Home / ಕವನ / ಗಝಲ್ / ಮಿಂಚಿನ ಮಾಟ

ಮಿಂಚಿನ ಮಾಟ


ಕೂಗು ಕೂಗೆಲೆ ಕೊಗಿಲೆಯೆ ನೀ
ಗಳಪುತಿರು ಇರು ಅರಗಿಣಿ!
ಏಗಲೂ ನುಡಿ ಕೊಳಲೆ, ವೀಣೆಯೆ-
ರಾಗಿಸಲಿ ನಿನ್ನಾ ಧ್ವನಿ!
ನಿಮ್ಮ ಉಲುಹಿನೊಳೆಲ್ಲಾ….
ನಿಮ್ಮ ಉಲುಹಿನೊಳೆಲ್ಲ-ಕೇಳುವೆ
ನಮ್ಮವನ ಸವಿಸೊಲ್ಲಾ.


ತುಂಬುದಿಂಗಳ ಬಿಂಬವೇ ನೀ
ಕಾಂಬೆಯೇಕೊಂದೇ ದಿನ?
ಅಂಬರದಿ ನಗುತಿದ್ದರಾಗದೆ-
ಇಂಬು ಬಿಡದೆಯೆ ದಿನದಿನ?
ನಗುಮೊಗದ ನಿನ್ನಲ್ಲಿ….
ನಗುಮೊಗದ ನಿನ್ನಲ್ಲಿ ರಮಣನ
ನಗೆಯ ಬಗೆಯಿಹುದಲ್ಲಿ!


ತನಿರಸವನೆಲ್ಲಿಂದ ತಂದಿರೆ
ಹಣ್ಣು-ಹಂಪಲವೇ?
ಇನಿದನೆಲ್ಲಿಂದೆಳೆದಿಹಿರಿ ಕೆನೆ-
ವಾಲೆ ಜೇಂಗೊಡವೇ?
ಬಲ್ಲೆನಾನಿದರಂದ….
ಬಲ್ಲೆನಾ ತಂದಿರುವಿರಿನಿಯನ
ಬಾಯ ತಂಬುಲದಿಂದ.


ಮುಡಿದ ಮಾಲೆಯ ಮೆಲ್ಲಿತಾಗಿಹ
ಬೆಡಗಿನಲರಿನ ಸೋಂಕದು
ಒಡೆಯನಪ್ಪುಗೆ-ಸೊಗವ ಮನದೆದು-
ರಿಡುವ ಸಾಧನವಹುದಿದು;
ಆದರೇನಿದು ಎಲ್ಲಾ….
ಆದರೇನಿದು ಎಲ್ಲವೂ ಬಲು-
ಬೇಗ ಬಯಲಹುದಲ್ಲಾ!


ಎಲ್ಲವು ತೋರುವುವು ನನ್ನೆದು-
ರಲ್ಲಿ ಮಿಂಚಿನ ಮಾಟವ
ನಲ್ಲನೊಡನಿರೆ ಸವಿನೆನವಿರತ-
ಎಲ್ಲವೀ ಸೊಗದೂಟವ
ಬರುವುದೆಂದಾ ಕಾಲ….
ಬರುವುದೆಂದೋ ಎಂದು ನೂಕುತ
ಲಿರುವೆ ದಿನಗಳನೆಲ್ಲ !
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...