Home / ಕವನ / ಕವಿತೆ / ಉನ್ಮಾದಿನಿ

ಉನ್ಮಾದಿನಿ

ವಸಂತ


ಬಂದೆ ಬರುವನಂತೆ ಆತ
ಬಂದೆ ಬರುವನಂತೆ !
ಚೆಂದದೊಸಗೆಯನ್ನು ಕೇಳಿ
ನವಿರ ಹೊರೆಯನಾಂತೆ !

ನಿಂದೆ ಮರುಳೆಯಂತೆ….
ನಿಂದೆ ಮರುಳೆಯಂತೆ, ನೆರೆಯೆ
ಮೈಮರೆವಿನ ಸಂತೆ.


ಇನಿಯ ಬರುವ ಮೊದಲೆ ನನ್ನ
ಮನೆಯನೆಂತು ಮಿನುಗಿಸುವೆ?
ಮನಸು ಮೆಚ್ಚಿ ತಕ್ಕಿಪಂತೆ
ತನುವನೆಂತು ತೊಳಗಿಸುವೆ?

ಬರಲು ನಿಲುವೆನೆಂತು….?
ಬರಲು ನಿಲುವೆನೆಂತು? ಅವನ
ಕರೆದು ನುಡಿವೆನೆಂತು?


ಆತನನೆಂತಾದರಿಸಲಿ?
ಆಸನವಾವುದನಿರಿಸಲಿ?
ಪ್ರೀತಿ ಯಾವ ರಸದೊಳೇನೊ!
ಪಾಕವನಾವುದ ತರಿಸಲಿ?

ತಿಳಿಯಲೊಲ್ಲದೊಂದು….!
ತಿಳಿಯಲೊಲ್ಲದೊಂದು, ಅವನ
ತಣಿಸುವ ತೆರನಿಂದು!


ತಣಿಸುವ ತೆರನೊಂದರಿಯದೆ,
ತಿಳಿದ ಜನರೊಳಾರಯ್ಯದೆ,
ಇನಿಯನ ನೋಡಲಿಕ್ಕೆ ಬರಿದೆ
ಹಲುಬಿದೆ; ಬಲು ಹುಚ್ಚಿಯಾದೆ;

ನೋಡುವೆನವನನ್ನು ….!
ನೋಡುವೆನವನನ್ನು, ಆಗ
ಮಾಡಲಿ ನಾನೇನು?


ಮಾಡದಲಾವಾವುದನೂ
ಮೋಡಿವಡೆದ ತೆರದಿ ನಾನು
ನೋಡುತಲಾತನನೆ ನಿಂತು,
ಬೇಡಿಕೊಳುವೆ ನಯದೊಳಿಂತು:

“ನೋಡು ಒರೆಗೆ ಹಚ್ಚಿ….!
“ನೋಡು ಒರೆಗೆ ಹಚ್ಚಿ, ದೊರೆಯೆ
ನಾನಿರುವೆನು ಹುಚ್ಚಿ!”


“ನಿನ್ನ ಕಾಂಬ ಉನ್ಮಾದದಿ
ಇನ್ನಾವುದನರಿಯದವಳು,
“ನಾಣು ಜಾಣು ರೀತಿ ನೀತಿ
ಮಾನಾದರ ಕಾಣದವಳು,

“ನೀನೆ ಹೇಳು ನಲ್ಲಾ….!
“ನೀನೆ ಹೇಳು ನಲ್ಲ, ಮಾಡ-
ಲೇನು ನಾನದೆಲ್ಲಾ!”


ಬಿನ್ನವಿಸಲು ನನ್ನಿ ಕತೆ
ಉನ್ಮಾದಿನಿಯಿವಳೆನ್ನುತೆ
ಚೆನ್ನ ಮರಳಿ ತೆರಳುವನೇ-
ನನ್ನೊಳು ಕೀಳ್‌ಗಣ್ಣಿರಿಸುತೆ ?
ಅಹುದೆ ತೆರಳಬಹುದೇ…?
ಅಹುದೆ ತೆರಳಬಹುದೆ ? ಅವಗೆ
ನನ್ನಿರವಿದು ಅರಿದೇ ?


ನನ್ನಿರವಿದು ತಿಳಿಯದೇನು ?
ಮನ್ನೆಯನವ ಮರುಳನೇನು ?
ನನ್ನಿ ಯು ತನಗಾಗಿ ಈಕೆ
ಉನ್ಮಾದಿನಿಯಾದಳೆನುತೆ

ಕರೆವ ಕರುಣೆಯಿಂದೆ….
ಕರೆವ ಕರುಣೆಯಿಂದೆ, ನನ್ನ –
ನಿರಿಸಿಕೊಳುವ ಮುಂದೆ.
ಇರಿಸಿಕೊಳುವ ಮುಂದೆ, ಒಡನೆ
ಬೆರೆವ ನಲುಮೆಯಿಂದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...