Home / ಕವನ / ಕವಿತೆ / ಹುಟ್ಟಿಬರಲಾರಿರಾ ಇನ್ನೊಮ್ಮೆ?

ಹುಟ್ಟಿಬರಲಾರಿರಾ ಇನ್ನೊಮ್ಮೆ?

ಹುಟ್ಟಿ ಬರಲಾರಿರಾ ಇನ್ನೊಮ್ಮೆ
ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ
ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ
ಹೊಸಬೆಳಕಾಗಿ ಹೊಸದಾರಿ ತೋರಲು
ಹುಟ್ಟಿಬರಲಾರಿರಾ ಇನ್ನೊಮ್ಮೆ?

ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ
‘ಕೈಗಾರೀಕರಣ ಇಲ್ಲವೆ ನಾಶ’ ಎನ್ನುತ್ತಾ
ಶತಮಾನದ ಹಿಂದೆಯೇ ಬಡಿದೆಬ್ಬಿಸಿದ್ದ ನಿಮ್ಮ ಕೆಚ್ಚು
ಮರೆಯಾಗಿಲ್ಲ ಕನ್ನಡಿಗರ ಮನದಿಂದ.

ಬಡತನದ ನೋವಲ್ಲೂ ಸ್ವಪ್ರತಿಭೆಯ ಅರಳಿಸಿ,
ಇಂಜಿನಿಯರ್ ಆಗಿ ಬುದ್ಧಿವಂತಿಕೆಯಿಂದ ಮೆರೆದು
ತ್ರಿವಿಕ್ರಮನಂತೆ ಎದ್ದು ನಿಂತ ನಿಮ್ಮ ಛಲ
ಮರೆಯಾಗಿಲ್ಲ ಕನ್ನಡಿಗರ ಮನದಿಂದ.

ಹುಟ್ಟಿದ್ದು ಕನ್ನಡ ನಾಡಿನೊಂದು ಹಳ್ಳಿಯಲಿ.
ಮಾತೃಭಾಷೆ ತೆಲುಗು, ಆಂಗ್ಲ ಭಾಷಾ ಪ್ರವೀಣ.
ಕನ್ನಡಿಗನಾಗಿ ಮೆರೆದ ನಿಮ್ಮ ಕನ್ನಡನಾಡಿನಭಿಮಾನ
ಮರೆಯಾಗಿಲ್ಲ ಕನ್ನಡಿಗರ ಮನದಿಂದ.

ಕನ್ನಡ ನಾಡಿನ ಪಾಶ ನಿಮ್ಮನ್ನೆಳೆದಿತ್ತು ಸದಾ
ಮೈಸೂರು ದಿವಾನರಾಗಿ, ಕೈಗಾರಿಕಾ ಬೆಳವಣಿಗೆಯ ರೂವಾರಿಯಾಗಿ
ನಾಡಿನ ಭವಿಷ್ಯ ಬರೆದ ನಿಮ್ಮ ದೂರದರ್ಶಿತ್ವ
ಮರೆಯಾಗಿಲ್ಲ ಕನ್ನಡಿಗರ ಮನದಿಂದ.

ಉಕ್ಕಿ ಹರಿದ ಕಾವೇರಿಗೆ ಕಟ್ಟಿದ ಕನ್ನಂಬಾಡಿ ಕಟ್ಟೆ
ಸೌಂದರ್ಯದೇವತೆಯ ಸೆರೆಹಿಡಿದ ಬೃಂದಾವನ
ಹೊಸಹುಟ್ಟು ಪಡೆದು ಕಬ್ಬಿನ ಕಣಜವಾದ ಮಂಡ್ಯ
ಭದ್ರಾವತಿಯ ಉಕ್ಕಿನ ಕಾರ್ಖಾನೆ, ಕಟ್ಟಿದ ವೃತ್ತಿ ಶಿಕ್ಷಣ ಸಂಸ್ಥೆಗಳು,
ಕೋಲಾರದ ಚಿನ್ನದ ಗಣಿ ಉಳಿಸಲು ತೊಟ್ಟ ಪಣ
ಕರ್ನಾಟಕದಲ್ಲಿ ಕೈಗಾರಿಕೆಗಳು ಬೆಳೆಯಲು ತೋರಿದ ದಾರಿ
ಮರೆಯಾಗ ಬಿಡುವುದೇ ನಿಮ್ಮ ನೆನಪ?

