Home / ಕವನ / ಕವಿತೆ / ಬಂದೆ ಬಂದೆ

ಬಂದೆ ಬಂದೆ

ಮಾತೃವಚನ

ನನ್ನ ದೊರೆಯೆ ಸವಿಗಾರ ಸ್ವಾಮಿ ಈ ನಿನ್ನ ಕೆಲಸವನ್ನೇ
ಗೊನೆಗೊಳಿಸಲೆಂದು ಜಡಜಲಧಿತಳಕೆ ಮುಟ್ಟಿದೆನು ಮೂಲವನ್ನೇ
ಸುಳ್ಳನ್ನು ಮತ್ತೆ ಅಜ್ಞಾನನರಕ ಬೆರಳೊತ್ತಿ ಮುಟ್ಟಿಬಿಟ್ಟೆ
ಗಾಢಾಂಧಕಾರ ವಿಸ್ಮೃತಿಯ ಪರಮಗುಹೆಯಲ್ಲಿ ಪಾದವಿಟ್ಟೆ

ನಿನ್ನ ನೆನೆವು ನನ್ನೆದೆಯೊಳಿತ್ತದರ ಕರೆಯೆ ಹಾರಿ ಸಾರಿ
ನಿನ್ನತ್ತ ಬಂತು; ಹಾ ದೊರೆಯೆ ಎತ್ತೆತ್ತು ನಿನ್ನ ವೈರಿ
ಜಯಮತ್ತರಂತೆ ತೋರುತ್ತಲಿಹರು ಜಗದೊಡೆಯನೀಗ ಸತ್ಯ
ನೀನಿರದ ಬಾಳು ಅದು ಒಂದು ಸಾವು ಅದು ನರಕ ನಿತ್ಯನಿತ್ಯ

ಆಸೆಯನ್ನು ತಳ್ಳಿ ಸಂಶಯವೆ ಪಟ್ಟವನ್ನು ಕಟ್ಟಿಕೊಂಡು ಮತ್ತೆ
ಹುಸಿಬಂಡು ಪುಂಡು ಶರಣತೆಯ ನೂಕಿ, ನಂಬುಗೆಯ ತೀರಹತ್ತಿ
ಉಪಕಾರ ಸ್ಮೃತಿಯು ಹುಟ್ಟಿಲ್ಲವಿನ್ನು ಕಗ್ಗುರುಡು ಕಾಮ
ಕೊಲೆಗಡಕ ಬುದ್ದಿ ಬರುತಿಹುದು ನೋಡ ದುರ್ಬಲದ ತಪ್ಪಹೊಂದಿ

ಆ ನಿನ್ನ ಮಧುರತಮ ಪ್ರೇಮಧರ್ಮ ಬಾಯ್ಗಟ್ಟಿ ಉಸಿರುಗಟ್ಟಿ
ಉಮ್ಮಳಿಸುತಿಹುದು ಹಾ ದೊರೆಯೆ ನೀನೆ ಆಪಗೆಯ ಪಟ್ಟಗಟ್ಟಿ;
ಬಿಡುವಿಯೇನು? ಆ ಅನೃತವನ್ನು ಆ ವಿಕೃತಿಯನ್ನು ಮತ್ತೆ,
ಸಂತಾಪ ತಾಪ ಸಂತತಿಯನೆಲ್ಲ ಆ ಮಹಾವಿಜಯದತ್ತೆ.

ಹಾ ದೊರೆಯೆ ಆಜ್ಞೆಯನು ಕೊಟ್ಟು ನೋಡು ಕಟ್ಟಿಟ್ಟ ವಿಜಯವಹುದು
ನಾ ಬಲ್ಲೆ, ನಮಗೆ ಯೋಗ್ಯತೆಯು ಇಲ್ಲ ಜಗ ಸಿದ್ಧವಿಲ್ಲ; ಅಹುದು
ಕಡುಕಟ್ಟಿ ನಂಬುಗೆಯ ತುಟ್ಟತುದಿಯ ಮುಟ್ಟೊಮ್ಮೆ ಕೂಗಿಕೊಳುವೆ,
ದೊರೆ ಹೈ ಹಸಾದ ಜಗ ರಕ್ಷಿಸಯ್ಯ ಅದು ನಿನ್ನ ಅರುಳಿನಳವೆ.

ಇದು ಏನೆ ಇರಲಿ, ಇದು ಹೇಗು ಇರಲಿ, ತೋರಯ್ಯ ಕರುಣೆದೋರು.
ಉದ್ದಾರವಹುದು ಜಗವಮೃತವಹುದು ಭವಜಲಧಿ ದಾಟಿ ಪಾರು.
ಪಾತಾಳದಿಂದ ಎದೆಯಾಳದಿಂದ ಜೀವಾಳದಿಂದ ಒಂದು
ನಿನ್ನತ್ತ ನುಗ್ಗಿ ಹೊರಹೊಮ್ಮಿ ಹಿಗ್ಗಿ ಪ್ರಾರ್ಥನೆಯು ತಾನೆ ಬಂದು

ನಿನ್ನನ್ನು ಕಂಡೆ ಕಡುಕಾಂತಿಯಲ್ಲಿ ನೀನಾಗ ನನಗೆ ಅಂದೆ
ಎದೆಗೆಡಿಸಿಕೊಳ್ಳದಿರು, ಧೀರಳಾಗು, ಇಗೊ ನಂಬು ಬಂದೆಬಂದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...