಂಬ ತುಂಬಿ ನಿಂತ
ಸಂಗ್ರಾಮದ ಧ್ವನಿ, ಅಸಹಾಯಕತೆ, ಕಿರುಚಾಟ
ನೋವು ಆಲಿಸಬೇಕೊಮ್ಮೆ
ನೋಡಬೇಕವರನ್ನೊಮ್ಮೆ ಮೇಲೆ ಹೊಳೆವ ತಾರೆಗಳಲ್ಲಿ
ಮಾತಾಡಬೇಕೊಮ್ಮೆ ಅವರ ಕಂಡ ಚಂದ್ರನೊಡನೆ
ಫಳಫಳಿಸಿ ಕರಿನೀರ ಕಥೆಹೇಳುವ ಸೂರ್ಯನೊಡನೊಮ್ಮೆ
ಸ್ಪರ್ಶಿಸಬೇಕೊಮ್ಮೆ ಅವರು ಇಟ್ಟ ಹೆಜ್ಜೆಯ ಮಣ್ಣು

ಎದೆ ತುಂಬ ದುಃಖ ಮೈ ತುಂಬ ನಡುಕ
ಕಣ್ಣುಗಳು ಹನಿಗೂಡುತ
ಪಾಪಪ್ರಜ್ಞೆ ಮೂಡುವ ಎಚ್ಚರಿಕೆಯ ಗಂಟೆ.
*****
(ಅಂಡಮಾನಿನ ಸೆಲ್ಯುಲಾರ್ ಜೈಲು ನೋಡಿದಾಗ)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...