ದುಮ್ಮಿಕ್ಕಿ ಹರಿದ ಜಲಶಕ್ತಿಯ ವಿದ್ಯುತ್ ಶಕ್ತಿಯಾಗಿಸಿ ಮನೆಮನೆ ಬೆಳಗಿ,
ವಿಜ್ಞಾನ ತಂತ್ರಜ್ಞಾನದ ಮುನ್ನಡೆಗೆ ಅಂದೇ ನಾಂದಿ ಹಾಕಿ
ಜಾಗತೀಕರಣದ ಅರಿವು ಮೂಡುವ ಮುನ್ನ ಜಗದ್ವಿಖ್ಯಾತರಾಗಿ
ಬ್ರಿಟಿಷರಿಂದ ಸರ್ ಎನ್ನಿಸಿ ಭಾರತರತ್ನವಾಗಿ ಮೆರೆದ ಸರ್. ಎಂ.ವಿ.
ನಾವೆಂತು ಮರೆಯಲಿ ನಿಮ್ಮ?

ನೂರು ವರುಷದ ನಿಮ್ಮ ದುಡಿಮೆ
ನಾಡು ಬೆಳೆದು, ಜನಕೆ ನೆಮ್ಮದಿಯ ಬಾಳು ಕೊಡುವುದರ ಕಡೆಗೆ.
ಮಾದರಿಯಾಗಬೇಕು ಎಲ್ಲ ರಾಜಕಾರಣಿಗಳಿಗೆ ನಿಮ್ಮ ದೇಶಪ್ರೇಮದ ಬದುಕು.
ಮಾದರಿಯಾಗಬೇಕು ಎಲ್ಲ ಕನ್ನಡಿಗರಿಗೆ ನಿಮ್ಮ ನಿಸ್ವಾರ್ಥ ಬದುಕು.
ಮಾದರಿಯಾಗಬೇಕು ಎಲ್ಲ ಮಕ್ಕಳಿಗೆ ನಿಮ್ಮ ವಿದ್ಯಾರ್ಥಿಯ ಬದುಕು.

ನೀವೆಂದೂ ಮರೆಯಾಗಿಲ್ಲ ಕನ್ನಡಿಗರ ಮನದಿಂದ
ವಿಶ್ವೇಶ್ವರಯ್ಯನಂತಹ ಮಗ ಬೇಕೆಂದು ಎಲ್ಲ ತಾಯಂದಿರ ಬಯಕೆ.
ಹರಕೆ, ಬಯಕೆ ನಿಜವಾಗಲಿಲ್ಲ ಇನ್ನೂ ಹುಟ್ಟಲಿಲ್ಲ ಇನ್ನೊಬ್ಬ ವಿಶ್ವೇಶ್ವರಯ್ಯ
ಕಾಯುತ್ತಲೇ ಇದ್ದೇವೆ ಇನ್ನೊಮ್ಮೆ ಹುಟ್ಟಿಬರಲೆಂದು!

ಚಿನ್ನದ ಗಣಿ ಮುಚ್ಚಿದೆ. ಗಣಿಕಾರ್ಮಿಕರಿಂದು ನಿರ್ಗತಿಕರು
ಸಕ್ಕರೆ ನಾಡಿನೆಡೆಗೆ ದೌಡಾಯಿಸಿವೆ ಇರುವೆಗಳ ಸಾಲು ಸಾಲು.
ಜಗದ ಜನರ ಸೆಳೆದ ಬೃಂದಾವನದ ಸೌಂದರ್ಯಕೆ ಮುಪ್ಪಡರುತ್ತಿದೆ.
ಭದ್ರಾವತಿಯ ಉಕ್ಕಿನ ಕಾರ್ಖಾನೆ ನೆಲಕಚ್ಚುತ್ತಿದೆ.

ಕನ್ನಂಬಾಡಿ ಕಟ್ಟೆ ಜರಿಯುವ ಮುನ್ನ,
ನನಸಾದ ನಿಮ್ಮ ಕನಸುಗಳು ಕೊಚ್ಚಿ ಹೋಗುವ ಮುನ್ನ,
ಇರುವೆಗಳು ಹುತ್ತ ಕಟ್ಟುವ ಮುನ್ನ
ಜಾಗತೀಕರಣದ ಭೂತ ಎಲ್ಲ ಕಬಳಿಸುವ ಮುನ್ನ
ಹೊಸ ಬೆಳಕಲಿ ಹೊಸ ದಾರಿ ತೋರಲು
ಹುಟ್ಟಿ ಬರಲಾರಿರಾ ಇನ್ನೊಮ್ಮೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...